14.12.07

ಬಸ್, ರೇಡಿಯೋ ಹಾಗೂ ಕನ್ನಡ....

ಮಂಗಳೂರಿನ ಸಿಟಿ ಬಸ್‌ ಒಂದರಲ್ಲಿ ಪ್ರಯಾಣ ಮಾಡುವ ಯೋಗ ಇತ್ತೀಚೆಗೆ ಸಿಕ್ಕಿತು. ಕಚೇರಿಯಿಂದ ರಾತ್ರಿ ಮನೆಗೆ ಬರುತ್ತಿದ್ದೆ.
ಒಳಗೆ ಕಾಲಿಡುತ್ತಿದ್ದರೆ ಸೀಟೆಲ್ಲೂ ಕಾಣಲಿಲ್ಲ...ಆದರೆ ಸಾಕಷ್ಟು ಗಟ್ಟಿಯಾಗೇ ಸ್ಪೀಕರ್‍ನಲ್ಲಿ ಹಾಡು..ಅಣ್ಣಾವ್ರ ದನಿ...ಬೊಂಬೆಯಾಟವಯ್ಯಾ...ಇದು ಬೊಂಬೆಯಾಟವಯ್ಯಾ....

ಅರೆ ಏನಾಯ್ತು ಈ ಸಿಟಿ ಬಸ್‌ನವರಿಗೆ ಎಂದುಕೊಂಡೆ. ಯಾಕೆಂದರೆ ಯಾವಾಗಲೂ ಸಿಡಿ ಸಂಗೀತ ಅದರಲ್ಲೂ ಹೆಚ್ಚಾಗಿ ಹಿಂದಿ ಗೀತೆಗಳು ಅದರಲ್ಲೂ ಅಬ್ಬರದ ಸಂಗೀತವನ್ನೇ ಹಾಕಿಕೊಂಡು ಪ್ರಯಾಣಿಕರಿಗೆ ಶಿಕ್ಷೆ ಕೊಡುವ ಇವರಿಗೆ ಇಂದೇನಾಯಿತು ಅನ್ನೋದೇ ನಂಗೆ ಅಚ್ಚರಿ.

ಹಾಡು ಮುಗೀತು...ನೋಡಿದರೆ ಅದು ಎಫ್ ಎಂ ಮಿರ್ಚಿ ರೇಡಿಯೋ. ಮೂರು ವರ್ಷ ಮೊದಲೇ ಮಂಗಳೂರು ಆಕಾಶವಾಣಿ ಎಫ್ ಎಂ ಆಗಿದ್ದರೂ ಎಫ್‌ಎಂ ಇಲ್ಲಿ ಉಂಟಾ, ಹಾಗಾದ್ರೆ ಹೊಸ ಸಿನಿಮಾ ಗೀತೆ ಯಾಕಿಲ್ಲ ಎಂದು ಪ್ರಶ್ನೆ ಹಾಕುತ್ತಿದ್ದವರೇ ಜಾಸ್ತಿ. ಬಸ್‌ನವರು, ಅಂಗಡಿಯವರು, ರಿಕ್ಷಾ ಚಾಲಕರು, ಹೋಟೆಲ್‌ ಮಾಲಕರು, ಪೆಟ್ರೋಲ್ ಬಂಕ್‌ನವರು ಎಲ್ಲರೂ ಈಗ ಎಫ್ ಎಂ ಹಚ್ಚಿಕೊಂಡಿದ್ದಾರೆ ಬೆಂಗಳೂರಿನವರಂತೆ. ಮೊನ್ನೆ ಮೊನ್ನೆ ಎಂದರೆ ನವಂಬರ್‍ ಕೊನೆಯ ವಾರದಲ್ಲಿ ರೇಡಿಯೋ ಮಿರ್ಚಿ ಕುಡ್ಲದಲ್ಲಿ ಗುನುಗುಟ್ಟಿದರೆ, ಒಂದು ವಾರದಲ್ಲಿ ಬಿಗ್ ಎಫ್‌ಎಂ ಕೂಡಾ ಬಂದಿದೆ. ಇನ್ನೂ ಎರಡು ಸ್ಟೇಷನ್‌ಗಳು ಬರಲಿವೆ ಎಂಬ ಮಾಹಿತಿಯೂ ಇದೆ.

ಅದೇನೆ ಇರಲಿ ಬಸ್‌ನಲ್ಲಿ ಬರುತ್ತಿದ್ದ ನನಗೆ ಬಸ್‌ನವರ ಬದಲಾದ ಧೋರಣೆ ನೋಡಿ ತುಸು ವಿಚಿತ್ರ ಎನಿಸಿತು. ರೇಡಿಯೋದಲ್ಲೊಂದು ಜಿಂಗಲ್ ಬಂತು. ಪಜಿ ಮುಂಚಿ ಖಾರ ಜಾಸ್ತಿ, ರೇಡಿಯೊ ಮಿರ್ಚಿ ಕೇಂಡ ದಾಲ ಬೋಚಿ!(ಹಸಿ ಮೆಣಸು ಖಾರ ಹೆಚ್ಚು, ರೇಡಿಯೊ ಮಿರ್ಚಿ ಕೇಳಿದ್ರೆ ಬೇರೇನೂ ಬೇಡ.). ಬಸ್‌ನ ಚಾಲಕ ಸೇರಿದ ಹಾಗೆ ಮುಂದಿನ ಸೀಟ್ನಲ್ಲಿದ್ದ ನಾಲ್ವರು ಯುವಕರು ಜೋರಾಗಿ ನಕ್ಕರೆ, ಮಧ್ಯೆ ಸೀಟನಲ್ಲಿದ್ದ ಮಧ್ಯವಯಸ್ಕ ಮುಸುಮುಸು ನಕ್ಕ.

ರೇಡಿಯೋ ಮಿರ್ಚಿಯಲ್ಲಿ ಮಿತ್ರ, ಆರ್‌ಜೆ ಅಜೇಯ ಸಿಂಹನ ಗ್ರಾಮೊಫೋನ್‌ ಕಾರ್ಯಕ್ರಮದಲ್ಲಿ ಆತನ ಗಂಭೀರ ಕಂಠದ ನಿರೂಪಣೆ ಇಷ್ಟವಾಗುವಂತಿತ್ತು. ಮತ್ತೆ ಕೇಳಿದ್ದು ಆಪ್ತವಾಗುವ ಸ್ವರ ಎಸ್‌ ಜಾನಕಿಯದ್ದು. ಬಸ್‌ನ ಅನೇಕ ಪ್ರಯಾಣಿಕರು ತಾಳ ಹಾಕುತ್ತಿದ್ದರು.

ನಿಜ. ನಮಗೆ ಹೊಸದೇ ಆಗಬೇಕು ಎಂದೇನಿಲ್ಲ. ಕೇವಲ ಅಬ್ಬರ, ಅತಿ ಉತ್ಸಾಹಗಳೆಲ್ಲಾ ಅನೇಕ ಬಾರಿ ತೋರಿಕೆಯದ್ದೇ ಆಗಿರುತ್ತದೆ. ಇಂಪಾದ,ಎವರ್ ಗ್ರೀನ್ ಹಾಡುಗಳಿಗೆ ಕೇಳುವ ಕಿವಿಗಳು ಎಂದೂ ಇರುತ್ತವೆ. ಕೊಡುವ ವಿಧಾನದಲ್ಲಿ ಒಂದಿಷ್ಟು ಹೊಸತನ, ಇದು ನಮ್ಮದು ಎನ್ನುವ ಆಪ್ತತೆ ಕೊಡಬಲ್ಲದು.

ಆರ್‍ಜೆಗಳ ಹೊಸತನದ ನಿರೂಪಣೆ, ಹೆಚ್ಚು ತಲೆಸಿಡಿಸದೆ, ಕೂಡಲೇ ಹಾಡು ಪ್ರಸ್ತುತ ಪಡಿಸುವ ವಿಧಾನ ಕೇಳುಗರನ್ನು ಹಿಡಿದಿಡಬಲ್ಲದು. ಆಕಾಶವಾಣಿ ಇನ್ನೂ ಸಾಂಪ್ರದಾಯಿಕತೆ ಬಿಡದಿರುವುದು ಅದನ್ನು ಈಗಿನವರ ಹತ್ತಿರ ಕರೆದೊಯ್ಯಲು ಕಷ್ಟವಾಗಬಹುದೇನೋ. ಆದರೂ ಮಾಹಿತಿ, ವಾರ್ತೆ ನೀಡಬಲ್ಲ ಏಕಮೇವತೆ ಆಕಾಶವಾಣಿಗೆ ಬೇಡಿಕೆಯನ್ನು ಇನ್ನೂ ಉಳಿಸಿಕೊಡಬಲ್ಲದು.

ಮಿರ್ಚಿ ತನ್ನ ಲವಲವಿಕೆಯಿಂದ ಮನಸೆಳೆದರೆ, ಬಿಗ್ ಎಫ್‌ ಎಂ ಆಧುನಿಕತೆಗೆ ಒಂದಷ್ಟು ಸಾಂಪ್ರದಾಯಿಕತೆ, ‘ಲವ್‌ ಮಾಡಿನೋಡು’ ಮುಂತಾದ ಭಾವುಕತೆ ಲೇಪ ತುಂಬಿದ ಕಾರ್ಯಕ್ರಮಗಳ ಮೂಲಕ ಹೃದಯಕ್ಕೆ ಹತ್ತಿರವಾಗುತ್ತಿದೆ.

ವಿಶೇಷ ಎಂದರೆ ಈ ಬಾರಿ ಕನ್ನಡ ಹಾಡುಗಳೇ ಎಲ್ಲೆಡೆ ಮಿಂಚುತ್ತಿವೆ. ಮುಂಗಾರು ಮಳೆ ಭೋರ್ಗರೆದ ಬಳಿಕ ಸಾಲು ಸಾಲಾಗಿ ಅರ್ಥಪೂರ್ಣ ಸಾಹಿತ್ಯ, ಇಂಪಾದ ಸಂಗೀತ ಕನ್ನಡಕ್ಕೀಗ ಆಕರ್ಷಣೆ ಕೊಟ್ಟಿದೆ, ಯು ನೋ ಕನ್ನಡ ಸಾಂಗ್ಸ್ ಆರ್‍ ಮೆಲೋಡಿಯಸ್ ಎಂದು ನಮ್ಮ ಆಂಗ್ಲ ಕನ್ನಡಿಗರೂ ಹೇಳತೊಡಗಿದ್ದಾರೆ.

ಈಗ ರೇಡಿಯೋದ ಮೂಲಕ ನಮ್ಮ ಎವರ್‍ ಗ್ರೀನ್ ಗೀತೆಗಳು, ಹೊಸ, ಭರವಸೆಯ ಹಾಡುಗಳೂ ಹರಿದು ಬರಲಿ. ಕನ್ನಡ ಉಳಿಯುವುದು ಮಾತ್ರವಲ್ಲ ಭರವಸೆಯ ಪ್ರಗತಿಸಾಧಿಸಲಿ...ನೀವೇನಂತೀರಿ?

4 comments:

veena said...

ಸೋ... ನೀವೆಲ್ಲಾ ಸಕತ್ತ್ ಖುಷಿಯಾಗಿದ್ದೀರಾ. ಮಂಗಳೂರಿನಲ್ಲಿ ಇನ್ನು ಮುಂದೆ ಟಿವಿ ಮೂಲೆಗುಂಪಾಗುವ ಸಾಧ್ಯತೆ ಇದೆ ಅಂತಿರಾ?

VENU VINOD said...

ಖುಷಿ..ನಾವೆಲ್ಲ?! ಗೊತ್ತಿಲ್ಲ...
ಮೀಡಿಯಾ ಕ್ಲಾಸಲ್ಲಿ ಕಲಿತಿದ್ರಲ್ಲ...ಯಾವ ಮಾಧ್ಯಮವೂ ಮೂಲೆಗುಂಪಾಗದು ಅಂತ :)
...ಅದ್ರಲ್ಲೂ ಖಾಸಗಿ ರೇಡಿಯೋ ಬಂದಕೂಡ್ಲೇ ದೊಡ್ಡ ಬದಲಾವಣೆ ಆಗದು ಎನ್ನುವುದು ನನ್ನ ಲೆಕ್ಕಾಚಾರ

mouna said...

howdu, ittichige kannadaalli oLLe haaDugaLu baruthive.

that's really good, m'lorenalli 2 private radio stations, with 2 more ocming in, as u say. nange b'lorenalli radio keLi abhyasavagiddu, mysurinalli, yaava OLLe haaDugaLaNNu haakodilla. adu bejaru. m'lore is better than mysuru in this aspect! u're lucky!!!

Shreenidhi Odilnala said...

very fine blog. all the best...

Related Posts Plugin for WordPress, Blogger...