29.8.07

ಮುನಿದು ಕೂತ ಮುದ್ದು ತಂಗಿಗೆ...ತಡವಾಗಿ....!

ಕಡಲಂಚಿನ ಚಿಪ್ಪುಗಳಲ್ಲಿ
ಕನಸಿನಂತಹ
ಮುತ್ತುಗಳನ್ನು
ಆಯ್ದಿದ್ದೇನೆ...
ಹಿಡಿತುಂಬಾ ಇರುವ
ಮುತ್ತುಗಳನ್ನು
ನಿನ್ನ ಕಂಪಾಸುಪೆಟ್ಟಿಗೆ ತುಂಬಲು
ಜೋಪಾನವಾಗಿ ತೆಗೆದಿರಿಸಿದ್ದೇನೆ....
ಕಾಡುಮೇಡುಗಳಲ್ಲೇ
ಅಡ್ಡಾಡುವ
ಸುಂದರ ತಣ್ಪನ್ನು
ಎದೆಯಲ್ಲಿ ತುಂಬಿಕೊಂಡು
ಮರಳಿದ್ದೇನೆ..
ನೀ ಹೃದಯದಾಸರೆ
ಪಡೆವಾಗ ತಂಗಿ
ಒಂದಿಷ್ಟು ತಂಪು ಹಂಚಿಕೊಳ್ಳಬಹುದು...

ಅಕ್ಷರಲೋಕದ ಉದ್ದಗಲ
ಓಡಾಡಿ ನಮ್ಮ
ಬಾಂಧವ್ಯದ
ಹರವು ವಿವರಿಸಲಾಗದೆ
ಸೋತಿದ್ದೇನೆ
ನನ್ನನ್ನು ಕ್ಷಮಿಸಿ
ಈ ಸೋದರನಿಗೊಂದು
ಪಪ್ಪಿ ಕೊಡುವೆಯಾ ಪುಟ್ಟಿ!

(ರಕ್ಷಾ ಬಂಧನ ದಿನ ಲೇಟಾಗಿ ಹೋಗಿದ್ದಕ್ಕೆ ಮುಖವೂದಿಸಿ ಕುಳಿತಿದ್ದ ತಂಗಿಗೆ......)

21.8.07

ಅರಸಿನಗುಂಡಿ ಫಾಲ್ಸ್ ಬೆನ್ನುಹತ್ತಿ(a trek to arasinagundi falls)

ಅರಸಿನಗುಂಡಿಯ ದೂರದ ನೋಟ. ಕ್ಯಾಮೆರಾ ಸರಿ ಫೋಕಸ್ ಆಗಿಲ್ಲ ಕ್ಷಮಿಸಿ

ಅಬ್ಬಬ್ಬಾ ಎಂಥ ಜಲಪಾತ! ಅನೇಕಾನೇಕ ಜಲಪಾತಗಳನ್ನೆಲ್ಲ ನೋಡಿ ಆನಂದಿಸಿದ ನಮ್ಮಲ್ಲಿ ಅನೇಕ ಚಾರಣೋತ್ಸಾಹಿಗಳು ಅರಸಿನಗುಂಡಿ ಜಲಪಾತಕ್ಕೆ ಭರ್ಜರಿ ಮಳೆಯಲ್ಲಿ ನಡೆದು ನೋಡಿದಾಗ ಅಬ್ಬಬ್ಬಾ ಎನ್ನಲೇ ಬೇಕಾಯ್ತು.
ಮಂಗಳೂರಿಂದ ಬಿಡುವಿಲ್ಲದೆ ಸುರಿಯುತ್ತಿದ್ದ ಮಳೆ ನಡುವೆ ನಾವು ೯ ಮಂದಿ ಅರಸಿನಗುಂಡಿಗೆ ಹೊರಟಿದ್ದೆವು. ಈ ಹಿಂದೆ ಅರಸಿನಗುಂಡಿಯನ್ನು ಒಂದು ಬಾರಿ ನೋಡಿದ್ದ ರಾಕೇಶ ಹೊಳ್ಳ ನಮ್ಮ ಮಾರ್ಗದರ್ಶಿ. ಹೊರಡುವ ಮಾಹಿತಿ ಸಿಕ್ಕಿದ್ದ ಅನೇಕ ಅನುಭವಿಗಳು ಈ ಮಳೆಗಾಲದಲ್ಲಿ ಅಲ್ಲಿಗೆ ಹೋಗಬೇಡಿರಪ್ಪೋ, ಮಳೆ, ಜಿಗಣೆ ತಡೆಯೋಕಾಗಲ್ಲ ಎಂದು ನಮ್ಮ ಉತ್ಸಾಹ ಕುಂದಿಸುವ ವ್ಯರ್ಥ ಪ್ರಯತ್ನ ಮಾಡಿದ್ದರೂ ಅಚ್ಚರಿಯೋ ಎಂಬಂತೆ ಕುಸಿಯಲಿಲ್ಲ.
ಕೊಲ್ಲೂರಿನ ಮಲಯಾಳಿಯೊಬ್ಬರ ಹೊಟೇಲಲ್ಲಿ ‘ಸಿಂಬಳ್’ ಆಗಿ ಪರೋಟ ಪ್ಯಾಕ್ ಮಾಡಿಸಿಕೊಂಡು ಗೂಡಂಗಡಿಯಲ್ಲಿ ಜಿಗಣೆಗಳಿಗೆಂದು ಪ್ರೀತಿಯಿಂದ ‘ಗೋವಿಂದ’ ಬ್ರಾಂಡ್‌ನ ನಶ್ಯ ಹಿಡಿದುಕೊಂಡು ಮತ್ತೆ ಮುಂದುವರಿದೆವು. ಕೊಲ್ಲೂರಿಂದ ಕೊಡಚಾದ್ರಿ ಹೋಗುವ ರಸ್ತೆಯನ್ನು ಕತ್ತರಿಸಿದಂತೆ ಆಗಿತ್ತು. ಯಾಕೆಂದರೆ ಹೊಸ ಸೇತುವೆ ಕಾಮಗಾರಿ ಆಗುತ್ತಿದ್ದ ಕಾರಣ ಮುಂದೆ ವಾಹನ ಹೋಗುತ್ತಿರಲಿಲ್ಲ. ಅಲ್ಲೇ ಸ್ವಲ್ಪ ಹಿಂದೆ ಮನೆಯೊಂದರ ಅಂಗಳದಲ್ಲಿ ಬೈಕ್‌ಗಳನ್ನು ಇರಿಸಿ ನಮ್ಮ ಚಾರಣ ಆರಂಭಿಸಿದೆವು.
ಸೇತುವೆ ಪಕ್ಕದಲ್ಲೆ ಬಲಕ್ಕೆ ಇರುವ ಸಸ್ಯಕ್ಷೇತ್ರ ಕಮಾನಿನ ಮೂಲಕ ಒಳಪ್ರವೇಶಿಸಿ ಮುನ್ನಡೆದೆವು. ಅಲ್ಲೂ ಒಂದು ಮನೆಯಿಂದ ಹೊರಬಂದ ಇಬ್ಬರು ಹೋಯ್ ಈಗ ಅರಸಿನಗುಂಡಿ ಹೋಗ್ತೀರಾ, ಜಿಗಣೆ ರಾಶಿ ಇವೆ ಮಾರಾಯ್ರೇ, ತಂಬಾಕಿಗೂ ಕೇರೇ ಮಾಡಲ್ಲ ಎಂದು ನಮ್ಮಲ್ಲಿ ಮತ್ತೆ ಭೀತಿಯ ಬೀಜ ಬಿತ್ತಿದರು.
ನಮ್ಮ ಗೆಳೆತನ ಬಿಡದೆ ಮಳೆ ಸುರಿಯುತ್ತಲೇ ಇತ್ತು. ದಟ್ಟ ಕಾಡಿನಲ್ಲಿ ಅಡಿ ಇಡುತ್ತಿದ್ದಂತೇ ವಿವಿಧ ರೀತಿಯ ಆಸನಗಳು ತಂಡದವರಿಂದ! ಒಂದು ಕಾಲಲ್ಲಿ ನಿಂತು ಜಿಗಣೆ ತೆಗೆಯುವುದು, ತೆಗೆದದ್ದಕ್ಕಿಂತ ದುಪ್ಪಟ್ಟು ಜಿಗಣೆ ಹತ್ತಿಕೊಂಡು ಹೊಸಬರ ಪಾಡಂತೂ ಚಿಂತಾಜನಕ!
ಎಂಆರ್‍ಪಿಎಲ್‌ನ ಸುನಿಲ್ ಚಪ್ಪಲಿಯ ಒಳಭಾಗದಲ್ಲಿ ಕಾಲಿಗೆ ತಾಗುವಂತೆ ಹೊಗೆಸಪ್ಪು ಸುತ್ತಿಕೊಂಡು ಹೊಸಪ್ರಯೋಗ ಶುರುವಿಟ್ಟರು. ನಾನು ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಬಾಟಲಿ ಡೆಟಾಲ್ ಕೂಡಾ ಹಿಡಿದುಕೊಂಡಿದ್ದೆ. ಈ ಪ್ರಯೋಗವೇನೋ ಫಲಕೊಟ್ಟಿತಾದರೂ ಸುರಿವ ಮಳೆಗೆ ಡೆಟಾಲ್ ಬೇಗನೆ ತನ್ನ ಶಕ್ತಿ ಕಳೆದುಕೊಳ್ಳುತ್ತಿತ್ತು.
ಭಾರಿ ಮಳೆಯಾದ ಕಾರಣ ದಾರಿಗಡ್ಡವಾಗಿ ಅಲ್ಲಲ್ಲಿ ತೋಡುಗಳು ಹರಿಯುತ್ತಿದ್ದವು. ನಮ್ಮೊಂದಿಗೆ ಬಂದಿದ್ದ ಮಿತ್ರ ಛಾಯಾಗ್ರಾಹಕ ರಾಮಕೃಷ್ಣ ಭಟ್ಟರಿಗೆ ಮೊದಲ ಚಾರಣ, ಹಾಗಾಗಿ ಅವರ ಜಿಗಣೆ ಹೋರಾಟ ನಡೆಯುತ್ತಲೇ ಇತ್ತು. ಅವರೂ ಸೇರಿದಂತೆ ಕ್ಯಾಮೆರಾ ತಂದಿದ್ದವರಿಗೆ ಹೊರಗೆ ತೆಗೆಯಲೂ ಆಗದಂತೆ ಮಳೆ ಸುರಿಯುತ್ತಿತ್ತು ನಿಂತರೂ ಕಾಲಿಗೆ ಜಿಗಣೆ ಕಚ್ಚಿ ಕಸಿವಿಸಿ ಗೊಳಿಸುತ್ತಿತ್ತು. ದಾರಿ ನೇರವಾಗಿದ್ದುದರಿಂದ ಹೋಗುತ್ತಲೇ ಇದ್ದೆವು. ಸುಮಾರು ಒಂದೂವರೆ ಗಂಟೆ ನಡೆದ ಬಳಿಕ ಬಲಕ್ಕೆ ಕಣಿವೆಯೊಳಕ್ಕೆ ಒಂದು ದಾರಿ ಕವಲೊಡೆದ ಸ್ಥಳ ಬಂತು. ನೇರವಾಗಿ ಹೋದರೆ ಕೊಡಚಾದ್ರಿಗೆ ಹೋಗಬಹುದು ಎಂಬ ಮಾಹಿತಿ ನೀಡಿದ ರಾಕೇಶ ಹೊಳ್ಳ. ಕೆಳಭಾಗದಲ್ಲಂತೂ ಬಹಳ ಜಾರುವಂತಹ ಮಣ್ಣು, ಅದರೊಂದಿಗೆ ದೊಡ್ಡಗಾತ್ರದ ಜಿಗಣೆಗಳೂ ನಮ್ಮ ಆಯಾಸ ಹೆಚ್ಚಿಸುತ್ತಿದ್ದವು. ಏನೇ ಇರಲಿ ಈಗ ಜಲಪಾತ ಸಿಗುತ್ತೆ, ಹಾಯಾಗಿ ಪರೋಟ ತಿಂದಾಗ ಆಯಾಸ ಪರಿಹಾರ ಆದೀತು ಎಂದು ಒಬ್ಬರಿಗೊಬ್ಬರು ಸಾಂತ್ವನ ಹೇಳುತ್ತಾ ಮುನ್ನಡೆದೆವು. ಅಂತೂ ಜಲಪಾತ ದರ್ಶನ ಆಯ್ತು. ಬ್ಯಾಗ್ ಜಾರಿಸಲು ನೋಡುವಾಗ ಹೊಳ್ಳ ಹೇಳುತ್ತಾನೆ, ಹೋಯ್ ಇದಲ್ಲ ಮಾರಾಯ ಇನ್ನೂ ಇದೆ!.
ಅಂತೂ ಮತ್ತೊಂದು ಜಲಪಾತ ಬಂತು. ಹೊಳ್ಳ ಯಾವುದೋ ಮೋಡಿಗೆ ಒಳಗಾದವನಂತೆ ಛಲ ಬಿಡದ ತ್ರಿವಿಕ್ರಮನಂತೆ ಮುನ್ನಡೆಯುತ್ತಲೇ ಇದ್ದ. ನಾವು ಒಂದಷ್ಟು ಹೊತ್ತು ಹನಿ ಮಳೆಯಲ್ಲಿಯೇ ಫೋಟೋ ತೆಗೆದೆವು. ಮತ್ತೆ ಜಾರುಕಣಿವೆಯಲ್ಲಿ ಜಾರುತ್ತಾ ಏಳುತ್ತಾ ಬೀಳುತ್ತಾ ಮಧ್ಯಾಹ್ನ ೨.೩೦ರ ವೇಳೆಗೆ ಅರಸಿನಗುಂಡಿ ಜಲಪಾತ ಸಿಕ್ಕೇಬಿಡ್ತು.
ಹತ್ತಿರದಲ್ಲಿ ಅರಸಿನಗುಂಡಿ ಚಿತ್ರ ಸಿಕ್ಕಿದ್ದಿಷ್ಟೇ. ನೀರೇ ನೀರು...

ಅದೇನು ರುದ್ರಭೀಕರ! ಭಾರೀ ಪ್ರಮಾಣದಲ್ಲಿ ನೀರು ಬಂದು ಕೊರಕಲಿಗೆ ಬೀಳುತ್ತಿತ್ತು. ಅಲ್ಲೇ ಪಕ್ಕದಲ್ಲಿದ್ದ ಅತ್ಯಂತ ಜಾರುತ್ತಿದ್ದ ಬಂಡೆಯ ಮೇಲೆ ನಿಂತು ಜಲಪಾತ ನೋಡುವ ಪ್ರಯತ್ನ ಮಾಡಿದೆವು. ಆದರೆ ನೀರು ಬಿದ್ದ ರಭಸಕ್ಕೆ ಏಳುತ್ತಿದ್ದ ಮಂಜಿನ ಹನಿಗಳು ಕಣ್ಣಿಗೆ ತುಂಬಿಕೊಳ್ಳುತ್ತಿದ್ದವು. ಗಾಳಿಯ ಅಬ್ಬರ ಬೇರೆ. ಅಲ್ಲೆಲ್ಲೂ ಕುಳಿತುಕೊಳ್ಳುವುದಕ್ಕೇ ಅವಕಾಶವಿರಲಿಲ್ಲ. ನಿಂತೇ ತಿನ್ನೋಣ ಎಂದರೆ ಮಳೆ ಬೇರೆ. ಹೋಗಲಿ ಫೋಟೋ ತೆಗೆಯೋಣ ಎಂದರೆ ಕ್ಯಾಮೆರಾ ಕೆಟ್ಟೇಹೋಗುವಷ್ಟು ಮಂಜು.
ಹೀಗೆ ಏನೋ ಒಂಥರಾ ಖುಷಿ, ಒಂಥರಾ ಬೇಸರದ ಮಿಶ್ರಣದಲ್ಲಿ ಮತ್ತೆ ಹಿಂದಕ್ಕೆ ತಿರುಗಿದೆವು.
ಒಂದೆಡೆ ಹಸಿವೆಯಲ್ಲಿ ಹೊಟ್ಟೆಹುಳ ಕೂಡಾ ಸತ್ತಿರಬಹುದೇನೋ ಎಂಬ ಅನುಮಾನ. ಇದಲ್ಲದೆ ನಮ್ಮ ಫೊಟೋಗ್ರಾಫರ್‍ ಭಟ್ರು ಎರಡು ಬಾರಿ ಜಾರಿ ಬಿದ್ದು ಪೆಟ್ಟೂ ಮಾಡಿಕೊಂಡರು. ಎಲ್ಲದರ ನಡುವೆ ಅಂತೂ ರಸ್ತೆಗೆ ಬಂದು ನಿಟ್ಟುಸಿರು ಬಿಟ್ಟೆವು. ತಿರುಗಿದರೆ ಭಟ್ಟರಿಲ್ಲ! ಹಿಂದೆ ಹುಡುಕುತ್ತಾ ಹೋದರೆ ದಾರಿ ತಪ್ಪಿ ಎಲ್ಲೋ ಹೋಗಿ, ಅಲ್ಲಿ ನಾಗರ ಹಾವೊಂದರ ದರ್ಶನ ಮಾಡಿ, ಮತ್ತೆ ಸರಿದಾರಿ ಹಿಡಿದ ಭಟ್ಟರು ಹೇಗೋ ಬರುತ್ತಿದ್ದರು. ಕೊನೆಯ ವರೆಗೂ ಅವರ ಮೇಲೆ ನಿಗಾ ಇರಿಸಿದ್ದ ನಾನು ಮತ್ತು ಬಂಟ್ವಾಳದ ಶಕ್ತಿಪ್ರಸಾದ್ ಕೊನೆ ಹಂತದಲ್ಲಿ ಸ್ವಲ್ಪ ವೇಗವಾಗಿ ಹೆಜ್ಜೆ ಹಾಕಿದ್ದು ಈ ಅವಾಂತರಕ್ಕೆ ಕಾರಣವಾಯ್ತು.
ಅಂತೂ ಬೈಕ್ ನಿಲ್ಲಿಸಿದ್ದ ಮನೆಗೆ ಬಂದಾಗ ಸಂಜೆ ನಾಲ್ಕು ಗಂಟೆ. ಪರೋಟ ಪೊಟ್ಟಣ ಬಿಚ್ಚಿ ನೋಡಿದರೆ ಗಸಿ ಆಗಲೇ ಪರಲೋಕ ವಾಸಿಯಾಗಿತ್ತು. ಕೆಲವರು ಹಸಿವೆ ತಾಳಲಾರದೆ ಹಾಗೆಯೇ ಹೊಟ್ಟೆಗಿಳಿಸಿದರು. ಕೆಲವರು ಖಾಲಿ ಪರೋಟವನ್ನೇ ಮುಕ್ಕಿದರು. ಅಂತೂ ಕುಂದಾಪುರದ ಹೊಟೇಲಲ್ಲಿ ದೋಸೆ ಹೊಡೆದಾಗ ಮಾತ್ರ ನಮ್ಮ ಪರಮಾತ್ಮ ತೃಪ್ತನಾದದ್ದು.
ಮತ್ತೆ ಭಗವಂತನಿಂದಲೂ ಸರಿಪಡಿಸಲಾಗದ ಉಡುಪಿ ಮಂಗಳೂರು ಹೈವೇಯಲ್ಲಿ ಸುರಿವ ಮಳೆಯಲ್ಲಿ ರಸ್ತೆ ಗುಂಡಿಗೆ ಬಿದ್ದು ಮುರಿದ ಬೈಕ್ ಇಂಡಿಕೇಟರ್‍ನಂತಹ ಪರಿಸ್ಥಿತಿ ನಮ್ಮದಾಯ್ತು. ಹೇಗೋ ಮನೆ ಸೇರಿದೆವು. ತಲೆಗೆ ಗಾಯ ಮಾಡಿಕೊಂಡು ಇನ್ನು ನಿಮ್ಮ ಜತೆ ಬರಲ್ಲ ಎಂದು ಪ್ರತಿಜ್ಞೆ ಮಾಡಿರುವ ಭಟ್ಟರು ನಾಲ್ಕು ದಿನ ರಜೆ ಮಾಡಬೇಕಾಯ್ತು.
ಅಂತೂ ‘ಘೋರ ಚಾರಣ’ ಎಂಬ ಪಟ್ಟಿಗೆ ಇದು ಸೇರಿದರೂ ಮಳೆ ಕಡಿಮೆಯಾದ ಬಳಿಕ ಮತ್ತೆ ಅರಸಿನಗುಂಡಿ ನೋಡಬೇಕು ಎಂಬ ಆಸೆ ಈಗ ಮನಸ್ಸಲ್ಲಿ ಗೂಡುಕಟ್ಟುತ್ತಿದೆ.

16.8.07

ಸ್ವಾತಂತ್ರ್ಯ ಮತ್ತು ಬೆಳ್ಳಿಪರದೆ

ನಿನ್ನೆ ಸ್ವಾತಂತ್ರೋತ್ಸವ...ಎಲ್ಲಾ ಭಾರತೀಯ ಚಾನೆಲ್‌ಗಳಲ್ಲಿ ದೇಶಪ್ರೇಮದ ಗುರುತಾದ ಚಿತ್ರಗಳು.
ಆಧುನಿಕ ಕಾಲಘಟ್ಟದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಯುವಮನಸ್ಸಿನಲ್ಲಿ ದೇಶಪ್ರೇಮ ಮೂಡಿಸುವಲ್ಲಿ ಚಿತ್ರಗಳ ಕೊಡುಗೆ ಸಾಕಷ್ಟಿದೆ.
ಹೀಗೆ ಚಿತ್ರಗಳನ್ನು ವಿಶ್ಲೇಷಿಸಹೊರಟರೆ ಅದಕ್ಕೆ ಒಂದು ದೊಡ್ಡ ವಾದವೇ ಏರ್ಪಡಬಹುದೋ ಏನೋ. ಭಾರತೀಯತೆ ಸಾರುವ ಅನೇಕ ಯುದ್ಧ ಚಿತ್ರಗಳು ನಿರ್ಮಾಣಗೊಂಡಿವೆ. ಹಕೀಕತ್‌ನಂತ ಎವರ್‍ಗ್ರೀನ್ ಚಿತ್ರದ ಮೈನವಿರೇಳಿಸುವ ಹಾಡು ಕರ್‍ ಚಲೇ ಹಮ್ ಫಿದಾ ಜಾನೊ ತನ್ ಸಾಥಿಯೊ ಅಬ್ ತುಮ್ಹಾರೇ ಹವಾಲೇ ವತನ್ ಸಾಥಿಯೊ ಇಂದಿಗೂ ನಮ್ಮ ಮನದಲ್ಲಿ ಸ್ಥಾನ ಪಡೆದಿದ್ದರೆ, ಅದಕ್ಕೆ ಹಾಡು ನಮ್ಮಲ್ಲಿ ಮೂಡಿಸುವ ಭಾರತೀಯತೆ ಕಾರಣ.
ಹಾಗೆ ನೋಡಿದರೆ, ಆಕ್ರಮಣ್, ದೀವಾರ್‍, ಬಾರ್ಡರ್‍, ರೆಫ್ಯೂಜಿ, ಎಲ್‌ಒಸಿ ಕಾರ್ಗಿಲ್, ಟ್ಯಾಂಗೊ ಚಾರ್ಲಿ, ೧೯೭೧ ಮುಂತಾದ ಬೆರಳೆಣಿಕೆ ಯುದ್ಧ ಸಿನಿಮಾಗಳಷ್ಟೇ ಬಾಲಿವುಡ್‌ನಲ್ಲಿ ಬಂದಿವೆ. ಕನ್ನಡದಲ್ಲಿ ನೋಡಿದರೆ ಮುತ್ತಿನ ಹಾರ, ಸೈನಿಕ ಉತ್ತಮ ಪ್ರಯತ್ನಗಳು.
ನಾನು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ತೆರೆ ಕಂಡಿದ್ದ ಬಾರ್ಡರ್‍ ಚಿತ್ರ
ಎಷ್ಟು ಪರಿಣಾಮ ಬೀರಿತ್ತೆಂದರೆ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೂ ತಾವೇ ಟಿಕೆಟ್ ಕೊಡಿಸಿ ವಿದ್ಯಾರ್ಥಿಗಳಿಗಾಗಿ ಬೆಳ್ತಂಗಡಿಯ ಟಾಕೀಸಲ್ಲಿ ಬಾರ್ಡರ್‍ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಸಿದ್ದರು. ಅದನ್ನು ನೋಡಿದ ಬಳಿಕ ಮತ್ತೆ ನಾಲ್ಕು ಬಾರಿ ನೋಡಿದ್ದೆ. ಇದೇ ಚಿತ್ರದಿಂದ ಸ್ಫೂರ್ತಿ ಪಡೆದು ನಾವು ಐದಾರು ಮಿತ್ರರು ಸೇನೆಗೆ ಸೇರುವ, ಅದಕ್ಕೆ ಮೊದಲು ಎನ್‌ಸಿಸಿ ಸೇರುವ ಮನಸ್ಸು ಮಾಡಿದ್ದೆವು. ಎನ್‌ಸಿಸಿಯಲ್ಲಿ ಸಾಧನೆ ಗಮನಾರ್ಹವಿತ್ತಾದರೂ ಸೇನೆಗೆ ಸೇರುವ ಕನಸು ಹಾಗೆಯೇ ಉಳಿಯಿತಾದರೂ ಬಾರ್ಡರ್‍ ಮನಸ್ಸಲ್ಲಿ ಬಿತ್ತಿದ ಭಾರತೀಯತೆಯ ಅಚ್ಚು ಅಳಿಸಿಹೋಗಿಲ್ಲ. ಸಂದೇಸೆ ಆತೇಂ ಹೈ ಕೂಡಾ ಹಚ್ಚಹಸಿರು. ಹಾಗೆಂದು ಈ ಚಿತ್ರಗಳಲ್ಲಿ ನಾಟಕೀಯತೆ, ಹೆಚ್ಚೇ ಎನಿಸುವ ಹೀರೋಯಿಸಮ್ ಇವೆಲ್ಲ ನೆಗೆಟಿವ್ ಅಂಶ ಪಟ್ಟಿ ಮಾಡಬಹುದು.
ಕೆಲ ತಿಂಗಳ ಹಿಂದೆ ತೆರೆ ಕಂಡ ೧೯೭೧ ಕೂಡಾ ಒಳ್ಳೆಯ ಪ್ರಯತ್ನ. ಪಾಕಿಸ್ತಾನದಲ್ಲಿ ಬಂದಿಗಳಾಗಿ, ಹೊರಜಗತ್ತಿಗೆ ಇಲ್ಲವಾದರೂ ಅಲ್ಲಿನ ಜೇಲುಗಳಲ್ಲಿ ಕೊಳೆಯುತ್ತಿರುವ ಕಥಾ ಹಂದರ ಮನಮಿಡಿಯುವಂಥದ್ದು, ಕೆಲ ಭಾರತೀಯ ಯುದ್ಧಕೈದಿಗಳು ಅಲ್ಲಿಂದ ತಪ್ಪಿಸಿಕೊಳ್ಳಲು ಮಾಡುವ ಯತ್ನವನ್ನು ನಿರೂಪಿಸಲಾಗಿದೆ. ಇದೇ ರೀತಿಯ ಇನ್ನೊಂದು ಚಿತ್ರ ದೀವಾರ್‍. ಹಾಲಿವುಡ್‌ನಲ್ಲಿ ಸ್ಟಲಗ್ ೧೭ ಎಂಬ ಸಿನಿಮಾ ಕೂಡಾ ಬಂದಿದೆ.
ಯುದ್ಧ ಚಿತ್ರಗಳೇ ಭಾರತೀಯತೆ ಬೆಳೆಸಬೇಕು ಎಂದೇನೂ ಇಲ್ಲ. ಸ್ವಾತಂತ್ರ ಹೋರಾಟದ ಕಥೆ ಹೇಳುವಂತಹ ಲೀಜೆಂಡ್ ಆಫ್ ಭಗತ್ ಸಿಂಗ್, ಇತ್ತೀಚೆಗೆ ಯುವಮನಸ್ಸನ್ನು ಕೆದಕಿ ಕ್ರಾಂತಿಯ ಸ್ಪೂರ್ತಿ ಮೂಡಿಸಿದ ರಂಗ್ ದೇ ಬಸಂತಿ ಕೂಡಾ ತಮ್ಮ ಅನೇಕ ಮಿತಿಗಳ ನಡುವೆ ಉತ್ತಮ ಪ್ರಯತ್ನಗಳು. ಇಂದಿಗೂ ಗಾಂಧೀಜಿಗೆ, ಅವರ ಸಿದ್ಧಾಂತಗಳಿಗೆ ಬೆಲೆ ಇದೆ ಎಂದು ಸಾರಿದ ಲಗೇ ರಹೊ ಮುನ್ನಭಾಯಿ ಭಾರತೀಯರ ಹೃದಯ ಗೆದ್ದಿತು.
ಸ್ವಾತಂತ್ರದ ಅಂತರ್ಜಲ ನಮ್ಮಲ್ಲಿ ಜೀವಂತ ಇರುವಲ್ಲಿ ಅನೇಕ ಅಂಶಗಳು ಅದರಲ್ಲಿ ಸಿನಿಮಾ, ರಂಗಭೂಮಿಯದ್ದೂ ಒಂದು ಮಹತ್ವದ ಪಾಲಿದೆ ಅನ್ನುವುದಷ್ಟೇ ಇಲ್ಲಿ ಬರುವ ಯೋಚನೆ. ಇಂತಹ ಪ್ರಯತ್ನಗಳು ಆಗುತ್ತಲೇ ಇರಬೇಕಾಗಿವೆ.

3.8.07

ರಾತ್ರಿ ಮುಗಿಯದ ಹುಡುಗ

ಇಡೀ ಪ್ರಪಂಚವೇ ಕತ್ತಲೆಯಲ್ಲಿ ಕೊಚ್ಚಿದೆಯೋ ಎಂಬಂಥ ಕತ್ತಲೆಯಲ್ಲಿ ಕ್ಷೀಣವಾಗಿ ಉರಿಯುತ್ತಿರುವ ಬುಡ್ಡಿದೀಪ. ಅದನ್ನೇ ಒಮ್ಮೆ ನೋಡುತ್ತಾ ತಲೆಗೆ ಸುತರಾಂ ಹತ್ತದ ಗಣಿತದ ಸಮಸ್ಯೆ ಶಪಿಸುತ್ತಾ, ಕಣ್ಣಿನ ತೂಕಡಿಕೆಯಲ್ಲಿ ದೀಪವನ್ನು ತುಂಬಿಕೊಳ್ಳುತ್ತಿದ್ದಾನೆ ಆ ಹುಡುಗ.
ಮರದ ತುಂಡುಗಳನ್ನು ತ್ರಿಕೋನಾಕಾರದಲ್ಲಿ ಕಟ್ಟಿ ನಾಲ್ಕು ಹರಿದ ಟಾರ್ಪಾಲಿನ್‌ಗಳನ್ನು ಸೇರಿಸಿ ಮಾಡಿದ ಮನೆಯೆಂಬೋ ಮನೆಯದು. ನಗರದ ಯುಜಿಡಿ ಚರಂಡಿ ನೀರನ್ನು ೧೯೫೦ರ ಕಾಲದ ಟ್ರೀಟ್‌ಮೆಂಟ್ ಪ್ಲಾಂಟೊಂದು ಅರ್ಧವಷ್ಟೇ ಸಂಸ್ಕರಿಸಿ ಚೆಲ್ಲಿ ಬಿಡುವ ತ್ಯಾಜ್ಯ ಸಾಗಿಸುವ ತೋಡಿನ ಪಕ್ಕದಲ್ಲಿ ಇದೆ ಹುಡುಗನ ಅರಮನೆ.
ನಗರದಲ್ಲಿ ನೋಡುವ ದೊಡ್ಡ ಮನೆಗಳನ್ನು ನೋಡುವಾಗ ತನಗೂ ಒಂದು ಚಿಕ್ಕದಾದರೂ ಸುಂದರ ಮನೆ ಬೇಕೆಂದು ಹುಡುಗನಿಗೆ ಮನವರಿಕೆಯಾಗಿದೆ. ಹೇಗಾದರೂ ಎಸ್ಸೆಸ್ಸೆಲ್ಸಿ ಪಾಸಾದರೆ ನಗರದಲ್ಲಿ ಏನಾದರೂ ಕೆಲಸ ಮಾಡಿ ಮನೆ ಕಟ್ಟಬಹುದು ಎಂದು ಶಾಲೆಯಲ್ಲಿ ಅವನಿಗೆ ಟೀಚರ್ ಹೇಳಿದ್ದು ಚೆನ್ನಾಗಿ ನೆನಪಿದೆ. ಅದಕ್ಕಾಗಿ ಹುಡುಗ ಜೀವ ಬಿಟ್ಟು ಓದುತ್ತಾನೆ. ಆದರೆ ಈ ಗಣಿತ ಮಾತ್ರ ಆತನಿಂದಾಗದು...ಟೀಚರ್ ಎಷ್ಟೇ ಹೇಳಿದರೂ ಆತನ ಮೆದುಳಿಗೇ ಹೋಗುವುದಿಲ್ಲ.
ರಾತ್ರಿ ಅದೆಷ್ಟೋ ಹೊತ್ತು ಪುಸ್ತಕದೆದುರು ಧ್ಯಾನ ಮಗ್ನನಂತೆ ಕುಕ್ಕರಗೂತಿರುತ್ತಾನೆ ಹುಡುಗ. ಪಕ್ಕದ ನ್ಯಾಷನಲ್ ಹೈವೇಯಲ್ಲಿ ತಡರಾತ್ರಿಯಲ್ಲಿ ಅಬ್ಬರಿಸುತ್ತಾ ಆನೆಯಂತೆ ಘೀಳಿಡುತ್ತಾ ಹೋಗುವ ಟ್ರಕ್‌ಗಳಿಗೆ ಇವನ ಏಕಾಂತ ಭಂಗ ಪಡಿಸುವುದು ಸಾಧ್ಯವಿಲ್ಲ. ಆದರೆ ಮಳೆ ನೀರು ತೊಟ್ಟಿಕ್ಕುವಲ್ಲಿ ಒಂದು ಪಾತ್ರೆ ಇರಿಸಿ ಪಕ್ಕದಲ್ಲಿ ಗೋಣಿ, ಅದರ ಮೇಲೆ ಕಂಬಳಿ ಸುತ್ತಿ ಮಲಗಿರುವ ಉಬ್ಬಸ ಪೀಡಿತ ಮುದಿ ತಾಯಿ ತಾಳ ಲಯ ಇಲ್ಲದ ಚರ್ಮವಾದ್ಯದಂತೆ ಕೆಮ್ಮುವಾಗ ಹುಡುಗನ ಕರುಳು ಕಿವಿಚಿದಂತಾಗುತ್ತದೆ.

ಹಗಲೆಲ್ಲಾ ಶಾಲೆಯಲ್ಲಿ ಫಾಸ್ಟ್ ಫಾರ್ವರ್ಡ್ ಮಾಡಿದಂತೆ ಓಡುವ ಹುಡುಗನ ದಿನಚರಿ ರಾತ್ರಿ ಮಾತ್ರ ಘಾಟಿರಸ್ತೆ ಏರುವ ಟ್ಯಾಂಕರ್‍.
ಹಗಲಲ್ಲಿ ತಿರುಗಾಡುವ ಹುಡುಗನನ್ನು ಬಹುವಾಗಿ ಆಕರ್ಷಿಸುವುದು ಹೆದ್ದಾರಿ ಪಕ್ಕದ ಜಾಹೀರಾತು ಹೋರ್ಡಿಂಗ್‌ಗಳು. ಹಾಗೆ ನೋಡಿದರೆ ಹುಡುಗನ ಕನಸುಗಳಿಗೆ ವಸ್ತುವಾಗುವುದು ಈ ಹೋರ್ಡಿಂಗ್‌ಗಳೇ.
ಬೆಟ್ಟದ ಅಂಚಿನಲ್ಲಿ ನಿಂತ ದಪ್ಪ ಟಯರಿನ ಬೈಸಿಕಲ್ಲು, ನುಣ್ಣನೆ ಕೆನ್ನೆಯೊಂದಿಗೆ ಸೋಪ್ ತೋರಿಸುತ್ತಾ ನಿಂತ ನಟಿ, ನೀಲಿ ಬಣ್ಣದ ಆಕಾಶದೆದುರು ದೃಢವಾಗಿ ನಿಂತ ಕಾರು ಹೀಗೆ ಇಂತಹ ಅನೇಕ ಜಾಹೀರಾತುಗಳನ್ನು ನೋಡುತ್ತಿರುತ್ತಾನೆ ಹುಡುಗ. ಹಗಲು ನೋಡಿದ ಜಾಹೀರಾತುಗಳಿಂದ ರಾತ್ರಿ ಕನಸಿಗೆ ಬಣ್ಣ ಹಚ್ಚಿಕೊಳ್ಳುತ್ತಾನೆ.
ಈಚೆಗೆ ಹುಡುಗನ ಜೋಪಡಿಯ ಹತ್ತಿರ ದೊಡ್ಡ ಅಗಲವಾದ ಜಾಹೀರಾತು ಫಲಕ ಎದ್ದುನಿಂತಿದೆ. ಆದರೆ ಇನ್ನೂ ಯಾವ ಜಾಹೀರಾತು ಅದರಲ್ಲಿಲ್ಲ. ಯಾವುದೋ ಫೋನ್ ನಂಬರು ಮಾತ್ರ ಬರೆದಿದ್ದಾರೆ. ಅದರಲ್ಲಿ ತನ್ನ ಚಿತ್ರ ಬಂದಂತೆ ಹುಡುಗ ಕೆಲವೊಮ್ಮೆ ಕಲ್ಪಿಸಿ ಖುಷಿ ಪಡುವುದಿದೆ.
ತಂದೆ, ಬಾಂಧವರಿಲ್ಲದ ಹುಡುಗನಿಗೆ ತಾಯಿ ಮಾತ್ರ ಸರ್ವಸ್ವ. ಉಬ್ಬಸನ ಮಧ್ಯೆಯೂ ತಾಯಿಗೆ ಹುಡುಗ ಸಾಗುವ ದಾರಿ ಬಗ್ಗೆ ಖುಷಿಯಿದೆ.
ಹೀಗಿರುವಾಗ ಮೊನ್ನೆ ಹುಡುಗನಿಗೆ ಉತ್ಸಾಹ ಬಂದಿದೆ. ಜಾಹೀರಾತು ಬೋರ್ಡ್‌ನ ಸುತ್ತ ನಾಲ್ಕು ಜಗಮಗಿಸುವ ಫ್ಲಾಶ್ ಲೈಟುಗಳನ್ನು ಹಾಕಿದ್ದಾರೆ. ಯಾವುದೋ ಬ್ರಾಂಡ್‌ನ ಒಳವಸ್ತ್ರದ ಜಾಹೀರಾತೂ ಬೋರ್ಡ್ ಮೇಲೆ ಬಿದ್ದಿದೆ. ಜಾಹೀರಾತಿನ ಬೆಡಗಿ ಹುಡುಗನ ಕನಸುಗಳಿಗೆ ಮತ್ತಷ್ಟು ಬಣ್ಣ ತುಂಬಿದ್ದಾಳೆ.
ಹುಡುಗನ ರಜೆಉ ದಿನ, ಬೆಳಗ್ಗೆ ಕನಸು ಮುರಿದು ನೇಸರ ಬಂದಿದ್ದಾನೆ. ಯಾರೋ ಅಧಿಕಾರಿಗಳು ಮಾತನಾಡುತ್ತಿದ್ದಾರೆ ಜೋಪಡಿಯ ಹೊರಗೆ. ತಾಯಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ. ಜೋಪಡಿ ಕಾನೂನು ಬಾಹಿರ, ಅದನ್ನು ಎಬ್ಬಿಸುವುದಾಗಿ, ಅಧಿಕಾರಿಗಳು ಹೇಳುತ್ತಾರೆ. ಹೆದ್ದಾರಿ ಅಗಲವಾಗಲಿದೆಯಂತೆ, ಕಾಂಕ್ರೀಟ್ ಹಾಕುತ್ತಾರಂತೆ.
ಬುಲ್‌ಡೋಜರ್‍ಗಳು ಬಂದಿವೆ, ಟಿಪ್ಪರ್‍ ಲಾರಿಗಳು ಓಡಾಡುತ್ತಿವೆ, ಅವು ಎಬ್ಬಿಸಿದ ಧೂಳಿನ ತೆರೆಯ ನಡುವೆ ತಾಯಿ ಮಗ ಹೊರಟಿದ್ದಾರೆ, ಗುರಿಯೇ ಇಲ್ಲದ ವಿಶಾಲ ಪ್ರಪಂಚಕ್ಕೆ ಲಗ್ಗೆ ಇಡುವವರಂತೆ.
ಅವರ ಬೆನ್ನಿಗೇ ಜಾಹೀರಾತು ಬೋರ್ಡ್‌ನ ಒಳವಸ್ತ್ರದ ಸುಂದರಿ ಕಿಲಕಿಲನೆ ನಗುತ್ತಿದ್ದಾಳೆ....
Related Posts Plugin for WordPress, Blogger...