30.1.07

ದೇವಸ್ಥಾನ

ಸಹಸ್ರಾರು ವರ್ಷದ
ಇತಿಹಾಸದ ಕಥೆ
ಸಾರುವ ಕಲ್ಲು ಚೆಲ್ಲಾಪಿಲ್ಲಿ
ಹಿಂದೆ ದೃಢವಾಗಿ ನಿಂತಿದೆ ಆ ದೇಗುಲ
ಇಡೀ ಊರಿನ ಸಮಸ್ತರ
ಆತ್ಮಶಕ್ತಿಯಂತೆ, ನಾನಿದ್ದೇನೆ
ಎನ್ನುವ ಯಜಮಾನನಂತೆ

ಹೆಚ್ಚಾಗಿ ಖಾಲಿಖಾಲಿ
ದೇಗುಲದ ಗರ್ಭಗುಡಿಯಲ್ಲಿ
ಸುತ್ತ ಹಾರುತ್ತಾವೆ
ಹತ್ತಾರು ಬಾವಲಿ
ಮಿಣಿರು ದೀಪದ ಬೆಳಕಲ್ಲಿ
ಕುಳಿತಿದ್ದಾನೆ ದೇವ
ಊರಿನ ಸಮಸ್ತರ ಜೀವ!

ಪೂಜೆ ಸಮಯಕ್ಕೆ
ಗೋಪುರ ತುಂಬಾ ಜನ
ತೂಗುತ್ತಿರುವ ಗಂಟೆಗಳಿಗೂ
ಕೈಗಳು ಅಂಟಿಕೊಳ್ಳುತ್ತವೆ
ಗರ್ಭಗುಡಿಯಲ್ಲಿ ಪ್ರತಿಧ್ವನಿಸುತ್ತದೆ
ಢಣಢಣಢಣ

ಸಮಸ್ತರ ನೋವಿಗೆ ನಲಿವಿಗೆ
ಸಾಕ್ಷಿ ಈ ದೇಗುಲ
ಹೊಸಹುಟ್ಟಿನ ನಗುವಿಗೆ
ಸಾವಿನ ಅಳುವಿಗೆ
ಗುರುತು ದೇಗುಲ
ಸಹಸ್ರಾರು ನಂಬಿಕೆಗಳಿಗೆ
ನೂರಾರು ಆಕಾಂಕ್ಷೆಗಳಿಗೆ
ಮೂಲಸ್ಥಾನ ಈ ದೇವಸ್ಥಾನ!

(ಇತ್ತೀಚೆಗೆ ಶಿಶಿಲಕ್ಕೆ ಹೋಗಿದ್ದಾಗ ಅಲ್ಲಿನ ಹಳೆಯ ದೇವಸ್ಥಾನ ನೋಡಿ ಪ್ರೇರಿತನಾದಾಗ ಹುಟ್ಟಿದ ಕವನ ಇದು)

26.1.07

ಸಂಭ್ರಮ, ಶಾಂತಿ ಇರಲಿ ಎಂದೆಂದೂ

ಒಂದಷ್ಟು ಸಂಭ್ರಮ...ಆಚರಣೆ...ದೇಶದ ವರ್ಣರಂಜಿತ ಪರಂಪರೆಯನ್ನೇ ಧುತ್ತನೆ ತೆರೆದಿಡುವ ರಾಜಪಥದ ಪಥಸಂಚಲನ...ಶಿಸ್ತುಬದ್ಧವಾಗಿ ಕದಂ ಕದಂ ಬಢಾಯೆ ಜಾ...ಎಂಬಂತೆ ಹೆಜ್ಜೆಗೆ ಹೆಜ್ಜೆ ಹಾಕುತ್ತಾ ಹೋಗುವ ಯೋಧರು...ನಮ್ಮ ಹೆಮ್ಮೆಯ ಕ್ಷಿಪಣಿಗಳು...ಯುದ್ಧ ಟ್ಯಾಂಕ್‌ಗಳು... ಇವನ್ನೆಲ್ಲಾ ನೋಡುತ್ತಿದ್ದರೆ ಯಾವುದೇ ದೇಶಪ್ರೇಮಿಗೂ ಗಂಟಲು ಕಟ್ಟಿದಂತೆ....ಕಣ್ಣು ತೇವಗೊಂಡಂತೆ ಆಗದಿರದು....
ಮತ್ತೊಮ್ಮೆ ಭಾರತೀಯರನ್ನು ಸಂಭ್ರಮದಲ್ಲಿ ಪುಳಕಿತಗೊಳಿಸಿ ಹೋಗಿದೆ ೫೮ನೇ ಗಣರಾಜ್ಯೋತ್ಸವ. ಅಷ್ಟೇ ಪ್ರಶ್ನೆಗಳನ್ನೂ ಎಬ್ಬಿಸಿಹೋಗಿದೆ.
ಕಾಶ್ಮೀರದ ಕಣಿವೆಗಳಲ್ಲಷ್ಟೇ ಬೊಬ್ಬಿರಿಯುತ್ತಿದ್ದ ಭಯೋತ್ಪಾದಕರೀಗ ಸಾರಾಸಗಟಾಗಿ ತಣ್ಣನೆ ನಗರ ಬೆಂಗಳೂರಿನಲ್ಲೂ ಎ.ಕೆ.೫೬ ಝಳಪಿಸತೊಡಗಿದ್ದಾರೆ. ನಮ್ಮವರೇ ಎನ್ನ್ಗಿಸಿಕೊಂಡವರೂ ಬೆನ್ನಿಗೆ ಚೂರಿ ಹಾಕುವ ಪರಿಸ್ಥಿತಿ. ನಮ್ಮ ನಡುವೆಯೇ ಇದ್ದು ತರಕಾರಿ ಮಾರುತ್ತಿರುವನನ್ನೂ ನಂಬುವ ಹಾಗಿಲ್ಲ! ಹಾಗಾಗಿಯೇ ತಾನೇ ಇಮ್ರಾನ್ ಹಂಪಿಯಲ್ಲಿ ಮಸಲತ್ತು ಹೂಡಿದ್ದು?
ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿದ್ದ ಮಂಗಳೂರಿನಲ್ಲೂ ಕೋಮುಗಲಭೆಯ ಹೊಗೆ ಆರುವುದಕ್ಕೇ ಕೇಳುತ್ತಿಲ್ಲ.
ಇದೀಗ ಮತ್ತೆ ಸಾಲು ಸಾಲಾಗಿ ರಾಜ್ಯದಲ್ಲಿಡೀ ಹಿಂದೂ ಸಮಾಜೋತ್ಸವಗಳು ನಡೆಯುತ್ತಿವೆ. ಮಂಗಳೂರಿನಲ್ಲಂತೂ ವಿರಾಟ್ ಸಮಾಜೋತ್ಸವ ೨೮ ಜನವರಿಗೆ ನಡೆಯುತ್ತದೆ. ಈ ಬಾರಿ ಹಿಂದೂ ಸಮಾಜದಲ್ಲಿರುವ ಅಸ್ಪ್ರಶ್ಯತೆ ಹೋಗಲಾಡಿಸುವ ಸಂದೇಶ ನೀಡುತ್ತೇವೆ ಎಂಬ ಹೇಳಿಕೆಗಳೂ ಮುಖಂಡರಿಂದ ಬರುತ್ತಿವೆ. ಹಿಂದೂ ಸಮಾಜೋತ್ಸವದ ಶರಬತ್ತಿಗೆ ಮುಸ್ಲಿಮ್ ವರ್ತಕರು ಸಕ್ಕರೆ ನೀಡುವುದಾಗಿ ಅವರೇ ಹೇಳಿದ್ದಾರೆ!
ಇಂತಹದ್ದೊಂದು ನಿರ್ಣಯ ಗಣರಾಜ್ಯ ದಿನದಂದು ಬಂದಿರುವುದೇ ವಿಶೇಷ. ದ್ವೇಷ ಅಳಿಯಲಿ....ಎಲ್ಲರೂ ಒಂದೆಂಬ ಭಾವನೆ ರೂಪುಪಡೆಯಲಿ ಎಂಬ ಸಣ್ಣ ಹಾರೈಕೆ ನಿಮ್ಮಿಂದಲೂ ಇರಲಿ!

ನಿಮ್ಮ ತಾಳ್ಮೆಗೆ ಹ್ಯಾಟ್ಸಾಫ್, ಗಣರಾಜ್ಯೋತ್ಸವದ ಶುಭಹಾರೈಕೆ ತಡವಾಗಿ!

20.1.07

ನನ್ನ ಕಲ್ಪನಾ!!!

ಮನ ಮೃದು...
ಮಂದಸ್ಮಿತೆ...
ಮಧುರಭಾಷಿಣಿ
ಹುಚ್ಚೆಬ್ಬಿಸುವ ಪರಿಮಳವಲ್ಲ
ಪಾರಿಜಾತದ ನಸುಗಂಪು..

ಆಕಾಶಕ್ಕೇಣಿ ಇಟ್ಟಾಕೆ
ಬಣ್ಣಗಳ ಮೀರಿ ನಿಂದಾಕೆ..
ನೀಲಿ ಕಂಗಳ ತುಂಬ
ಕನಸುಕಾಣುವಾಕೆ
ಹೃದಯದ ಆಳಕ್ಕಿಳಿದು
ಈಜುತ್ತಾಳೆ!

ಹಸಿರು ಸೀರೆಯ ನೀರೆ
ನೇರನುಡಿಯ ಧೀರೆ
ಮೆಲುವಾಗಿ
ಹಾಡಿದರೆ
ಅರಳೀತು ಕೆಂದಾವರೆ!
Related Posts Plugin for WordPress, Blogger...