26.1.07

ಸಂಭ್ರಮ, ಶಾಂತಿ ಇರಲಿ ಎಂದೆಂದೂ

ಒಂದಷ್ಟು ಸಂಭ್ರಮ...ಆಚರಣೆ...ದೇಶದ ವರ್ಣರಂಜಿತ ಪರಂಪರೆಯನ್ನೇ ಧುತ್ತನೆ ತೆರೆದಿಡುವ ರಾಜಪಥದ ಪಥಸಂಚಲನ...ಶಿಸ್ತುಬದ್ಧವಾಗಿ ಕದಂ ಕದಂ ಬಢಾಯೆ ಜಾ...ಎಂಬಂತೆ ಹೆಜ್ಜೆಗೆ ಹೆಜ್ಜೆ ಹಾಕುತ್ತಾ ಹೋಗುವ ಯೋಧರು...ನಮ್ಮ ಹೆಮ್ಮೆಯ ಕ್ಷಿಪಣಿಗಳು...ಯುದ್ಧ ಟ್ಯಾಂಕ್‌ಗಳು... ಇವನ್ನೆಲ್ಲಾ ನೋಡುತ್ತಿದ್ದರೆ ಯಾವುದೇ ದೇಶಪ್ರೇಮಿಗೂ ಗಂಟಲು ಕಟ್ಟಿದಂತೆ....ಕಣ್ಣು ತೇವಗೊಂಡಂತೆ ಆಗದಿರದು....
ಮತ್ತೊಮ್ಮೆ ಭಾರತೀಯರನ್ನು ಸಂಭ್ರಮದಲ್ಲಿ ಪುಳಕಿತಗೊಳಿಸಿ ಹೋಗಿದೆ ೫೮ನೇ ಗಣರಾಜ್ಯೋತ್ಸವ. ಅಷ್ಟೇ ಪ್ರಶ್ನೆಗಳನ್ನೂ ಎಬ್ಬಿಸಿಹೋಗಿದೆ.
ಕಾಶ್ಮೀರದ ಕಣಿವೆಗಳಲ್ಲಷ್ಟೇ ಬೊಬ್ಬಿರಿಯುತ್ತಿದ್ದ ಭಯೋತ್ಪಾದಕರೀಗ ಸಾರಾಸಗಟಾಗಿ ತಣ್ಣನೆ ನಗರ ಬೆಂಗಳೂರಿನಲ್ಲೂ ಎ.ಕೆ.೫೬ ಝಳಪಿಸತೊಡಗಿದ್ದಾರೆ. ನಮ್ಮವರೇ ಎನ್ನ್ಗಿಸಿಕೊಂಡವರೂ ಬೆನ್ನಿಗೆ ಚೂರಿ ಹಾಕುವ ಪರಿಸ್ಥಿತಿ. ನಮ್ಮ ನಡುವೆಯೇ ಇದ್ದು ತರಕಾರಿ ಮಾರುತ್ತಿರುವನನ್ನೂ ನಂಬುವ ಹಾಗಿಲ್ಲ! ಹಾಗಾಗಿಯೇ ತಾನೇ ಇಮ್ರಾನ್ ಹಂಪಿಯಲ್ಲಿ ಮಸಲತ್ತು ಹೂಡಿದ್ದು?
ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿದ್ದ ಮಂಗಳೂರಿನಲ್ಲೂ ಕೋಮುಗಲಭೆಯ ಹೊಗೆ ಆರುವುದಕ್ಕೇ ಕೇಳುತ್ತಿಲ್ಲ.
ಇದೀಗ ಮತ್ತೆ ಸಾಲು ಸಾಲಾಗಿ ರಾಜ್ಯದಲ್ಲಿಡೀ ಹಿಂದೂ ಸಮಾಜೋತ್ಸವಗಳು ನಡೆಯುತ್ತಿವೆ. ಮಂಗಳೂರಿನಲ್ಲಂತೂ ವಿರಾಟ್ ಸಮಾಜೋತ್ಸವ ೨೮ ಜನವರಿಗೆ ನಡೆಯುತ್ತದೆ. ಈ ಬಾರಿ ಹಿಂದೂ ಸಮಾಜದಲ್ಲಿರುವ ಅಸ್ಪ್ರಶ್ಯತೆ ಹೋಗಲಾಡಿಸುವ ಸಂದೇಶ ನೀಡುತ್ತೇವೆ ಎಂಬ ಹೇಳಿಕೆಗಳೂ ಮುಖಂಡರಿಂದ ಬರುತ್ತಿವೆ. ಹಿಂದೂ ಸಮಾಜೋತ್ಸವದ ಶರಬತ್ತಿಗೆ ಮುಸ್ಲಿಮ್ ವರ್ತಕರು ಸಕ್ಕರೆ ನೀಡುವುದಾಗಿ ಅವರೇ ಹೇಳಿದ್ದಾರೆ!
ಇಂತಹದ್ದೊಂದು ನಿರ್ಣಯ ಗಣರಾಜ್ಯ ದಿನದಂದು ಬಂದಿರುವುದೇ ವಿಶೇಷ. ದ್ವೇಷ ಅಳಿಯಲಿ....ಎಲ್ಲರೂ ಒಂದೆಂಬ ಭಾವನೆ ರೂಪುಪಡೆಯಲಿ ಎಂಬ ಸಣ್ಣ ಹಾರೈಕೆ ನಿಮ್ಮಿಂದಲೂ ಇರಲಿ!

ನಿಮ್ಮ ತಾಳ್ಮೆಗೆ ಹ್ಯಾಟ್ಸಾಫ್, ಗಣರಾಜ್ಯೋತ್ಸವದ ಶುಭಹಾರೈಕೆ ತಡವಾಗಿ!

2 comments:

ರಾಧಾಕೃಷ್ಣ ಆನೆಗುಂಡಿ. said...

ಮಂಗಳೂರಿನಿದಷ್ಟು ದಿನ ಕೆಲಸ ಇಷ್ಟ್ವವಾಗಿದ್ದರೂ ದನ ಹಿಡಿದರು, ಕಡಿದರು ಅನ್ನುವುದನ್ನು ಬರೆದು ಬರೆದು ಬೇಸರವಾಗಿತ್ತು.
ನಾಳೆ ನನ್ನ ಹೊಟ್ಟಿಗೆ ಏನು ಅನ್ನುವುದಕ್ಕಿಂದ ಯಾರಿಗೆ ಇರಿಯುತ್ತಾರೋಮ್ ಕಡಿಯುತ್ತರೋ ಅನ್ನುವ ಆತಂಕವಿತ್ತು. ಸಂಜೆವಾಣಿಯ ಸುದ್ದಿ ಶೈಲಿ, ಅಕ್ಷರ ಬದಲಾಗಬಹುದು, ಆದರೆ ಸಂರ್ಘಷ ಮಾತ್ರ ನಿರಂತರ.
ನನ್ನ ಪ್ರೀತಿ ಪಾತ್ರರೊಬ್ಬರು ದಿನಾ ಹೇಳುತ್ತಾರೆ ಸಂರ್ಘಷ ಇರಬೇಕಂತೆ ಅದು postive ಆಗಿರಬೇಕು ಅಂತಾ....
ಮಂಗಳೂರು ಹಾಗಲ್ಲ ಜನತೆ ಹಿತ ಕಾಪಾಡಬೇಕಾದ ಮಂದಿ ಸಮಾಜೋತ್ಸವದಲ್ಲಿ ಭಾಗವಹಿಸುತ್ತಾರೆ.ಸೋತರೂ ಕಾರ್ಯಕ್ರಮದಲ್ಲಿ ತೂಕಡಿಸುವ ಆನೆ ಗಾತ್ರದ ಮಾಜಿಗಳು ತಮ್ಮ ಧರ್ಮವನ್ನೇ ಮರೆತ್ತಿದ್ದಾರೆ....... ಹೀಗಿರುವಾಗ ಕನಸುಗಳು ಕನಸುಗಳಾಗಿಯೇ ಇರುತ್ತದೆ.
ಸಕ್ಕರೆ ಕೊಟ್ಟ ತಕ್ಷಣ ಕಾರ್ಯಕ್ರಮದ ಬಳಿಕ ಆಗುವ ಹಿಂಸೆ ತಡೆಯಲು ಸಾಧ್ಯವಿಲ್ಲ.......
ಅದಕ್ಕಾಗಿ ..........

ಆಯ್ಕೆಯಾಗಬೇಕಾದವರನ್ನು ಆಯ್ಕೆ ಮಾಡಿ ಕನಸುಗಳಾದರೂ ಈಡೇರುತ್ತದೆ.

Shiv said...

ವೇಣು,

ಹೌದಲ್ಲವಾ...ನೋಡುನೋಡುತ್ತಲೇ ಮತ್ತೊಂದು ಗಣತಂತ್ರ ದಿವಸ ಬಂದಿದೆ, ಮತ್ತೊಂದು ರಾಜಪಥದ ಪಥಸಂಚಲನ...

ನೀವು ಹೇಳಿದ ಹಾಗೆ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿ ಉಳಿಯುತ್ತೆ..ದೇಶವಿಭಜನೆ ಕಾಲದಲ್ಲಿ ನಡೆದ ಜಾತಿಹಿಂಸೆಯನ್ನು ನೆನಪು ಮಾಡಿಕೊಡುವ ಕೋಮುಗಲಭೆಗಳು ,ಅದರ ಬೆಂಕಿಯಲ್ಲಿ ಮೈಕಾಯಿಸಿಕೊಳ್ಳುವ ಪುಂಡರು-ಕುರ್ಚಿಧಣಿಗಳು, ಉಗ್ರವಾದವನ್ನು ನಮ್ಮ ಹಿತ್ತಲಿಗೆ ತಂದು ಬಿಟ್ಟಿರುವ ನಮ್ಮ ನಡುವಿನ ಜನ, ಕುರ್ಚಿಯನ್ನು ಹೇಗೆ ಹಂಚಿಕೊಳ್ಳಬೇಕೆಂದು ಯೋಚಿಸುವಷ್ಟರಲ್ಲೇ ತಮ್ಮ ಕಾಲ ಕಳೆಯುವ ಸಮಿಶ್ರ ಸರ್ಕಾರಗಳು...

ಇವೆಲ್ಲದವುಗಳ ನಡುವೆ ದೇಶ, ದೇಶದ ಪ್ರಗತಿ, ಶ್ರೀ ಸಾಮಾನ್ಯ..ಎಲ್ಲಿದ್ದಾರೆ..

ಅದರೂ ಪರಿಸ್ಥಿತಿ ಅಷ್ಟೇನೂ ಕೆಟ್ಟಿಲ್ಲ ಅನಿಸುತ್ತೆ..

ಶುಭ ಗಣತಂತ್ರದಿವಸ

ಜೈ ಹಿಂದ್!

Related Posts Plugin for WordPress, Blogger...