29.7.09

ಮಳೆ ನನಗೆ ಎಲ್ಲವೂ....

ಈ ಮಳೆ ಅನ್ನೋದು...
ನನಗೆ
ನಗು,
ಏಕಾಂತ,
ಪ್ರೇಮಿ,
ಜೋಗುಳ,
ನಿದ್ದೆ,
ಈ ಎಲ್ಲವೂ ಹೌದು...
ಆದರೆ
ನಿನಗೋ
ಅದು
ಬರೀ ಮಳೆ ಅಷ್ಟೇ !


********

ಮಳೆ ಬಂದು
ಹುಲ್ಲು ಚಿಗುರಿದೆ
ಹಕ್ಕಿ ಚಿಲಿಪಿಲಿಗುಟ್ಟಿವೆ
ಹೂದಳಗಳಲ್ಲಿ
ನಕ್ಕಿವೆ ಜಲಬಿಂದು,
ಏನು ಪ್ರಯೋಜನ ಹೇಳು
ಹೂವಿನ
ಸುತ್ತ ದುಂಬಿಯ ಸುಳಿವಿಲ್ಲ!


*********
ರಾತ್ರಿ
ಮಳೆ ಸುರಿದದ್ದಾಗಿದೆ
ಸಿ.ಡಿ ಪ್ಲೇಯರಿನ
ಹಾಡೂ ನಿಂತಿದೆ
ಕಣ್ಣೆವೆಯಲ್ಲಿ ನಿದ್ದೆಯಿಲ್ಲ
ನನ್ನೆದೆಯಲ್ಲಿ ನೀ ಬಂಧಿಯಾಗಲು
ಸಿಡಿಲು ಬಡಿಯಲೇಬೇಕಾ !!

20.7.09

ಬಾಂಜಾರಮಲೆ ಮತ್ತು ಕಲ್ಲರ್ಬಿ ಜಲಪಾತ


ಏನೇನೋ ಕಾರಣಗಳಿಂದ ಈ ವರ್ಷ ಮೆಚ್ಚಿನ ಅಭ್ಯಾಸ ಟ್ರೆಕ್ಕಿಂಗಿನಿಂದ ಅನಿವಾರ್ಯವಾಗಿ ದೂರವುಳಿದಿದ್ದೆ. ನಾವೇ ರಚಿಸಿಕೊಂಡ ಚಾರಣ ತಂಡದ ಬಹುತೇಕ ಹುಡುಗರೂ ಅವರವರ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಂಡ ಕಾರಣ ಆ ತಂಡವೀಗ ಬಹುತೇಕ ಬರ್ಖಾಸ್ತುಗೊಂಡಿದೆ !
ನನ್ನನ್ನು ಮತ್ತೆ ಹಸಿರಿನತ್ತ ಸೆಳೆಯಲು ಸಹಾಯ ಮಾಡಿದ್ದು ಮಿತ್ರ ದಿನೇಶ್ ಹೊಳ್ಳ.
‘ಮಳೆಗಾಲದ ಚಾರಣ ಹಾಕಿದ್ದೇವೆ. ಬಾಂಜಾರಮಲೆ ಮತ್ತು ಕಲ್ಲರ್ಬಿ ಜಲಪಾತಕ್ಕೆ’ ಎಂಬ ಅವರ ಒಂದು ಸಂದೇಶ ಬಂದಾಗಲೇ ರಜೆ ಫಿಕ್ಸ್ ಮಾಡಿಟ್ಟು ಬಿಟ್ಟೆ.
ಚಾರ್ಮಾಡಿಯಲ್ಲಿ ಕೊಟ್ಟಿಗೆಹಾರದತ್ತ ಪ್ರಯಾಣ ಬೆಳೆಸುವಾಗ ಎಡಬದಿಗೆ ಸುಂದರ ಬೆಟ್ಟಗಳೂ, ಬಲಬದಿಗೆ ರುದ್ರರಮಣೀಯ ಕಣಿವೆ ಕೊರಕಲು ಗಮನ ಸೆಳೆಯುತ್ತವೆ. ಈ ಕೊರಕಲಿನ ಕಾಡಿನಲ್ಲಿ ಅನೇಕ ಸುಂದರ ಜಲಪಾತಗಳು ಅಡಗಿಕೊಂಡಿವೆ. ಆದರೆ ಹೆಚ್ಚಿನ ಇಂತಹ ಜಲಪಾತಗಳೂ ಇಲ್ಲಿರುವ ಎಸ್ಟೇಟುಗಳ ಭದ್ರಕೋಟೆಯಲ್ಲಿ ಬಂದಿಯಾಗಿವೆ. ಹಾಗಾಗಿ ಅನಿವಾರ್ಯವಾಗಿ ಅವು ಕೆಲವೇ ಮಂದಿಯ ಕಣ್ಣಿಗೆ ಬೀಳುತ್ತವೆ.
ಅಂತಹುದೇ ಒಂದು ಸುಂದರಿ ಕಲ್ಲರ್ಬಿ ಜಲಪಾತ.
ಬಾಂಜಾರ ಮಲೆಯೆಂಬ ಬೆಟ್ಟದಲ್ಲಿ ಮನೆ ಮಾಡಿಕೊಂಡು ಅನೇಕ ದಶಕಗಳಿಂದಲೇ ಇಲ್ಲಿ ವಾಸಿಸುತ್ತಿದ್ದಾರೆ ಮಲೆಕುಡಿಯ ಜನಾಂಗದ ಮಂದಿ. ಅವರಿರುವುದೂ ಒಂದು ಎಸ್ಟೇಟಿಗಾಗಿ. ಎಸ್ಟೇಟಿನ ಮಂದಿ ಇವರಿಗೂ ಸಾಕಷ್ಟು ಅನುಕೂಲ ಕಲ್ಪಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಸುಮಾರು ೩೪ ಮನೆಗಳು ಇಲ್ಲಿವೆ. ೧೨೦ ಮಂದಿ ಜನರಿದ್ದಾರೆ. ಎಲ್ಲರೂ ಒಂದೇ ಮನೆಯ ಮೂಲದಿಂದ ಬಂದವರೇ.
ಹೆಂಚಿನ ಮನೆ ಬಂದಿದೆ, ವರ್ಷಪೂರ್ತಿ ಹರಿಯುವ ನೀರಿನ ಸೆಲೆ ಇಲ್ಲಿರುವ ಕಾರಣ, ಅದರಿಂದಲೇ ವಿದ್ಯುತ್ ತಯಾರಿಸುವ ವ್ಯವಸ್ಥೆ ಇಲ್ಲಿದೆ, ಕೈತುಂಬಾ ಕೆಲಸ ಎಸ್ಟೇಟಿನಲ್ಲಿದೆ. ಮಕ್ಕಳಿಗೆ ಶಾಲೆ ಮಾತ್ರ ೧೪ ಕಿ.ಮೀ ದೂರದ ಕಕ್ಕಿಂಜೆಗೆ ಹೋಗಬೇಕು. ಅಲ್ಲಿನ ಆಶ್ರಮಶಾಲೆಯಲ್ಲಿ ಉಳಿದುಕೊಂಡು ಮಕ್ಕಳು ಕಲಿಯುತ್ತಾರೆ.



ಈ ಬಾಂಜಾರ ಮಲೆ ಆದಿವಾಸಿಗಳ ಮನೆಗಳ ಎಡೆಯಲ್ಲೇ ಹೋಗಬೇಕು ಕಲ್ಲರ್ಬಿ ಜಲಪಾತ ನೋಡುವುದಕ್ಕೆ. ಕಳೆದ ೧೦-೧೫ ದಿನಗಳಿಂದ ಎಗ್ಗಿಲ್ಲದೇ ಸುರಿಯುತ್ತಿದ್ದ ಮಳೆಯಲ್ಲೂ ನಮ್ಮ ತಂಡದ ಸದಸ್ಯರ ಸಂಖ್ಯೆ ಸರಿಯಾಗಿ ಅರ್ಧಶತಕವಾಗಿತ್ತು! ಬೆಂಗಳೂರಿನಿಂದಲೂ ಮಹಿಳೆಯೊಬ್ಬರು ಚಾರಣಾಸಕ್ತಿಯಿಂದ ಬಂದಿದ್ದರು ಎನ್ನುವುದು ಮತ್ತೊಂದು ವಿಶೇಷ.
ಯೂತ್ ಹಾಸ್ಟೆಲ್‌ನ ಯಾವತ್ತೂ ಬರುವವರ ಜತೆಗೆ ಅನೇಕ ಹೊಸಮುಖಗಳಿದ್ದವು. ಒಂದೇ ದಿನದ ಚಾರಣ ಹಾಗೂ ಹೆಚ್ಚು ನಡೆಯುವುದಕ್ಕಿಲ್ಲ ಎಂಬ ‘ಮಾಹಿತಿ ಸೋರಿಕೆ’ ಆಗಿದ್ದರಿಂದ ಹೀಗಾಗಿತ್ತು! ಏನೇ ಇರಲಿ ಹೊಸಬರು ಸೇರುತ್ತಿದ್ದರೆ ಚಾರಣ ತಂಡವೂ intact ಆಗಿರುತ್ತದೆ.

ಭರ್ಜರಿ ಮಳೆ ನಮ್ಮ ದಾರಿಯುದ್ದಕ್ಕೂ ಸುರಿದು ನೆಲತುಂಬಾ ನೀರು ಮತ್ತು ಜಿಗಣೆ(leech). ಜಿಗಣೆಗಳು ಎಂದಿನಂತೆ ರೇಜಿಗೆ, ಕಿರಿಕಿರಿ ಉಂಟುಮಾಡುತ್ತಲೇ ಇದ್ದವು. ದಾರಿಮಧ್ಯೆ ಭಾರೀ ಸದ್ದಿನೊಂದಿಗೆ ಹೊಳೆಯೊಂದು ಹರಿಯುತ್ತಿತ್ತು, ಅದೇ ನದಿಯೇ ಮುಂದೆ ಕಲ್ಲರ್ಬಿಯಾಗಿ ಧುಮುಕುತ್ತದೆ. ಆ ಸೇತುವೆ ದಾಟಿ ಮುಂದೆ ಹೋದೆವು.


ಬಾಂಜಾರಮಲೆಯಲ್ಲಿ ಮಲೆಕುಡಿಯರು ಅಡಕೆ ತೋಟ ಬೆಳೆಸಿದ್ದಾರೆ. ನಮಗೆ ಜಲಪಾತ ತೋರಿಸಲು ಬಾಂಜಾರಮಲೆಯ ಯುವಕರಾದ ರವೀಂದ್ರ, ಜಗದೀಶ ಮತ್ತು ಹುಡುಗ ವಿಶ್ವನಾಥ ಸೇರಿಕೊಂಡರು. ಮರದಿಂದಲೇ ಮಾಡಿದ ತೂಗುಸೇತುವೆಯಲ್ಲಿ ಹಳ್ಳವೊಂದನ್ನು ದಾಟಿ ಮುಂದುವರಿದೆವು. ಭಾರೀ ಮಳೆಯಾದ್ದರಿಂದ ದಾರಿಯಿಡೀ ಕೊಚ್ಚೆಕೆಸರು. ತೋಟ ಮುಗಿದು ಮತ್ತೆ ಕಾಡಿಗೆ ಕಾಲಿಟ್ಟೆವು. ಕಾಡಿನಲ್ಲಿ ಕಡಿದಾದ ಇಳಿ‘ಜಾರು’ ದಾರಿ. ಮಣ್ಣು ತೀರಾ ಅಂಟಂಟಾಗಿದ್ದ ಕಾರಣ ಚಾರಣಿಗರು ಮೊದಲ ಮಳೆಗೆ ಬೈಕ್ ಸ್ಕಿಡ್ ಆಗುವಂತೆ ಬಿದ್ದು, ಬಳಿಕ ಎದ್ದು ಹೋಗುತ್ತಿದ್ದರು. ಹಲವು ಮಂದಿ ‘ನಮಗೆ ಬಾಂಜಾರಮಲೆಯೇ ಸಾಕು, ಜಲಪಾತ ನೀವೇ ನೋಡಿಬನ್ನಿ’ ಎಂದು ಹಿಂದುಳಿದರು.




ಅಂತು ನಮ್ಮ ದಾರಿತೋರುವವರ ಸಹಾಯದಲ್ಲಿ ಕಾಡಿನ ಬಳ್ಳಿ ಹಿಡಿದು ಭೋರಿಡುವ ಜಲಪಾತದ ಪಾದ ತಲುಪಿದೆವು. ಸರಿಯಾಗಿ ನೋಡುವುದಕ್ಕೂ ಜಲಪಾತದ ಅರ್ಭಟ ಅಡ್ಡಿಯಾಗಿತ್ತು. ಕ್ಯಾಮೆರಾ ಬ್ಯಾಗಲ್ಲಿ ಬೆಚ್ಚಗೆ ಮಲಗಿತ್ತು ತೆಗೆದರೆ ಹಾಳಾದೀತು ಎನ್ನುವ ಭಯ. ಅಷ್ಟು ಜೋರಾಗಿ ನೀರಿನ ಹನಿಗಳು ರಾಚುತ್ತಿದ್ದೆವು. ಕಷ್ಟಪಟ್ಟು ಮೊಬೈಲ್ ಕ್ಯಾಮೆರಾದಲ್ಲೆ ಒಂದೆರಡು ಫೋಟೋ ತೆಗೆದುಬಿಟ್ಟೆ.


ಮತ್ತೆ ಬೀಳುತ್ತ ಏಳುತ್ತಾ ಲಂಬವಾದ ದಾರಿಯಾಲ್ಲಿ ಮೇಲೇರಿ ಬಂದೆವು. ಹೊಟ್ಟೆ ಚುರುಗುಟ್ಟುತ್ತಿತ್ತು, ಗಡಿಯಾರ ನೋಡಿದರೆ ಗಂಟೆ ಆಗಲೇ ೨.೩೦ ! ಬಾಟಲಿ ನೀರು ಖಾಲಿಯಾಗಿತ್ತು, ಬಾಂಜಾರಮಲೆಯ ಮನೆಯೊಂದರಲ್ಲಿ ನೀರು ಕೇಳಿ ಕುಡಿದೆವು. ಅಲ್ಲಿಂದ ಮುಂದುವರಿದು ನಮ್ಮ ಟೆಂಪೋ ಸೇರಿ ತಿಂಡಿ ಖಾಲಿಮಾಡಿ ಮತ್ತೆ ಶುರುವಿಟ್ಟ ಮಳೆಯಲ್ಲಿ ನಮ್ಮ ಮರುಪ್ರಯಾಣ....




14.7.09

ರಾಜಕೀಯ ಮತ್ತು ಏರ‍್ಟೆಲ್ ಜಾಹೀರಾತು

ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ತಪ್ಪಿರುವುದು ಹೌದು, ಬಹುತೇಕ ಸಮಸ್ಯೆಗಳು ರಾಜಕೀಯದಿಂದಾಗಿಯೇ ಹುಟ್ಟಿಕೊಂಡದ್ದೂ ಹೌದು, ಆದರೆ ನಮ್ಮ ಮಾಧ್ಯಮಗಳು ಕೆಟ್ಟ ರಾಜಕೀಯ ವ್ಯವಸ್ಥೆಯನ್ನೇ ತೋರಿಸಬೇಕೇ? ಚೆನ್ನಾಗಿಯೂ ತೋರಿಸಬಹುದಲ್ಲ ಇಂತಹ ಪ್ರಶ್ನೆ, ಆಕ್ಷೇಪ ಅನೇಕರದ್ದು.
ಅದೆಷ್ಟೋ ಚಿತ್ರಗಳಲ್ಲಿ, ಬಹುತೇಕ ಜಾಹೀರಾತುಗಳಲ್ಲಿ ರಾಜಕಾರಣಿಗಳನ್ನು ಕೀಳಾಗಿ, ವಿಲನ್‌ಗಳಾಗಿ ಚಿತ್ರೀಕರಿಸಿದ್ದಾರೆ. ಆದರೆ ತನ್ನದೇ ಆದ ಒರಿಜಿನಾಲಿಟಿಯ ಜಾಹೀರಾತುಗಳನ್ನು ನೀಡುತ್ತಿರುವ ಏರ‍್ ಟೆಲ್ ಕಂಪನಿ ಮಾತ್ರ ಇಲ್ಲಿ ವಿಭಿನ್ನ ಪ್ರಯತ್ನ ಮಾಡಿದೆ. ಇಕ್ಬಾಲ್‌, ವೆಲ್‌ ಕಂ ಟು ಸಜ್ಜನ್‌ಪುರ‍್ ಮುಂತಾದ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ಮೂಲಕ ಆಕರ್ಷಿಸಿದ್ದ ಶ್ರೇಯಸ್ ತಲ್ಪಾಡೆಯನ್ನು ತಮ್ಮ ಜಾಹೀರಾತು ಸರಣಿಗೆ ಆರಿಸಿಕೊಂಡಿದ್ದೇ ಅವರು ತೆಗೆದುಕೊಂಡ ರಿಸ್ಕ್‌ಗೆ ಉದಾಹರಣೆ.
ಏರ‍್ಟೆಲ್‌ನವರೇ ಹೇಳುವ ಪ್ರಕಾರ ಮಾನವನ ನಡುವಣ ದೃಢವಾದ ಸಂಬಂಧ ಮತ್ತು ಸಂಪರ್ಕಗಳಿಗೆ ಅವರು ಮಹತ್ವ ನೀಡುತ್ತಾರೆ, ಆಧುನಿಕ ಸಂವಹನ ತಂತ್ರಜ್ಞಾನ ಹೇಗೆ ಮನಮನಗಳನ್ನು ಬೆಸೆಯುತ್ತದೆ ಎನ್ನುವುದನ್ನು ತೋರಿಸುವುದೇ ಅವರ ಉದ್ದೇಶ. ಹಾಗಾಗಿ ಅವರು ತಮ್ಮ ಜಾಹೀರಾತುಗಳಲ್ಲಿ ಸ್ಟಾರ್‌ಗಳಿಗೆ ಮಣೆ ಹಾಕಿಲ್ಲ. ಸಾಮಾನ್ಯರನ್ನು, ಪ್ರವರ್ಧಮಾನಕ್ಕೆ ಬರುವ ನಟರನ್ನೇ ಬಳಸಿಕೊಳ್ಳುತ್ತಾರೆ. ಅಭಯ್ ಡಿಯೋಲ್-ರೈಮಾ ಸೇನ್, ಮಾಧವನ್-ವಿದ್ಯಾಬಾಲನ್ ಮುಂತಾದವರನ್ನು ಬಳಸಿಕೊಂಡಿದ್ದು ಇದಕ್ಕೇ.
ಇಬ್ಬರು ಮಕ್ಕಳು ಗಡಿ ದಾಟಿ ಫುಟ್ ಬಾಲ್ ಆಡುವ ಸುಂದರ ಕಲ್ಪನೆ ಏರ್‌ಟೆಲ್‌ನದ್ದು. ಆ ಜಾಹೀರಾತು ಎಂದುಗೂ ಮರೆಯುವಂಥದ್ದಲ್ಲ.
ಇಲ್ಲಿ ನಾನು ಹೇಳುವ ಜಾಹೀರಾತು ಏರ್‌ಟೆಲ್‌ ಸರಣಿಯಲ್ಲಿ ಹೊಸದು. ಜನರಿಂದ ಆರಿಸಿ ಬಂದು ಸಂಸತ್ತಿಗೆ ತೆರಳುವ ಯುವನಾಯಕ. ಅಲ್ಲಿ ಹೋಗಿದ್ದರೂ ತನ್ನೂರಿನ ಜನರ ಸಂಪರ್ಕ ಬಿಡುವುದಿಲ್ಲ ಎನ್ನುವುದು ಈ ಜಾಹೀರಾತಿನ ತಾತ್ಪರ್ಯ.
ಸಂಸತ್ತಿನ ಬಗ್ಗೆ ಗೌರವ, ರಾಜಕಾರಣಿಗಳ ಬಗ್ಗೆ ಧನಾತ್ಮಕತೆ ತೋರಿಸುವಂತಹ ಜಾಹೀರಾತು ಬಳಸುವ ಮೂಲಕ ಏರ‍್ಟೆಲ್ ಒಂದು ಹೆಜ್ಜೆ ಮುಂದೆ ಹೋಗಿದೆ. ಇಲ್ಲವಾದರೆ ಜನರನ್ನು ಸೆಳೆಯಲು ಎಂತೆಂತಹ ಕೊಳಕು ಜಾಹೀರಾತನ್ನು ಬಳಸಬಹುದಿತ್ತು.
ಕೇವಲ ಭಿನ್ನತೆ ಮಾತ್ರವಲ್ಲದೆ ಸಂದೇಶ ನೀಡುವಂತಹ ಇಂತಹ ಜಾಹೀರಾತು ಹೆಚ್ಚೆಚ್ಚು ಬರಲಿ.
ಆ ಜಾಹೀರಾತು ಇಲ್ಲಿದೆ ನೋಡಿ....

Airtel 'Parliament' from Campaign India on Vimeo.

Related Posts Plugin for WordPress, Blogger...