19.9.08

ಮರೀಚಿಕೆ


ಮನೆಯೊಳಗೆ,
ಹಾಗು
ಬಾಗಿಲಿನ ಹೊರಗೆ
ಕಿವಿಗಡಚಿಕ್ಕುವ ಶಬ್ದಗಳು
ದೇವಸ್ಥಾನದ
ಪ್ರಸಾದದ ತಟ್ಟೆಯಲ್ಲೇ
ಬಾಂಬ್
ಇಗರ್ಜಿಯಲ್ಲಿ
ಮುರಿದು ನೇತಾಡುವ ಶಿಲುಬೆ
ಸಮುದ್ರ ತಟಕ್ಕೂ
ಅಪ್ಪಳಿಸಿ ಪಾದ ತೋಯಿಸುತ್ತಿದೆ
ಸಂಕಟದ ಅಲೆ
ಮಟನ್ನು ಮಾರ್ಕೆಟ್ಟಲ್ಲಿ
ದಿನವೂ ಭರ್ಜರಿ ವ್ಯಾಪಾರ
ಕ್ಷೀಣವಾಗಿದೆ ಆಡುಗಳ ಅರಚಾಟ

ಓಡು...ಬೆಳಕಿನತ್ತ
ಕತ್ತಲ ಮರೆಯಿಂದ
ಗುಂಡು ಗುಂಡಿಗೆ
ಸೀಳಿಬಿಡಬಹುದು..

ವಿ ಚಿ ತ್ರ....
ಆದರು ಸತ್ಯ
ಹಿಂಸೆಯ ಬಾಜಾರಿನಲ್ಲಿ
ಇನ್ನೂ ಬಿಳಿ ಪಾರಿವಾಳ
ಹುಡುಕುತ್ತಾರೆ!!!

ಚಿತ್ರಕೃಪೆ: adriansvcblog.blogspot.com

12.9.08

ಹೆದ್ದಾರಿ ಕಥಾನಕಗಳು

ಅಬ್ಬಾ ಇದು ಹೆದ್ದಾರಿಯೇ ಎಂಬ ಅನುಮಾನ ಬರುವಂತಹ ಕೆಟ್ಟ ರಸ್ತೆ ಅದು.
ಸಾಮಾನ್ಯವಾಗಿ ಇಡೀ ದಿನ ಬ್ಯುಸಿಯಾದ ರಸ್ತೆಗೆ ನಿದ್ರಿಸಲೂ ಬಿಡದಂತೆ ಅನಿಲ, ಅದಿರು ಟ್ಯಾಂಕರ್‍ಗಳು ಓಡುತ್ತವೆ.
ಆದರೆ ಇಂದು ಎಂದಿನಂತಿಲ್ಲ...
ಬಹಳ ದಿನದ ಬಳಿಕ ಮಳೆಯಾಗಿ ರಸ್ತೆಯೇ ತೊಯ್ದು ಹೋಗಿದೆ. ಅದಕ್ಕೋ ಏನೋ ರಾತ್ರಿ ಓಡಾಟದ ಲಾರಿ ಚಾಲಕರು ರಸ್ತೆ ಬದಿಯೇ ಲಾರಿ ನಿಲ್ಲಿಸಿ ನಿದ್ರೆಗೆ ಶರಣಾಗಿದ್ದಾರೆ.
ಆದರೆ ಆ ಜಂಕ್ಷನ್‌ನಲ್ಲಿ ಇನ್ನೂ ಮನುಷ್ಯ ಜೀವವೊಂದು ಕಾಣುತ್ತಿದೆ.
ಸರಿಯಾಗಿ ಉರಿಯದೆ ಮಿಣಕ್ ಮಿಣಕ್ ಅನ್ನುವ ಸೋಡಿಯಂ ವೇಪರ್‍ ಲೈಟಿನಡಿಯೇ ಸಣ್ಣ ಗೂಡಂಗಡಿಯಲ್ಲಿ ನೀರು ದೋಸೆ ಮಾರುವವನಾತ.
ಯಾವಾಗಲೂ ಸಾಲುಗಟ್ಟಿ ನಿಂದು ನೀರು ದೋಸೆ ತಿಂದು ಟೀ ಕುಡಿದು ಹೋಗುವವರು ಇಂದೇಕೋ ಕಾಣುತ್ತಿಲ್ಲ. ಹಾಗಾಗಿ ಆತನ ಮುಖದಲ್ಲೂ ನಿರಾಸೆ.
ದೋಸೆಯಾತ ನಿದ್ದೆಗೆ ಜಾರುವಷ್ಟರಲ್ಲಿ ಬೈಕ್ ಹಾರ್ನ್. ನೋಡಿದರೆ ಬೈಕ್ ಮೇಲೆ ಥೇಟ್ ರಸ್ತೆಯಂತೇ ತೊಯ್ದು ಹೋದ ಯುವಕ.
ನೋಡಿದರೆ ಕಾಲ್ ಸೆಂಟರಿನವನೋ, ರಾತ್ರಿ ಬೀಟ್ ಮುಗಿಸಿ ಬರುವ ಪತ್ರಕರ್ತನೋ ಇರಬಹುದು.
೨೦ ಪ್ಲೇಟ್ ಪಾರ್ಸೆಲ್ ಮಾಡು ರೂಂಮೇಟ್‌ಗಳೂ ಹಸಿದಿರಬಹುದು...ಎಂದ ಬೈಕ್ ಸವಾರ.
ಖುಷಿಯಾಯ್ತು ದೋಸೆಯಾತನಿಗೆ.
ಸ್ಯಾಂಪಲ್ ಒಂದು ಕೊಡು, ಎಂದು ಒಂದು ಪ್ಲೇಟ್ ನೀರು ದೋಸೆ ತಿಂದ ಬೈಕ್‌ನವನು.
ಗಿರಾಕಿಯಿಲ್ಲದೆ ಎರೆದ ದೋಸೆ, ಉಳಿದ ಹಿಟ್ಟು ಹಾಳಾಗಿ ಹೋಗುತ್ತಿತ್ತು, ಈ ಮಹಾಮನುಷ್ಯ ಬಂದು ೨೦ ಪ್ಯಾಕ್ ಮಾಡು ಎಂದದ್ದು ದೋಸೆಯಾತನಿಗೆ ಹೊಸ ಉತ್ಸಾಹ ಮೂಡಿಸಿತು.
೨೦ ಪ್ಲೇಟ್ ಪಾರ್ಸೆಲ್ ಕೊಟ್ಟ.
ಬೈಕ್‌ನಾತ ನೋಟೊಂದನ್ನು ಚಾಚಿದ.
ದೋಸೆ ನಿಜಕ್ಕೂ ಚೆನ್ನಾಗಿದೆ...ಹಾಗಾಗಿ ಚಿಲ್ಲರೆ ಬೇಡ ಎಂದ...
ಹಾಗಾದರೆ ಇನ್ನೆರಡು ಬಿಸಿ ದೋಸೆ ಇಕೋ ಎಂದು ಪ್ಯಾಕ್ ಮಾಡಿಕೊಟ್ಟ ದೋಸೆಯಾತ...
ಇಬ್ಬರೂ ನಕ್ಕರು...
ಯಾವುದೋ ಜನ್ಮದ ಬಂಧುಗಳಂತೆ...
ಮಿಣಗುಡುತ್ತಿದ್ದ ಸೋಡಿಯಂ ವೇಪರ್‍ ಈಗ ಪ್ರಕಾಶಮಾನವಾಗಿ ಉರಿಯಿತು.
ಬೈಕ್ ಮುಂದಕ್ಕೋಡಿತು...ಮಳೆ ಸುರಿಯುತ್ತಲೇ ಇತ್ತು....


***************

ಅದು ಎಕ್ಸ್‌ಪ್ರೆಸ್ ಹೈವೇ...
ರಾಷ್ಟ್ರವನ್ನು ವಿಶ್ವದಲ್ಲೇ ಪ್ರಖ್ಯಾತಗೊಳಿಸಲು ಪಣತೊಟ್ಟವರಿಗೆ ತೊಂದರೆಯಾಗಬಾರದು, ಅವರು ಬೇಗಬೇಗನೆ ತಮ್ಮ ಗಮ್ಯ ಸೇರಬೇಕು ಎಂದು ನಿರ್ಮಿಸಿದ ಆರು ಪಥಗಳ ಹೆದ್ದಾರಿ.
ಮಿಂಚಿನಂತೆ ಕಣ್ಣು ಕೋರೈಸುವ ಹೆಡ್‌ಲೈಟ್‌ಗಳೊಂದಿಗೆ ವಾಹನಗಳು ಹರಿದಾಡುತ್ತಿವೆ. ರಸ್ತೆಗೆ ಅಡ್ಡ ಬರುವ ನಾಯಿಗಳಿಗೆ ಯಾವ ವಾಹನವೂ ಅಲ್ಲಿ ಬ್ರೇಕ್ ಹಾಕದು, ಅಪರೂಪಕ್ಕೊಮ್ಮೆ ಓಡುವ ಟೂ ವೀಲರ್‍ ಹೊರತು ಪಡಿಸಿ. ಹಾಗಾಗಿ ಆ ರಸ್ತೆಯನ್ನು ನಾಯಿಗಳು ಆತ್ಮಹತ್ಯಾ ತಾಣವಾಗಿ ಗುರುತಿಸಿಕೊಂಡಿದ್ದವು.
ಲೇಟ್‌ನೈಟ್ ಪಾರ್ಟಿ ಮುಗಿಸಿದ ತಂಡವೊಂದು ಯಾವುದೋ ಪಬ್ಬೊಂದರಿಂದ ಹೊರಬಿದ್ದಿದೆ, ಅವರ ಕಾರಿನ ನಾಗಾಲೋಟಕ್ಕೆ ಬೈಕೊಂದು ಸಿಕ್ಕಿ ಅದರಲ್ಲಿದ್ದ ಇಬ್ಬರು ವಿಲವಿಲನೆ ಒದ್ದಾಡುತ್ತಿದ್ದಾರೆ.
ಕಾರ್‌ನಿಂದ ಹೋ ಎಂಬ ಕೇಕೆ ಬಿಟ್ಟರೆ ಬೇರೇನೂ ಕೇಳಲಿಲ್ಲ. ಹಿಂದಿನಿಂದ ಬಂದ ಮರ್ಸಿಡೀಸ್‌ ಹಾಗೇ ಬ್ರೇಕ್ ಹಾಕಿತು. ಕಿಟಿಕಿ ಕೆಳಗೆ ಸರಿದು ಮುಖವೊಂದು ಇಣುಕಿದು. ರಸ್ತೆ ಮೇಲೆ ನರಳುತ್ತಿದ್ದ ವ್ಯಕ್ತಿ ದೈನ್ಯನಾಗಿ ನೋಡಿದ.
ಕಿಟಿಕಿ ಮತ್ತೆ ಮುಚ್ಚಿತು. ಮರ್ಸಿಡಿಸ್ ಮುಂದಕ್ಕೋಡಿತು.
ನರಳುತ್ತಿದ್ದವರಿಬ್ಬರು ನಿಧಾನವಾಗಿ ನಿಶ್ಚಲರಾಗುತ್ತಿದ್ದುದನ್ನು ರಸ್ತೆ ಮೀಡಿಯನ್‌ನಲ್ಲಿ ಮಲಗಿದ್ದ ನಾಯಿಯೊಂದು ಅಸಹಾಯಕತೆಯಿಂದ ನೋಡಿ ಬಾಲ ಅಲ್ಲಾಡಿಸಿತು.

10.9.08

ದಪ್ಪ ಬೊಟ್ಟಿನ ಅಜ್ಜನಿಗೆ ಕೊನೆ ನಮನ

ಅವರು ಥೇಟ್ ಅಜ್ಜಿಯಂತೇ ಕಾಣುತ್ತಾರೆ. ನೊಸಲ ಮೇಲೆ ದಪ್ಪ ವಿಭೂತಿಯ ಬರೆ, ಅದಕ್ಕೆ ತಾಗುವಂತೆ ಹಣೆ ಮೇಲೆ ಕುಂಕುಮದ ದೊಡ್ಡ ಬೊಟ್ಟು.
ಪುನೀತಭಾವದಲ್ಲಿ ಕೈಯಲ್ಲಿ ಪಿಟೀಲು ಹಿಡಿದು ಕುಂತರೆ ಗಂಟೆಗಟ್ಟಲೆ ಕಾಲ ಸಂಗೀತ ವೈಭವ...ಕೇಳುಗ ನೋಡುಗರಿಗೆ ಬೇಜಾರಾಗದಂತೆ ರಾಗ ಮಿಡಿಯುವವರು.
ಎರಡು ವರ್ಷ ಹಿಂದೆ ಮೂಡುಬಿದ್ರೆಯ ಆಳ್ವಾಸ್ ವಿರಾಸತ್‌ಗೆ ಬಂದಿದ್ದ ಕುನ್ನಕುಡಿ ಒಂದೂವರೆ ಗಂಟೆ ಕಾಲ ಮೋಡಿ ಮಾಡಿದ್ದರು. ಈ ಅಜ್ಜನಿಗೆ ಇತರ ಅನೇಕ ಸಂಗೀತಗಾರರಂತೆ ಸಿಟ್ಟು ಬರದು. ಸಂಗೀತ ನುಡಿಸುತ್ತಲೇ ಮುಖಭಾವಗಳಲ್ಲು ನವರಸ ಸೂಸುತ್ತಾ ನೋಡುಗರಲ್ಲಿ ನಗು ಎಬ್ಬಿಸಬಲ್ಲವರು. ಮೂಡುಬಿದಿರೆಯ ಕಛೇರಿಯಲ್ಲಿ ಆರಂಭದಿಂದ ಅಂತ್ಯದ ವರೆಗೂ ಎಲ್ಲೂ ಗುಣುಗುಟ್ಟುವಿಕೆ ಇರಲಿಲ್ಲ, ಕೇಳಿದ್ದು ಚಪ್ಪಾಳೆ ಮಾತ್ರ.

ಕೇಳುಗರನ್ನು ಗಂಟೆಗಟ್ಟಲೆ ಕಾಲ ಪರವಶಗೊಳಿಸುವ ಅಂತಹ ಕಲೆ ಬೆರಳೆಣಿಕೆಯ ಸಂಗೀತಗಾರರಿಗಷ್ಟೇ ಸಿದ್ಧಿಸಿದೆ.
ಅವರ ಪಿಟೀಲಿನ ಮೊರೆತ ಅನೇಕರ ಮೊಬೈಲಿಗೆ ರಿಂಗ್‌ಟೋನ್ ಆಗಿದೆ. ಮನಸಿಗೆ ಬೇಸರವೆನಿಸಿದಾಗ ಪಿಟೀಲಿನ ದನಿ ಸುಶ್ರಾವ್ಯವಾಗಿ ಮನಮುಟ್ಟುತ್ತದೆ.
ಅದರಲ್ಲು ಕರ್ನಾಟಕ ಸಂಗೀತ ಶೈಲಿಯಲ್ಲಿ ಅವರ ದಾಸರ ಪದಗಳನ್ನು ಕೇಳಿದರೆ ಎಂಥವರೂ ತಲೆದೂಗಲೇ ಬೇಕು. ಯುವವೃಂದಕ್ಕೂ ಕೇಳಲು ಖುಷಿಕೊಡುವ ಅವರ ಡ್ರೀಂ ಡಾನ್ಸ್‌ನಂತಹ ಆಲ್ಬಂಗಳು ಮನಮೋಹಕ.
೧೨ರ ಹರೆಯದಲ್ಲೇ ಪಿಟೀಲಿನತ್ತ ಆಕರ್ಷಿತರಾದರು ಕುನ್ನಕುಡಿ. ಅದುವರೆಗೆ ಕೇವಲ ಪಕ್ಕವಾದ್ಯವಾಗಿಯಷ್ಟೇ ಬಳಕೆಯಲ್ಲಿದ್ದ ಪಿಟೀಲಿಗೂ ಅದರದ್ದೇ ಆದ ಘನತೆಯನ್ನು ತಂದುಕೊಟ್ಟು ಸೋಲೋ ಆಗಿ ಪ್ರದರ್ಶನಕೊಟ್ಟವರವರು. ಪಿಟೀಲು ನುಡಿಸುತ್ತೇನೆ ಎಂಬ ಕಾರಣಕ್ಕೆ ಜನ ಅಸಡ್ಡೆ ತೋರಿದರು. ಅದನ್ನೇ ಸವಾಲಾಗಿ ಸ್ವೀಕರಿಸಿದೆ, ನನ್ನದೇ ಆದ ಶೈಲಿ ರೂಪಿಸಿಕೊಂಡೆ, ಇದನ್ನು ಜನ ಒಪ್ಪಿಕೊಂಡರು ಎಂದು ಒಂದೆಡೆ ಸಂದರ್ಶನದಲ್ಲಿ ಕುನ್ನಕುಡಿ ಹೇಳಿಕೊಂಡಿದ್ದಾರೆ.
ಪಿಟೀಲಿನಲ್ಲಿಯೂ ಬೆರಳುಗಳ ಸೂಕ್ಷ್ಮ ಚಲನೆ ಮೂಲಕ ವಿಸ್ಮಯ ಸೃಷ್ಟಿ ಅವರ ವಿಶೇಷ. ಕೇವಲ ಶಾಸ್ತ್ರೀಯ ಶೈಲಿಯನ್ನೇ ನೆಚ್ಚಿಕೊಂಡಿರಲಿಲ್ಲ. ನಮ್ಮನ್ನು ಬೆಳೆಸಿದ್ದು ಪ್ರೇಕ್ಷಕರು, ಅವರಿಗಾಗಿ ಆಗಾಗ ಲಘುಸಂಗೀತ ನುಡಿಸಿದರೆ ತಪ್ಪಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ನಮ್ಮ ವೀಟ್ಟು ದೈವಂ, ಕನ್ನಕಾಚಿ, ಮೆಲ್ ನಟ್ಟ ಮರುಮಗಲ್ ಎಂಬ ಚಿತ್ರಗಳಿಗೆ ಅವರು ಸಂಗೀತವನ್ನೂ ನೀಡಿದ್ದಾರೆ.

೭೫ರ ಹರೆಯದಲ್ಲಿ ಕುನ್ನಕುಡಿ ಪಿಟೀಲು ಸ್ತಬ್ದವಾಗಿದೆ, ಅವರ ಸುಮಧುರ ರಚನೆಗಳಷ್ಟೇ ನಮ್ಮ ಮನದಲ್ಲಿ ಅನಂತವಾಗಿರುತ್ತದೆ.
ಅವರ ಸುಂದರ ಕಲಾಕೃತಿಯೊಂದು ಇಲ್ಲಿದೆ. ಕೇಳಿ, ದೊಡ್ಡ ಬೊಟ್ಟಿನ ಅಜ್ಜನಿಗೆ ನಿಮ್ಮ ಮನತುಂಬಿದ ಶ್ರದ್ಧಾಂಜಲಿ ಇರಲಿ......

7.9.08

ಫೂಂಕ್‌ನಲ್ಲೇನಿದೆ?

ರಾಮ್ ಗೋಪಾಲ್ ವರ್ಮಾ ನನಗಿಷ್ಟವಾಗುವುದು ಆತನ ಪ್ರಯೋಗಶೀಲತೆ, ಅಧ್ಯಯನಕ್ಕೆ.
ನನಗೆ ರೆಸ್ಟ್ ಎನ್ನುವುದೇ ಇಲ್ಲ, ಪತ್ನಿಯೂ ಇಲ್ಲ, ಮಕ್ಕಳಿಲ್ಲ. ಬೆಳಗ್ಗೆ ಎದ್ದು ಮಾಡುವ ಕೆಲಸ ಎಂದರೆ ಸಿನಿಮಾ ನೊಡೋದು ಎಂದು ಇತ್ತೀಚೆಗೆ ವರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಏಕತಾನತೆಗೆ ಕಟ್ಟುಬಿದ್ದಿದ್ದ ಬಾಲಿವುಡ್ಡಿಗೆ ಪ್ರಯೋಗಶೀಲತೆ ತಂದುಕೊಟ್ಟವರು ವರ್ಮಾ. ನಿರಂತರ ಪ್ರಯೋಗಶೀಲತೆಯ ಧಾರೆಯಲ್ಲಿ ಅವರು ಆಗೀಗ ವಿರ್ಮಕರಿಂದ ಭೇಷ್ ವರ್ಮಾ ಅನ್ನಿಸಿಕೊಂಡದ್ದಿದೆ, ಹೀನಾಮಾನಾ ಟೀಕಿಸಲ್ಪಟ್ಟದ್ದೂ ಇದೆ. ಆದರೆ ವಿಮರ್ಶಕರು ಏನೇ ಬರೆಯಲಿ, ತನ್ನ ಪ್ರಯೋಗಶೀಲತೆಯನ್ನು ವರ್ಮಾ ಉಳಿಸಿಕೊಂಡಿದ್ದಾರೆ ಎಂದೇ ಹೇಳಬಹುದು.



ಮೊನ್ನೆ ವರ್ಮಾನ ಇತ್ತೀಚೆಗಿನ ಚಿತ್ರ ‘ಫೂಂಕ್’ ನೋಡಿದೆ. ಅನೇಕ ಹಾರರ್‍ ಸಿನಿಮಾಗಳು ಬಂದಿವೆ ನಿಜ, ಆದರೆ ಹೆಚ್ಚಿನವೂ ಭೂತ, ಪ್ರೇತಗಳ ಬಗ್ಗೆಯೇ ತಯಾರಾದವು. ಬ್ಲಾಕ್ ಮ್ಯಾಜಿಕ್ ಅಥವಾ ವಾಮಾಚಾರ, ಮಾಟಮಂತ್ರಗಳ ಬಗ್ಗೆ ಸಿನಿಮಾ ಸಾಕಷ್ಟು ಬಂದಿಲ್ಲ, ವಾಮಾಚಾರವನ್ನೂ ಭಯಾನಕವಾಗಿ ತೋರಿಸುತ್ತದೆ ಫೂಂಕ್.

ತಮ್ಮ ಚಿತ್ರಗಳಿಗೆ ಹೊಸಮುಖಗಳನ್ನ ಅರಸುತ್ತಿರುವ ವರ್ಮಾಗೆ ಈ ಸಲ ನಮ್ಮ ಕಿಚ್ಚ ಸುದೀಪ್ ಸಿಕ್ಕಿದ್ದಾರೆ. ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ ಸುದೀಪ್. ಅವರ ಮುಖಭಾವ ಇಂತಹ ಹಾರರ್‍ನ ಗಂಭೀರತೆಗೆ ಸರಿಯಾಗಿ ಒಪ್ಪುತ್ತದೆ. ದೇವರನ್ನು, ದೈವವನ್ನು ನಂಬದೆ ಶುದ್ಧ ನಾಸ್ತಿಕ ಸಿವಿಲ್ ಇಂಜಿನಿಯರ್‍ ರಾಜೀವ್ (ಸುದೀಪ್). ಕಟ್ಟಡ ನಿರ್ಮಾಣಕ್ಕೆ ನೆಲ ಅಗೆಯುವಾಗ ಗಣಪತಿ ಆಕಾರದ ಬಂಡೆ ಸಿಗುತ್ತದೆ, ಅಲ್ಲಿ ಒಂದು ಚಿಕ್ಕ ಗಣಪತಿ ಗುಡಿ ನಿರ್ಮಿಸಲು ಕೆಲಸದವರು ಮನವಿ ಮಾಡಿದರೂ ಕೇಳುವುದಿಲ್ಲ. ಇಂತಿಪ್ಪ ರಾಜೀವ್‌ಗೆ ಆಸ್ತಿಕ ಪತ್ನಿ, ಧಾರ್ಮಿಕ ಶ್ರದ್ಧೆಯ ತಾಯಿ ಮತ್ತು ಇಬ್ಬರು ಮುದ್ದಾದ ಮಕ್ಕಳು. ಇವರಲ್ಲದೆ ಮನೆಯಲ್ಲಿ ಅಡುಗೆಯವಳು ಹಾಗೂ ಕಾರಿನ ಚಾಲಕ ವಾಸಿಸುತ್ತಾರೆ.

ತನ್ನ ಹೊಸ ಕಾಂಟ್ರಾಕ್ಟ್‌ವೊಂದರಲ್ಲಿ ತನ್ನೊಂದಿಗಿರುವ ಮಧು ಮತ್ತು ಅನ್ಶುಮನ್ ಮೋಸ ಮಾಡಿದ್ದು ತಿಳಿದು ಅವರನ್ನು ಕೆಲಸದಿಂದ ಕಿತ್ತು ಹಾಕುವ ರಾಜೀವ್‌ ಮನೆ ಮೇಲೆ ಮಾಟದ ಛಾಯೆ ಕಾಡುತ್ತದೆ. ಮುದ್ದಿನ ಮಗಳನ್ನು ಆಗಿಂದಾಗ್ಗೆ ಕಾಡುವ ಕಾಣದ ಶಕ್ತಿಗಳು ಆಸ್ತಿಕನ ನಂಬಿಕೆಯನ್ನು ಕ್ಷೀಣಿಸುವಂತೆ ಮಾಡುತ್ತವೆ ಎನ್ನುವುದೇ ಕಥೆಯ ಹಂದರ. ಅಂತಿಮವಾಗಿ ಸಿನಿಮಾ ಏನನ್ನೂ ಹೇಳುವುದಿಲ್ಲ. ಮಗು ಹುಷಾರಾಗುತ್ತದೆ. ಅದು ವಾಮಾಚಾರಕ್ಕೆ ಪ್ರತಿಯಾದ ಮಂತ್ರದಿಂದಲೋ, ಅಥವಾ ಮನೋವೈದ್ಯೆಯ ಚಿಕಿತ್ಸೆಯಿಂದಲೋ ಎಂಬುದನ್ನು ವೀಕ್ಷಕರ ನಿರ್ಧಾರಕ್ಕೆ ಬಿಟ್ಟಿದ್ದಾರೆ ವರ್ಮಾ.

ಸಮಾಜದ ವಿವಿಧ ಮಜಲುಗಳನ್ನು ಕೈಗೆತ್ತಿಕೊಂಡು ಆ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ಚಿತ್ರ ಸಿದ್ಧ ಪಡಿಸುವುದೇ ವರ್ಮಾ ಮರ್ಮ. ಯಂಡಮೂರಿ ವೀರೇಂದ್ರನಾಥ್ ವಾಮಾಚಾರದ ಕುರಿತು ಬರೆದ ‘ತುಳಸಿ’ ಮತ್ತು ‘ತುಳಸೀದಳ’ ಕಾದಂಬರಿಗಳನ್ನು ನೀವು ಓದಿರಬಹುದು, ಅದರಂದಲೇ ವರ್ಮಾ ಕೂಡ ಪ್ರಭಾವಿತರಾಗಿ ಈ ಚಿತ್ರ ಸಿದ್ಧಪಡಿಸಿದ್ದಾರೆ.
ಇದೊಂದು ಅತ್ಯುತ್ತಮ ಚಿತ್ರ ಎನ್ನಲಾಗದು. ಆದರೆ ಅವರ ಪ್ರಯತ್ನಕ್ಕೆ ಶಾಭಾಷ್ ಎನ್ನದಿರಲೂ ಆಗದು.

ಹಿಂದೆ ‘ಕೌನ್’, ‘ಡರ್ನಾ ಮನಾ ಹೈ’ ಮುಂತಾದ ಒಳ್ಳೆಯ ಹಾರರ್‍ ಚಿತ್ರ ಕೊಟ್ಟವರು ಆರ್‍ಜೀವಿ. ಅದೇ ರೀತಿ ಭೂತ್, ಡರ್ನಾ ಜರೂರಿ ಹೈ ಮುಂತಾದ ಡಬ್ಬಾ ಚಿತ್ರಗಳನ್ನೂ ಕೊಟ್ಟವರೇ.

ಮನೆಯ ಚಿಕ್ಕ ಪುಟ್ಟ ವಸ್ತುಗಳನ್ನೇ ಎದ್ದು ಕಾಣುವಂತೆ ಫೋಕಸ್ ಆಗುತ್ತಾ, ಅನೂಹ್ಯ ಕೋನಗಳಿಂದ ಸೆರೆ ಹಿಡಿಯುವ ಕ್ಯಾಮೆರಾ ವರ್ಕ್ ಸೂಪರ್‍. ಮರದ ಮೇಲೆ ಕೂತಿರುವ ಕಾಗೆ, ಚರಂಡಿಯೊಳಗೆ ಅವಿತ ಕಪ್ಪು ಬೆಕ್ಕು ಕೂಡಾ ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಂಡಿಲ್ಲ! ಆದರೆ ಕೆಲವೆಡೆ ಅನಗತ್ಯ ಎನ್ನುವಷ್ಟು ಕರ್ಕಶ ಹಿನ್ನೆಲೆ ಸಂಗೀತ.

ಸುದೀಪ್ ಬಿಟ್ಟರೆ ನಟನೆಯಲ್ಲಿ ಮಿಂಚಿದ್ದು ಬಾಲಕಿ ರಕ್ಷಾ (ಅಹಸಾಸ್ ಚನ್ನಾ) ವಾಮಾಚಾರದ ಪ್ರಭಾವಕ್ಕೊಳಗಾಗುವ ಆಕೆಯ ನೋಟವೇ ಕಣ್ಣಿನಲ್ಲಿ ಉಳಿದುಬಿಡುತ್ತದೆ. ಉಳಿದಂತೆ ಮಾಂತ್ರಿಕ ಝಾಕಿರ್‍ ಹುಸೈನ್ ಎಂದಿನಂತೆ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.
ಮೊದಲಾರ್ಧದಲ್ಲಿ ನಿಮ್ಮನ್ನು ಅಷ್ಟೇನು ಭಯಭೀತಗೊಳಿಸದಿದ್ದರೂ ಉತ್ತರಾರ್ಧದಲ್ಲಿ ಪೂರ್ತಿಯಾಗಿ ವಾಮಾಚಾರದ ಲೋಕ ಆವರಿಸಿಬಿಡುತ್ತದೆ. ಆದರೆ ವರ್ಮಾ ಹೇಳುವಷ್ಟೇನೂ ಹಾರರ್‍ ಅಂಶಗಳು ಇಲ್ಲಿಲ್ಲ.
ಕೊನೆ ಮಾತು: ನಿರೀಕ್ಷೆ ಇಟ್ಟು ಕೊಂಡು ವರ್ಮಾ ಸಿನಿಮಾ ನೋಡಬೇಡಿ. ಹಾಗೇ ಸುಮ್ಮನೆ ಡಿಫರೆಂಟ್ ಅನುಭವಕ್ಕಾಗಿ ನೋಡಿ!
(ಫೂಂಕ್ ಹಿಂದಿ ಪದದ ಅರ್ಥ ಬಾಯಿಯಿಂದ ಗಾಳಿ ಊದುವುದು)
Related Posts Plugin for WordPress, Blogger...