28.10.07

ನಾವ್ಯಾಕೆ ಹಿಂಗೆ?

ಎಲ್ಲಿಂದಲೋ ಬಂದವರು ನಮ್ಮ ಮನಸೊಳಗೆ ಜಾಗ ಪಡೆದುಬಿಡುತ್ತಾರೆ, ಇನ್ನು ಕೆಲವರು ನಮ್ಮ ನಡುವೆಯೇ ಇದ್ದೋರೂ ಅಪರಿಚಿತರಾಗುತ್ತಾರೆ! ಅದೂ ಭಾಷೆಯ ಕಾರಣದಿಂದ.
ಅಲ್ಲಿಲ್ಲಿ ನೋಡಿದಾಗ, ಕೇಳಿದಾಗ ನಂಗೆ ಕಂಡುಬಂದದ್ದಿದು.
ಯು೨ ಚಾನೆಲ್ಲಿನ ನಿರೂಪಕರು ಕನ್ನಡ ಬಾರದೆ, ಕಷ್ಟಪಟ್ಟು ಆಂಗ್ಲಮಿಶ್ರಿತ ಕನ್ನಡದಲ್ಲಿ ಮಾತನಾಡುವುದೇ ತಮಗೆ ಹೆಮ್ಮೆ ಎಂದುಕೊಳ್ಳುತ್ತಾರೆ. ಆದ್ರೆ ಭಾನುವಾರ ರಾತ್ರಿ ‘ಎದೆತುಂಬಿ ಹಾಡಿದೆನು’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ತೆಲುಗುಮೂಲದ ಆದರೆ ಕನ್ನಡದ ಹೆಮ್ಮೆಯ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಕನ್ನಡ ಓದಲು ಬರದಿದ್ದರೂ ಅದೆಷ್ಟು ಚೆನ್ನಾಗಿ ಆದಷ್ಟು ಶುದ್ಧವಾಗಿ ಕನ್ನಡ ಮಾತನಾಡಲು ಯತ್ನಿಸುತ್ತಾರೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅಲ್ಲಿ ವೇದಿಕೆಗೆ ಬರುವ ಮಕ್ಕಳಲ್ಲಿ ಉಚ್ಛಾರ, ವ್ಯಾಕರಣ ಸರಿಪಡಿಸಲು ಯತ್ನ ಮಾಡುತ್ತಾರೆ!
ನಮ್ಮವರೇ ಅಂದುಕೊಳ್ಳುವ ಕನ್ನಡದ ನಟೀಮಣಿಯರಾದ ರಮ್ಯ, ರೇಖಾ ಮುಂತಾದವರೆಲ್ಲ ಲವ್ಲಿ ಲಂಡನ್ನಿಂದ ಬಂದ ಹಾಗೆ ಮಾಡಿದ್ರೆ ದೂರದ ಪಂಜಾಬಿನಿಂದ ಬಂದು ಮುಂಗಾರು ಮಳೆಯಲ್ಲಿ ಮಿಂದ ಬಳಿಕ ಕನ್ನಡಿಗರಿಗೆ ಆಪ್ತವಾದ ಸಂಜನಾ ಗಾಂಧಿ ಮಾತ್ರ ಕನ್ನಡ ಕಲಿತೇ ಬಿಟ್ಟಿದ್ದಾರೆ. ವರದಿಗಾರರಲ್ಲಿ ‘ಕನ್ನಡದಲ್ಲಿ ಪ್ರಶ್ನೆ ಕೇಳಿ ಪರವಾಗಿಲ್ಲ’ ಎಂದು ಸರಳತೆ ಮೆರೆಯುತ್ತಾರೆ.
ನಾವು ನಾವಾಗಲು
ಮರೆತುಬಿಟ್ಟಿದ್ದೇವೆ
ಬೇರೆ ಯಾರೋ
ಆಗಲು ಹೋಗಿ
ನಮ್ಮವರಿಂದ
ದೂರವಾಗುತ್ತಿದ್ದೇವೆ...
ನಮ್ಮತನವನ್ನೂ ಕಳೆಯುತ್ತೇವೆ
ಬಲುಹೆಮ್ಮೆಯಿಂದ!

19.10.07

ಅಮ್ಮನ ಕೈತೋಟ(mothers' garden)



ಅಮ್ಮನ ಪ್ರೀತಿಯ
ಕೈತೋಟದಲ್ಲಿ
ಅರಳಿವೆ ಖುಷಿಯ
ಹೂವುಗಳು
ವಸಂತಕ್ಕೆ ವಸಂತವೇ
ಮೈಮರೆತು ಕುಳಿತಂತೆ....

ಕೆಂಗುಲಾಬಿಯ ಒನಪು
ಮಂದಾರಪುಷ್ಪದ ನಲಿವು
ಕೆಂಪು-ಹಳದಿ
ದಾಸವಾಳಗಳು ಎಲ್ಲೆಲ್ಲು
ಅರೆಬಿರಿದ ಜಾಜಿಮಲ್ಲಿಗೆ
ಸೇವಂತಿಗೆ ತೋಟತುಂಬ
ನಗುವೇ ನಗು
ಲಾವಣ್ಯದ ಪ್ರಭೆಯಲ್ಲಿ
ತೊಯ್ದಾಡಿವೆ ಹೂಗಳು

ಅಮ್ಮನ ಬೆತ್ತದ
ಬುಟ್ಟಿಗೆ ಸೇರಿದ
ಹೂಗಳಿಗೆ ದೇವರ
ಪಾದಸ್ಪರ್ಶದ ಭಾಗ್ಯ
ಇನ್ನೊಂದಿಷ್ಟು ಕುಸುಮಗಳಿಗೆ
ನೆರೆಮನೆ ಪೋರಿಯ
ಕೂದಲ ಮೇಲೆ ಮೆರೆಯುವ
ಅದೃಷ್ಟ.

ಅಮ್ಮನ ಕೈತೋಟದ
ಹೂಗಳು ಯಾವಾಗಲೂ
ನಗುತ್ತವೆ,
ಅಮ್ಮನನ್ನೂ ನಗಿಸುತ್ತವೆ!

14.10.07


ಹೊಟ್ಟೆ ಹಸೀತಿದೆ ಎಂದು ಈ ಥರಾ ಪಾರ್ಕ್ ಮಾಡೋದೇ?!
ಮಂಗಳೂರಿನ ನಮ್ಮ ಕಚೇರಿ ಬಳಿಯೇ ಕಂಡುಬಂದ ದೃಶ್ಯ ಇದು. ವಿಶಾಲ ಪಾರ್ಕಿಂಗ್ ಇರುವ ಕಾರಣ ನಮ್ಮ ಕಚೇರಿ ಬಳಿಯ ಹೊಟೇಲ್‌ಗೆ ತಮ್ಮ ವಾಹನದಲ್ಲಿ ಧಾವಿಸಿ ಬರುವವರ ಸಂಖ್ಯೆ ಅಧಿಕ. ಕೆಲವರಂತೂ ಅತಿ ವೇಗದಲ್ಲಿ ಜೀವ ತೆಗೆಯುವ ರೀತಿ ಬರುತ್ತಾರೆ. ಅಂತಹವನೇ ಒಬ್ಬ ವೇಗ ನಿಯಂತ್ರಿಸಲಾಗದೆ ಮುಗ್ಗರಿಸಿದ್ದು ಹೀಗೆ....
(ಮೊಬೈಲ್ ಕ್ಯಾಮೆರಾದಲ್ಲಿ ತೆಗೆದ ಚಿತ್ರ, ಕಳಪೆ ಗುಣಮಟ್ಟಕ್ಕೆ ಕ್ಷಮೆ ಇರಲಿ)

7.10.07

ಕನವರಿಕೆಗಳು

ಮಂಜಲ್ಲಿ ತೊಯ್ದ
ಗಿಡಗಳು
ತೆಕ್ಕೆಯಲ್ಲಿ ಹಾಯಾಗಿ
ಮಲಗಿದ್ದರೂ,
ಪ್ರೀತಿ ತೋರಿಸದೆ
ತಣ್ಣನೆ ಭಾವನಾರಹಿತವಾಗಿ
ಉರುಳಿಹೋಗುತ್ತವೆ
ಈ ರಾತ್ರಿಗಳಿಗೇನು ಧಾಡಿ?
ವಿರಹಿಗಳ ನೋವು
ನರಳಿಕೆಯ ಕಾವು
ನವವಿವಾಹಿತರ


ಬಿಸುಪು, ಪ್ರೇಮಿಗಳ
ಕನವರಿಕೆ
ಎಲ್ಲವನ್ನೂ ನೀವಾಳಿಸಿ
ಎಸೆಯುವಂತೆ
ಬಣ್ಣಗೆಟ್ಟ ರಾತ್ರಿಗಳು
ಮುಗಿದುಬಿಡುತ್ತಿವೆ!

ಕನಿಷ್ಠ ಚಂದಿರನಾದರೂ
ಅಂಧಕಾರದ ರಾತ್ರಿಗಳಿಗೆ
ಬಣ್ಣಕೊಡುತ್ತಿದ್ದರೆ
ಚೆನ್ನಾಗಿರುತ್ತಿತ್ತು
ಭಾವರಹಿತರಾತ್ರಿಗಳಿಗೆ
ಒಂದಷ್ಟು ಅರ್ಥಸಿಗುತ್ತಿತ್ತು

ಚಂದಿರನನ್ನೂ
ಹದಿನೈದು ದಿನಕ್ಕೇ
ಓಡಿಸುವ ರಾತ್ರಿಗಳಿಗೆ
ಅದೆಷ್ಟು ಅಹಂಕಾರ?

1.10.07

ಕಲ್ಪನೆ

ಕಲ್ಪನೆಯೆಂಬ ಪೆಡಂಭೂತಕ್ಕೆ
ತಲೆ, ಕೈಕಾಲು
ಕಣ್ಣು, ಮೂಗು ಯಾವುದೂ ಇಲ್ಲ
ಆದರೂ, ಕಲ್ಪನೆ
ಹೆದರಿಸಿಬಿಡುತ್ತದೆ
ಬ್ರಹ್ಮರಕ್ಕಸನಿಗಾದರೂ
ವಿಕರಾಳ ಮುಖ,
ಉದ್ದುದ್ದ ಉಗುರು
ಕೋರೆ ಹಲ್ಲು ಇರುತ್ತದಂತೆ
ಅದಕ್ಕಾದರೂ ಬೆದರದೇ ಇರಬಹುದು
ಆದರೆ
ಕಲ್ಪನೆ ಎದೆ ನಡುಗಿಸಿಬಿಡುತ್ತದೆ
ಕಲ್ಪನೆಗೆ ಆದಿ ಅಂತ್ಯ ಇಲ್ಲ
ಹುಡುಗಿಯ ಸುಂದರ
ಜಡೆ ಕಾಳಸರ್ಪವಾಗುತ್ತದೆ
ನಳನಳಿಸುವ ಹೂಗಳೆಲ್ಲ
ಭಗ್ಗನೆ ಉರಿದು ಕೆನ್ನಾಲಿಗೆ
ನಲಿಯಬಹುದು!
ತಣ್ಣನೆ ಮಲಗಿದ ಸರೋವರ-
-ದ ಗರ್ಭದಿಂದ ಸುನಾಮಿ
ಎದ್ದು ಬರಬಹುದು.
ಅದಕ್ಕೇ ಕಲ್ಪನೆಗೆ
ಹೆದರುತ್ತೇನೆ ನಾನು
Related Posts Plugin for WordPress, Blogger...