28.4.09

ಮತ ಭಾರತ - ಮಹಾ ಭಾರತ !

ನಮ್ಮ ರಾಜ್ಯದಲ್ಲಿ ನಿರಂತರ ಎರಡನೇ ಬಾರಿಗೆ ನಡೆಯುತ್ತಿರುವ ಪ್ರಕ್ರಿಯೆ ಇದು . ಕಳೆದ ವರ್ಷವಷ್ಟೇ ರಾಜ್ಯ ವಿಧಾನಸಭೆ ಚುನಾವಣೆ ಮುಗಿಸಿದವರು ನಾವು. ನಾಡಿದ್ದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ. ದಕ್ಷಿಣ ಕನ್ನಡದ ಅಲ್ಲಿಂದಿಲ್ಲಿಂದ ಪ್ರಚಾರ, ಅದಕ್ಕೆ ಸಿಕ್ಕೋ ಮತದಾರ ಬಾಂಧವನ ಸ್ಪಂದನದ ವರದಿ ನೋಡುವಾಗಲೇ ಏಕೋ ಈ ಬಾರಿ ಸಪ್ಪೆ ಅನ್ನಿಸುತ್ತಿತ್ತು. ಮೊದಲ ಹಂತದ ಚುನಾವಣೆ ಮುಗಿದದ್ದು ಏಪ್ರಿಲ್ 23ರಂದು. ಮತದಾನದ ಶೇಕಡಾವಾರು ನೋಡಿದರೆ ಶೇ.೫೭. ಅದರಲ್ಲೂ ಬೆಂಗಳೂರಿನಂತಹ ನಗರದಲ್ಲಿ ಶೆ.೪೫ರ ಆಜುಬಾಜಿನಲ್ಲಷ್ಟೇ ಮತದಾನವಾಗಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಾದಷ್ಟೂ ಮತದಾನ ಹೆಚ್ಚಾಗಬೇಕಿತ್ತು. ಆದರೆ ಇಲ್ಲಿ ವ್ಯತಿರಿಕ್ತ. ನೆರೆಯ ಕೇರಳ ರಾಜ್ಯದಲ್ಲಿ ಶೆ.೭೩ರಷ್ಟು ಮತದಾನವಾಗಿದೆ. ಆ ಮೂಲಕ ೨೦೦೪ರ ಚುನಾವಣೆಯಲ್ಲಿನ ಶೇ.೭೧ರ ದಾಖಲೆಯನ್ನು ಅದೇ ರಾಜ್ಯ ಹಿಂದಿಕ್ಕಿತು.
ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಪ್ರಚಾರವನ್ನು ಚುನಾವಣೆಗೆ ಕೊಡಲಾಗಿತ್ತು. ಎಲ್ಲಾ ಮಾಧ್ಯಮಗಳೂ ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಪವಿತ್ರ ಕಾರ್ಯ, ಆದರೆ ಮತ ಮಾರಿಕೊಳ್ಳಬಾರದು ಎಂಬ ಅಂಶವನ್ನು ಪದೇ ಪದೇ ಹಾಳುತ್ತಾ ಬಂದಿವೆ. ಆದರೂ ಮತದಾನದ ದಿನ ಮಾತ್ರ ನಮ್ಮಲ್ಲಿ ಮಾತ್ರ ಯಾಕೀ ನಿರಾಸಕ್ತಿ.
ಮತದಾರರನ್ನೇ ಕೇಳಿದರೆ, ಅಯ್ಯೋ ಎಲ್ಲಾರೂ ಒಂದೇನೇ. ಅವರನ್ನು ಆರಿಸಿ ತಪ್ಪು ಮಾಡೋದು ಯಾಕೆ ಎಂಬಂತಹ ಜನರಲೈಸ್ಡ್ ಉತ್ತರ ಸಿಗುತ್ತವೆ. ಇಷ್ಟು ಸಲ ಮತದಾನ ಮಾಡಿದ್ದೇವೆ, ಏನೂ ಅಭಿವೃದ್ಧಿ ಆಗಿಲ್ಲ ಎಂಬ ಸಿನಿಕ ಹೇಳಿಕೆಗಳೂ ಸಿಗುತ್ತವೆ.
ಹಾಗೆ ನೋಡಿದರೆ ಚುನಾವಣಾ ಆಯೋಗದ ಕಠಿಣ ಕ್ರಮಗಳಿಂದಾಗಿ ಈಗೀಗ ಚುನಾವಣೆ ಅನ್ನಿಸುವುದೇ ಇಲ್ಲ. ನಾನು ಸಣ್ಣವನಿದ್ದಾಗ ಪಾರ್ಟಿಯೊಂದರ ಕಾರ್ಯಕರ್ತರೊಂದಿಗೆ ರಾತ್ರಿ ರಸ್ತೆಯಲ್ಲಿ ಸುಣ್ಣ ಬಳಸಿ ----ಪಕ್ಷಕ್ಕೆ ಮತ ದೇಶಕ್ಕೆ ಹಿತ, ಮುಂತಾದ ಘೋಷಣೆ ಬರೆಯಲು ಹೋಗುತ್ತಿದ್ದೆ. ಜೀಪ್‌ಗಳಲ್ಲಿ ರಾಗವಾಗಿ ಘೋಷಣೆ ಹೇಳುತ್ತಾ ಮತಯಾಚಿಸುವುದನ್ನು ಕೇಳಲು ಖುಷಿಯಿತ್ತು. ಮನೆಯಲ್ಲಿಯೂ ರಾಜಕೀಯ ಪ್ರಭಾವ ಸಾಕಷ್ಟಿತ್ತು, ಮಾವ ಪಕ್ಷವೊಂದರ ಸಕ್ರಿಯ ಕಾರ್ಯಕರ್ತರಾಗಿದ್ದರು. ಆಗ ಮತದಾನವೆಂದರೆ ಒಂದು ಸಂಭ್ರಮ, ಅದರಲ್ಲಿ ಊರಿಗೆ ಊರೇ ಪಾಲ್ಗೊಳ್ಳುತ್ತಿತ್ತು ಕೂಡಾ.
ಈಗ ಎಲ್ಲೂ ಬ್ಯಾನರ‍್ಗಳಿಲ್ಲ, ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ‍್ ಕೂಡಾ ತೆಗೆಸಲಾಗುತ್ತದೆ! ಬ್ಯಾನರ್‌ಗಳಿಲ್ಲದೆ ನಗರ ಸುಂದರವಾಗಿ ಕಾಣುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆಯೋಗದ ಕಟ್ಟುನಿಟ್ಟಿನ ಕ್ರಮವಿರುವುದೇನೋ ನಿಜ, ಆದರೆ ಜನರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿದಂತೆ ಕೂಡಾ ಗೋಚರಿಸುತ್ತದೆ. ಹಾಗಾಗಿಯೇ ಅಲ್ಲಿಂದಿಲ್ಲಿಂದ ಚುನಾವಣಾ ಬಹಿಷ್ಕಾರದ ಮಾತುಗಳು ಕೇಳಿಬರುತ್ತವೆ.
ಕಾರಣ ಹೀಗಿರಬಹುದೇ?
ಇದರಲ್ಲಿ ಎಲ್ಲಾ ಪಕ್ಷದವರ, ಸರ್ಕಾರಗಳ ಪಾಲೂ ಇದೆ. ಅನೇಕ ದಶಕಗಳಿಂದ ಸರಿಯಾದ ರಸ್ತೆ ಇಲ್ಲದಿರುವ, ಸಂಪರ್ಕಕ್ಕೆ ಸೇತುವೆ ಇಲ್ಲದ, ಮಳೆಗಾಲದಲ್ಲಿ ದ್ವೀಪವಾಗುವ ಊರುಗಳು ಇನ್ನೂ ನಮ್ಮಲ್ಲಿವೆ. ಇಂತಹ ಕಡೆಗಳ ಜನ ಮತ ಹಾಕಿದರೂ ತಮಗೇನೂ ಲಾಭವಿಲ್ಲದಿರುವಾಗ ಹೋಗಿ ಏನು ಪ್ರಯೋಜನ ಎಂದು ತಿಳಿದುಕೊಳ್ಳುವುದು ಸಹಜ.
ಪಕ್ಷಗಳ ನಾಯಕರು ಪರಸ್ಪರ ಕೆಸರೆರಚುವುದು, ಕೈ ಕತ್ತರಿಸುವ, ತಲೆ ಕಡಿಯುವ, ತಿಥಿ ಮಾಡುವಂತಹ ಕೀಳು ಮಟ್ಟದ ಹೇಳಿಕೆ ನೀಡುವುದು ಇವೆಲ್ಲಾ ಈಗೀಗ ಹೆಚ್ಚಿರುವುದು ಜನರ ಸಿನಿಕತನ ಹೆಚ್ಚಲು ಕಾರಣ ಅನಿಸುತ್ತದೆ. ಜಿಲ್ಲೆಯ ಹಿರಿಯರೊಬ್ಬರಲ್ಲಿ ಈಚೆಗೆ ಚುನಾವಣೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದೆ. ಹಿಂದಿನ ವೈಭವದ ಬಗ್ಗೆ ಅವರೂ ಹೇಳಿಕೊಂಡರು. ಹಿಂದೆ ವ್ಯಕ್ತಿಯೊಬ್ಬನ ವೈಯಕ್ತಿಕ ಚಾರಿತ್ಯ್ರ ಆತನಿಗೆ ಪಕ್ಷದ ಟಿಕೆಟ್ ದೊರಕಿಸಿಕೊಡುತ್ತಿತ್ತು. ಅಂದು ನಾಯಕರ ಭಾಷಣಗಳನ್ನು ಕುಳಿತುಕೊಂಡು ಕೇಳುವಂತಿತ್ತು. ಈಗ ವೈಯಕ್ತಿಕ ತೇಜೋವಧೆ ಮಾಡುವುದೇ ಭಾಷಣ ಎಂಬಂತಾಗಿದೆ. ನಮ್ಮ ಹಕ್ಕು ಎಂದು ಮಾತ್ರ ಮತದಾನ ಮಾಡಬೇಕೇ ಹೊರತು ನಿಜಕ್ಕೂ ಮತದಾನ ಮಾಡಲು ಆಸಕ್ತಿ ಇಲ್ಲ ಎಂಬುದು ಆ ಹಿರಿಯರ ಅಭಿಪ್ರಾಯವಾಗಿತ್ತು.
ಹಾಗೆಂದರೆ ನಾವು ಇನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರಿಸುವಂತಿಲ್ಲವೇ?
ಹಾಗೆಂದುಕೊಳ್ಳಬೇಕಿಲ್ಲ. ಇನ್ನೂ ಮತದಾನ ವ್ಯವಸ್ಥೆಯಲ್ಲಿ ಬದಲಾವಣೆ ತಂದರೆ(ಇ-ವೋಟಿಂಗ್‌ ಮಾದರಿಯಲ್ಲಿ) ವಿದ್ಯಾವಂತರಿಂದ ಹೆಚ್ಚು ಮತದಾನ ನಿರೀಕ್ಷಿಸಬಹುದು. ಈಗೀಗ ವಿದ್ಯಾವಂತ ಅಭ್ಯರ್ಥಿಗಳೂ ಚುನಾವಣೆಗೆ ಧುಮುಕಿ(ಹಣ ಹೆಂಡದ ಹೊಳೆಯ ನಡುವೆಯೂ) ತಮ್ಮ ಅದೃಷ್ಟ ಪರೀಕ್ಷಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಬೆಳವಣಿಗೆ ಅಲ್ಲೊಂದು ಇಲ್ಲೊಂದು ಇರಬಹುದು, ಆದರೆ ಇದನ್ನು ಮತದಾರರು ಪ್ರೋತ್ಸಾಹಿಸಿದರೆ ಮುಂದೆ ಇಂತಹ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಲೂ ಬಹುದು.
......ನಾಡಿದ್ದು ಎರಡನೇ ಹಂತದ ಮತದಾನ. ಕಳೆದ ಸುಮಾರು ೩೦ ದಿನಗಳಿಂದ ರಜೆಯಿಲ್ಲದ ದುಡಿಮೆ, ಹಾಗಾಗಿ ಬ್ಲಾಗ್ ಅಪ್‌ಡೇಟಾಗಿಲ್ಲ. ಮತಸಮರದ ಅಂತಿಮ ಹಂತದಲ್ಲಿ ಅದೇ ವಿಷಯವನ್ನೇ ಇಲ್ಲಿಯೂ ಇಳಿಸೋಣ ಅನ್ನಿಸಿತ್ತು...ನಿಮ್ಮ ಅಮೂಲ್ಯ ಸಲಹೆ, ಪ್ರತಿಕ್ರಿಯೆ ಇರಲಿ.....

8 comments:

Unknown said...

nice article .. i also remembered my school days election procedures ... :-) :-)

sunaath said...

ನಮ್ಮ ದೇಶವನ್ನು ಲೂಟಿ ಮಾಡಲು ಯಾರನ್ನು ಆರಿಸಬೇಕು ಎನ್ನುವದೇ ಚುನಾವಣೆಯ ಅರ್ಥ. ಮತ ನೀಡಬೇಕೆ?

shivu.k said...

ವೇಣು ವಿನೋದ್,

ಚುನಾವಣೆ ಬಗ್ಗೆ ತುಂಬಾ ಚೆನ್ನಾದ ವಿಶ್ಲೇಷಣೆ. ಅರ್ಥವಂತಿಕೆಯ ಲೇಖನ....

ಚುನಾವಣೆಯಲ್ಲಿ ಯಾರನ್ನು ಆರಿಸಬೇಕು ಅನ್ನುವ ಗೊಂದಲ ನನಗೂ ಇದೆ...

ಧನ್ಯವಾದಗಳು...

Basavaraj.S.Pushpakanda said...

election candidate gala bhaashana kelidre vaakalike barutte..antadralli neevu 30 divasadinda adanne madtidira andre ..ur too great kanri..hane barahake hone yaaru...best of luck for ur future..anda haage naanu vote madidini...!

ಹರೀಶ ಮಾಂಬಾಡಿ said...

hope good candidate wins :)

ಏಕಾಂತ said...

ಅರ್ಥಪೂರ್ಣ ಲೇಖನ. ಬ್ಲಾಗ್ ಚೆನ್ನಾಗಿದೆ. ಅಲೆಯೋದು, ತಿರುಗಾಟ ನನಗೂ ಇಷ್ಟ. ಹೀಗೇ ಬರೆಯುತ್ತಿರಿ.

Rakesh Holla said...

Sariyagi Heliddira...

VENU VINOD said...

rOOpa, Thanks for coming down to this page..keep visiting

ಸುನಾಥರೇ,
ನೀವು ಹೇಳುವುದೇನೋ ಸರಿ..ಆದ್ರೆ ಯಾರಾದ್ರೂ ಸರಿ ವ್ಯವಸ್ಥೆ ಸರಿಪಡಿಸಲೇ ಬೇಕು ತಾನೇ

ಶಿವು...
ಗೊಂದಲಗಳು ಸಹಜ.. ಇದ್ದವರಲ್ಲಿ ಯಾರನ್ನು ಆರಿಸಬೇಕು ಅನ್ನುವುದೇ ನಿಜವಾದ ನಿರ್ಧಾರ

ಬಸವರಾಜ್,
ನೀವು ಮತ ಹಾಕಿರೋದು ಒಳ್ಳೆಯ ವಿಚಾರ :)

ಮಾಂಬಾಡಿ,
ಹೌದು :)

ಏಕಾಂತ...
ನಿಮ್ಮ ಬ್ಲಾಗ್ ಕೂಡಾ ಬಹಳ ಹಿಂದೆಯೇ ನೋಡಿದ್ದೆ, ವಿನ್ಯಾಸ ಚೆನ್ನಾಗಿದೆ..

ಥ್ಯಾಂಕ್ಸ್ ರಾಕೇಶ್

Related Posts Plugin for WordPress, Blogger...