19.2.09

ಪ್ರೀತಿಯೆಂಬ ಉಸುಕಿನಲ್ಲಿ

ನೀನಿಲ್ಲದ ಖಾಲಿತನ
ತುಂಬುವುದಕ್ಕೆ
ಈ ಖಾಲಿಹಾಳೆಯಲ್ಲಿ
ಒಂದಿಷ್ಟು ಸಾಲುಗಳನ್ನು
ಬಿಕ್ಕಿದ್ದೇನೆ

ನೀ ದೂರವಾದಂದಿನಿಂದ
ಸಿಡಿ ಪ್ಲೇಯರು
ಶೋಕಗೀತೆಗಳನ್ನಷ್ಟೇ
ಹಾಡುತ್ತಿದೆ

ಕಡಲತೀರದಲ್ಲಿ
ಚದುರಿಕೊಂಡಿರುವ
ಖುಷಿಯ ಚಿಪ್ಪುಗಳನ್ನು
ಒಟ್ಟುಗೂಡಿಸಲಾಗದೆ
ಸೋತಿದ್ದೇನೆ

ಪ್ರೀತಿಯೆಂಬ
ಉಸುಕುಭೂಮಿಯಲ್ಲಿ
ಕಂಠಮಟ್ಟ ಹುದುಗಿ
ಹೋಗಿದ್ದೇನೆ,
ಪೂರ್ತಿ ಮುಳುಗುವ
ಮೊದಲು ಸ್ವರ
ಉಳಿದರೆ ನಿನ್ನ
ಹೆಸರೇ ಹೇಳುವಾಸೆ!

14.2.09

ಗುಲಾಬಿ ನೆನಪುಗಳು


ನಿನ್ನೆ ಸುರಿದ ಮಳೆಗೆ
ಭೋರ್ಗರೆದಿದೆ ನದಿ
ತೊಟ್ಟಿಕ್ಕಿದೆ ಜಲ, ಮರದ
ಎಲೆಗಳಲ್ಲಿ....

.......ಅವಳ ಕಣ್ಣಲ್ಲಿ ಮಾತ್ರ ಪಸೆಯಿಲ್ಲ


*******

ದೂರದಲ್ಲೆಲ್ಲೋ ರೈತ ಮಾರಾಟಕ್ಕೆ
ಬೆಳೆದು ಇಂದು ಮಾರುಕಟ್ಟೆ
ಸೇರಿದ ಗುಲಾಬಿಗೂ
ಚೆಲುವೆಯ ಮುಡಿಯೇರುವ ನೆನಪಿಂದ
ರೋಮಾನ್ಸಿನ ಅಮಲು!
********
ರಾತ್ರಿಯಿಡೀ ಆಗಸದಲ್ಲಿ ಕಣ್ಣು
ನೆಟ್ಟಾಗ ಸಿಡಿದ ಉಲ್ಕೆಗಳು ಸಾವಿರ
ನನ್ನವಳ ಕಣ್ಣಲ್ಲಿ ಮಾತ್ರ ನಗುತ್ತಿದ್ದಾನೆ
ಪೋಲಿ ಹುಣ್ಣಿಮೆ ಚಂದಿರ

********
ಏನೂ ಅಲ್ಲದ ಅವನಿಗೆ,
ಏನೂ ಇಲ್ಲದ ಅವಳಿಗೆ
ನಡುವೆ
ಅದೇನೋ ಒಲವಲ್ಲಿ
ತುಂಬಲಿದೆ ಭವಿಷ್ಯದ ಜೋಳಿಗೆ

9.2.09

ಟಯರು ಪಂಕ್ಚರ್‍ ಪುರಾಣ

ಬಹುಷಃ ಅತ್ಯಂತ ಕಿರಿಕಿರಿಯ ಅವಸ್ಥೆ ಇದು..ಎಲ್ಲ ಬೈಕ್‌ ರೈಡರ್‌ಗಳನ್ನು ಕಾಡುವ ಸಮಸ್ಯೆ...

ತಡರಾತ್ರಿ ವರೆಗೂ ದುಡಿದು ಇನ್ನೇನು ಒಮ್ಮೆ ಮನೆ ಸೇರಿಬಿಡೋಣ ಎಂದು ದ್ವಿಚಕ್ರ ಸಂಗಾತಿಯ ಬಳಿ ಬಂದು ಕಿಕ್ ಹೊಡೆದು ಮುಂದೆ ಚಲಿಸುವಾಗ ಹಿಂದಿನ ಭಾಗ ಕಡಮೆ ಮಾಲು ಕುಡಿದವರಂತೆ ಓಲಾಡತೊಡಗುತ್ತದೆ. ನೋಡಿದರೆ ಟೈರ್‍ ಫ್ಲಾಟ್! ಇನ್ನೆಲ್ಲೋ ಅರ್ಜೆಂಟಾಗಿ ಹೋಗುತ್ತಿದ್ದೀರಿ..ಅರ್ಧ ಧಾರಿಯಲ್ಲಿ ಬೈಕ್ ಓಲಾಡುತ್ತದೆ...ಟೈರು ಬಡಕಲು ನಾಯಿಯಂತಾಗಿರುತ್ತದೆ...
ನಿಮ್ಮ ದ್ವಿಚಕ್ರ ವಾಹನ ಸ್ಕೂಟರ್‍ ಆಗಿದ್ದು ಸ್ಟೆಪ್ನೀ ಇದ್ದರೆ ಬಚಾವ್..ಟೈರು ಬದಲಾಯಿಸಬಹುದು(ಕಷ್ಟಪಟ್ಟಾದರೂ).
ಆದರೆ ಬೈಕ್ ಆಗಿದ್ದರೆ ಮುಗೀತು ಕಥೆ. ರಾತ್ರಿಯಾಗಿದ್ದರೆ ಪಂಕ್ಚರ್‍ ಹಾಕುವವರೂ ಮನೆಗೆ ಹೋಗಿರುತ್ತಾರೆ. ಹೋಗುವ ಹಂತದಲ್ಲಿದ್ದರೆ ಅವರ ಮನವೊಲಿಸಿ, ದಮ್ಮಯ್ಯಾ ಹಾಕಿ ಕರೆದುಕೊಂಡು ಬಂದು ಟ್ಯೂಬ್‌ಗೆ ಪ್ಯಾಚ್ ಹಾಕಿಸುವುದು ನಮ್ಮ ನಮ್ಮ ಸಾಮರ್ಥ್ಯಕ್ಕೆ ಬಿಟ್ಟ ವಿಚಾರ.
ಮಂಗಳೂರಿನ ನವಭಾರತ ಸರ್ಕಲ್ ಬಳಿಯಲ್ಲೊಬ್ಬ ಅಜ್ಜಿಯ ಟ್ಯೂಬ್ ಪಂಕ್ಚರ್‍ ಅಂಗಡಿಯಿದೆ. ಅಜ್ಜಿ ಕ್ಯಾಷಿಯರ್‍. ವಯಸ್ಸಿಗೆ ತಕ್ಕಷ್ಟು ಧಾರ್ಷ್ಟ್ಯವೂ ಇದೆ. ಆಕೆಯ ಅಸಿಸ್ಟೆಂಟ್ ಹುಡುಗನಿಗೆ ಕೈತುಂಬಾ ಕೆಲಸ. ಒಮ್ಮೆ ರಾತ್ರಿ ೯.೩೦ರ ವೇಳೆಗೆ ಮನೆಗೆ ಹೊರಟಾ‌ಗ ನನ್ನ ಬೈಕ್‌ನ ಟೈರ್‍ ಪ್ಯಾಚ್ ಆಗಿ ‘ತಳ್ಳು ಗಾಡಿ ಐಸಾ’ ಮಾಡಿಕೊಂಡು ಅಜ್ಜಿಯ ಮುಂದೆ ಹೋಗಿ ದೀನಮುಖ ಭಾವ ಹೊತ್ತು ನಿಂದೆ.
ಏನು?! ಎಂಬಂತೆ ಕಣ್ಣಲ್ಲೇ ಅಜ್ಜಿ ಆವಾಝ್ ಹಾಕಿದ್ರು. ಟೈರು ತೋರಿಸಿದೆ.
ಅಲ್ಲೆಲ್ಲೂ ಆಕೆಯ ಪಂಕ್ಚರ್‍ ಪ್ರವೀಣ ಹುಡುಗ ಕಾಣಿಸಲಿಲ್ಲ.
ಟೈಮಾಯ್ತು...ಇವತ್ತಾಗಲ್ಲ ಎಂದು ಖಡಾಖಂಡಿತವಾಗಿ ಹೇಳಬೇಕೆ ಈ ಅಜ್ಜಿ.
ಸುರತ್ಕಲ್‌ಗೆ ಹೋಗಬೇಕು, ೧೦ ಗಂಟೆ ಕಳೆದ್ರೆ ಬಸ್ ಸಿಗಲ್ಲ...ಹೀಗೆ ಅನುನಯದ ದನಿಯಲ್ಲಿ ಅಜ್ಜಿಯನ್ನು ಪುಸಲಾಯಿಸಿದೆ...ಸುಮಾರು ೧೦ ನಿಮಿಷದ ಗೋಗರೆತದ ಬಳಿಕವೂ ಅಜ್ಜಿ ಕರಗಲಿಲ್ಲ. ಕೊನೆಗೆ ಭಾವರಹಿತರಾಗಿ ‘ಹೋದವ ಬರ್‍ಲಿ ಅವ ಮಾಡಿದ್ರೆ ಆಯ್ತು ನನಗ್ಗೊತ್ತಿಲ್ಲ’(ನಿಮ್ಮಂಥವರನ್ನು ಯಾವಾಗಲೂ ನೋಡುತ್ತೇನೆ?) ಎಂಬ ಡೈಲಾಗ್.
ಕೊನೆಗೂ ಸ್ಪಾನರ್‍ಗಳ ನಾದ ಹೊರಹೊಮ್ಮಿಸುತ್ತಾ ಹುಡುಗ ಬಂದ. ಅಜ್ಜಿ ಕಣ್ಣಲ್ಲೇ ಪ್ರಶ್ನಾರ್ಥಕವಾಗಿ ನನ್ನನ್ನೊಮ್ಮೆ, ಟೈರನ್ನೊಮ್ಮೆ ಹುಡುಗನ ಮುಖವನ್ನೊಮ್ಮೆ ನೋಡಿದ್ರು. ಹುಡುಗ ಆಣತಿಯನ್ನು ಅರ್ಥೈಸಿಕೊಂಡವನಂತೆ ನೇರ ಬೈಕನ್ನು ಮೈನ್ ಸ್ಟಾಂಡಿಗೇರಿಸಿ ಸರಸರನೆ ಟೈರು ಕಳಚಿ ತನ್ನ ಕಾರ್ಯ ಶುರು ಹಚ್ಚಿಕೊಂಡ....

ಟೈರಿಗೆ ಪಂಕ್ಚರ್‍ ಹಾಕುವವರು ಹತ್ತಿರವಿದ್ದರೆ, ಪಂಕ್ಚರ್‍ ಹಗಲೇ ಇದ್ದರೆ ನಿಮ್ಮ ಅದೃಷ್ಟ. ಇಲ್ಲವಾದರೆ ಸೈಕಲ್ ಮಾದರಿಯಲ್ಲಿ ಬೈಕನ್ನು ತಳ್ಳಿಕೊಂಡು ಹೋಗಬೇಕು. ಅದೂ ನಿಮ್ಮ ೧೫೦-೧೮೦ ಸಿಸಿಯ ಕೋಣಗಳಂತಹ ಬೈಕಾದರೆ ತಳ್ಳುವುದೂ ಶಿಕ್ಷೆಯೇ! ಊರಿಗೆ ಒಬ್ಬನೇ ಪಂಕ್ಚರ್‍ ಹಾಕುವವನಾದರೆ ಅವನ ಧಿಮಾಕು ನೋಡಬೇಕು. ಗೆಳೆಯರೊಬ್ಬರ ಟೈರು ಪಂಕ್ಚರಾದಾಗ, ಹೊಸ ಟ್ಯೂಬೇ ಹಾಕಬೇಕು ಎಂದು ಪಟ್ಟು ಹಿಡಿದ ಮುದುಕ ಮೆಕ್ಯಾನಿಕ್ ಒಬ್ಬರು ಆಲ್‌ಮೋಸ್ಟ್ ಡಬಲ್ ಹಣ ವಸೂಲಿ ಮಾಡಿದ್ದರಂತೆ. ಕೆಲವರ ಕೆಲಸವೂ ಕಳಪೆ. ಅದೃಷ್ಟವೂ ಕೈಕೊಟ್ಟಿತ್ತೇನೋ..ನಾನೊಮ್ಮೆ ಒಂದು ವಾರದಲ್ಲಿ ನಾಲ್ಕು ಬಾರಿ ಪಂಕ್ಚರ್‍ ಹಾಕಿಸಬೇಕಾಗಿ ಬಂದಿತ್ತು.
ನನ್ನ ಬೈಕ್‌ನ ಟೈರ್‍ ಪಂಕ್ಚರ್‍ ಪ್ರಕರಣಗಳಲ್ಲಿ ಬೇರೆ ಬೇರೆ ರೀತಿಯ ಮೆಕ್ಯಾನಿಕ್‌ಗಳನ್ನು ನೋಡಿದ್ದೇನೆ. ಉಪ್ಪಿನಂಗಡಿ ಬಳಿಯ ನಗು ಮೊಗದ ಮೆಕ್ಯಾನಿಕ್ ಒಬ್ಬರು ಮಧ್ಯಾಹ್ನ ಕರೆಂಟ್ ಇಲ್ಲದಿದ್ದರೂ ಗ್ಯಾಸ್ ಸ್ಟೋವ್ ಬಳಸಿ ಹಾಟ್ ಪ್ರೆಸ್ ಪಂಕ್ಚರ್‍ ಹಾಕಿ, ನಾನು ಹಣದ ಕೊಡುವ ಜತೆ ಥ್ಯಾಂಕ್ಸ್ ಹೇಳಿದಾಗ ಬಹಳ ಖುಷಿ ಪಟ್ಟಿದ್ದರು. ಟೈರ್‍ ಪಂಕ್ಚರಿನಂತಹ ಪೇಚಿನ ಪ್ರಸಂಗಗಳಲ್ಲಿ ಉತ್ತಮ ಸೇವೆ ಕೊಡುವ ಮೆಕ್ಯಾನಿಕ್‌ಗಳು ಆಪದ್ಬಾಂಧವರಂತೆಯೇ ಕಾಣಿಸಿದರೂ ಅಚ್ಚರಿಯಿಲ್ಲ.

5.2.09

ಧೂಮಲೀಲೆ


ತನ್ನ ಪಾಡಿಗೆ ತನ್ನನ್ನೇ
ಸುಟ್ಟುಕೊಂಡು ನನಗೆ
ಸಾಂತ್ವನ ಹೇಳುತ್ತದೆ
ಎಂತಹ
ತ್ಯಾಗಮಯಿ
ನನ್ನ ಸಿಗರೇಟು!

ತಣ್ಣನೆ ರಾತ್ರಿಗಳು
ಕೊರೆಯುವಾಗ
ಅವಳಿಲ್ಲದ
ಗಳಿಗೆಗಳಲ್ಲಿ ಕೊರಗುವಾಗ
ಕೆಂಪಗೆ ಕೊನರುತ್ತಾ
ಬೆಚ್ಚನೆಯ
ಅನುಭೂತಿ ನೀಡುವುದು

ನನ್ನ ಗೆಳತಿಯ ಯೋಚನಾ
ಲಹರಿಯಂತೆ
ಗೊತ್ತುಗುರಿಯಿಲ್ಲದೆ
ಎತ್ತಲೋ ಸುತ್ತುತ್ತಾ
ವಿಲೀನವಾಗುವ
ಸಿಗರೇಟಿನ ಧೂಮ ನಂಗಿಷ್ಟ!
ಶಾಸನ ವಿಧಿಸಿದ ಎಚ್ಚರಿಕೆ
ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ

1.2.09

ಮಂಗಳೂರು ಪಬ್ಬಾಯಣ

-೧-

ಮಂಗಳೂರಿನ ನ್ಯಾಯಾಲಯವದು...ಸಂಸ್ಕೃತಿಯ ‘ರಕ್ಷಕರು’ ಅನುಭವಿಸುವ ಹಕ್ಕು ‘ಉಳ್ಳವರಿಗೆ’ ತದುಕಿದ ಪ್ರಕರಣ*ದ ವಿಚಾರಣೆ ಮೊನ್ನೆ ನಡೆಯುತ್ತಿತ್ತು...ಅಲ್ಲಿ ಮಂಗಳೂರನ್ನು ತಾಲೀಬಾನ್ ಎಂದು ಹೆಸರಿಸಿದವರ ದಂಡೂ ಇತ್ತು...ಈ ದಂಡು(ಅನುಮತಿ ಪಡೆಯದೇ) ಕೋರ್ಟ್ ಸಭಾಂಗಣದಲ್ಲಿ ವಕೀಲರನ್ನೂ ತಳ್ಳಿಕೊಂಡು ಹೋಯಿತು..ಅಷ್ಟೇ ಅಲ್ಲ, ಕೋರ್ಟ್ ಕಲಾಪವನ್ನೇ ಮೊಬೈಲ್‌ನಲ್ಲಿ ದಾಖಲಿಸಲು ಶುರುವಿಟ್ಟರು ದಂಡಿನ ಸದಸ್ಯರು...ಇದನ್ನು ನ್ಯಾಯವಾದಿಗಳು ಪತ್ತೆ ಮಾಡಿ ನ್ಯಾಯಾಧೀಶರ ಗಮನಕ್ಕೆ ತಂದರು, ಕೊನೆಗೆ ಇವರನ್ನೆಲ್ಲ ಛೀಮಾರಿ ಹಾಕಿ ಹೊರಗೆ ಕಳುಹಿಸಲಾಯಿತು.
ಮಂಗಳೂರಿನಲ್ಲಿ ಯಾವ ರೀತಿ ರಾಷ್ಟ್ರೀಯ ದುರಂತ ನಡೆದಿದೆ ಎಂದು ವರದಿ ಮಾಡಲು ಬಂದಿದ್ದವರಿಗೆ, ಮೋರಲ್ ಪೊಲೀಸಿಂಗ್ ಬಗ್ಗೆ ಮೈಕ್ ಹಿಡಿದು ಸುದ್ದಿ ಬದಲು ಅಭಿಪ್ರಾಯಗಳನ್ನೇ ಹೇರುತ್ತಾ ಬಂದ ಛಾನೆಲ್ ಅಣ್ಣಂದಿರಿಗೆ ಕೋರ್ಟ್‌ನಲ್ಲಿ ಮೊಬೈಲ್ ಬಳಸಬಾರದು ಎಂಬ ಕನಿಷ್ಠ ಜ್ಞಾನವಿರಲಿಲ್ಲ....

*(ಅರ್ಥವಾಗಿರುತ್ತೆ...ಈಗಾಗಲೇ ಎಲ್ಲ ಬ್ಲಾಗ್‌ಗಳಲ್ಲೂ ಬಂದಿದೆ, ಅಂತಾರಾಷ್ಟ್ರೀಯ ಸುದ್ದಿ..ಅದೇ ಮಂಗಳೂರು ಪಬ್ ದಾಳಿ)

-೨-

ಅದಾಯ್ತು....
ಎಲ್ಲ ೨೮ ಮಂದಿ ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಕೊಟ್ಟಿತು...ಅದು ನ್ಯಾಯಾಲಯದ ತೀರ್ಪು. ತೀರ್ಪು ಕೊಟ್ಟದ್ದು ಇಷ್ಟವಾಗದಿದ್ದರೆ ಸಂಬಂಧಿಸಿದವರು ಮೇಲ್ಮನವಿ ಸಲ್ಲಿಸಬಹುದು..ಅಷ್ಟಕ್ಕೂ ಜಾಮೀನು ಕೊಟ್ಟಾಕ್ಷಣ ದೋಷಮುಕ್ತರಾಗುವುದಿಲ್ಲ...ಚಾನೆಲ್ಲೊಂದರಲ್ಲಿ ವರದಿಗಾರ್ತಿಯೊಬ್ಬಳು ೧೦ ಮಂದಿ ಹೈಪ್ರೊಫೈಲಿಗರನ್ನು ನಿಲ್ಲಿಸಿ ಅವರ ಬಾಯಿಂದ ಏನೋ ಹೇಳಿಸಲು ಯತ್ನಿಸುತ್ತಿದ್ದಳು.
ನಿಮಗೆ ರಸ್ತೆಯಲ್ಲಿ ಹೋದಾಗ ಯಾರಾದರೂ ಹೊಡೆದರೆ, ಅವರೆಲ್ಲರೂ ಜೇಲಿನಿಂದ ಹೊರಬಂದರೆ ನಿಮಗೆ ಏನನ್ನಿಸುತ್ತದೆ? ಮುಂತಾದ ಪ್ರಶ್ನೆಗಳನ್ನು ಹಾಕಿದಳು.

-೩-

ನಿನ್ನೆಯಷ್ಟೇ ನಿವೃತ್ತರಾದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್‍.ಶ್ರೀಕುಮಾರ್‍ ಮಂಗಳೂರಿಗೆ ಬಂದಿದ್ದರು. ಎಸಿ ಹಾಲ್‌ನಲ್ಲಿ ನಡೆದ ಉದ್ಯಮಿಗಳ ಸಭೆಯೊಂದರಲ್ಲಿ ಮಹಿಳಾಮಣಿಯೊಬ್ಬರು ಡಿಜಿಪಿಗೆ ಹಾಕಿದ ಪ್ರಶ್ನೆ - ‘ನನಗೂ ಟೀನೇಜ್ ಮಕ್ಕಳಿದ್ದಾರೆ, ಅವರು ರಸ್ತೆಯಲ್ಲಿ ನಡೆಯುವಾಗ ಯಾರಾದರೂ ಹೊಡೆದರೆ, ನಿಮ್ಮ ಪೊಲೀಸರು ರಕ್ಷಣೆ ಕೊಡಬೇಡ್ವೇ’
ಅದಕ್ಕೆ ಡಿಜಿಪಿಯವರ ಉತ್ತರ - ‘ಪೊಲೀಸರು ಖಂಡಿತಾ ಕ್ರಮ ಕೈಗೊಳ್ಳಲೇಬೇಕು, ಆದರೆ ಮಕ್ಕಳ ಹೆತ್ತವರಿಗೂ ಸ್ವಲ್ಪ ಜವಾಬ್ದಾರಿ ಇರಬೇಕು’

-೪-
ಮೊನ್ನೆ ಪಬ್ ದಾಳಿ ನಡೆದ ಬಳಿಕ ವಿಚಾರಣೆಗೆ ಕೇಂದ್ರ ಮಹಿಳಾ ಆಯೋಗ ಮಂಗಳೂರಿಗೆ ಬಂತು. ಅಮ್ನೆಸಿಯಾ ಪಬ್‌ಗೆ ಭೇಟಿ ನೀಡಿತು. ಆಯೋಗದ ಸದಸ್ಯೆ ರಾಜ್ಯದವರೇ..ನಿರ್ಮಲಾ ವೆಂಕಟೇಶ್.
ಅಮ್ನೆಸಿಯಾ(ಇದು ಪಬ್ ಅಲ್ಲ, ಬಾರ್‍, ಇಲ್ಲಿ ಬಿಯರ್‍ ಮಾತ್ರವಲ್ಲ ಇತರೇ ಮದ್ಯಕ್ಕೂ ಅವಕಾಶ ಇದೆ, ಪಕ್ಕದಲ್ಲೇ ಇರೋ ವುಡ್ಸೈಡ್ ಹೊಟೇಲಲ್ಲಿ ರೂಮ್ ಮಾಡೋವ್ರಿಗೆ ಲಿಕ್ಕರ್‍ ನೀಡೋ ಬಾರ್‍ ಎನ್ನೋದು ಅಬಕಾರಿ ಇಲಾಖೆ ಅಧಿಕಾರಿ ಸಮಜಾಯಿಷಿ ಇದೆ)ಗೆ ಭೇಟಿ ನೀಡಿದ ಮಹಿಳಾ ಆಯೋಗದ ಸದಸ್ಯೆ ಹಾಸ್ಯಗೋಷ್ಠಿ ಮಾದರಿಯಲ್ಲಿ ಪಬ್ ಮ್ಯಾನೇಜರ್‌ಗೆ ಕ್ಲಾಸ್ ತೆಗೆದುಕೊಂಡರು...ಹೀಗೆ...
‘ಏನಪ್ಪಾ ಹುಡುಗೀರು ನಿನ್ನ ಪಬ್‌ಗೆ ಬರೋವಾಗ ಸೆಕ್ಯೂರಿಟಿ ಕೊಡಬೇಡ್ವ?
‘ಅಲ್ಲ... ಗಂಡಸಾಗಿ ಹೊರಗಿನವ್ರನ್ನ ತಡೆಯೋಕೆ ಆಗಿಲ್ವ? ಇಷ್ಟು ದಪ್ಪಕ್ಕಿದ್ದೀಯಾ ಅವ್ರನ್ನ ಸುಮ್ನೇ ಹೊಡೆಯೋಕೆ ಬಿಟ್ಯಾ’
‘ಈಗ ನಾನೇ ಬರ್‍ತೀನಿ, ಪ್ರಾಂಸ್ ತಿನ್ನೋಕೆ ಅಂತ, ಎಲ್ರೂ ಕುಡಿಯೋಕಂತಾನೇ ಬರ್‍ತಾರಾ?’
ಹೀಗೆ ಕ್ಲಾಸ್ ಆದ ಬಳಿಕ ಮೇಡಮ್ಮು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ರು - ಈ ಪಬ್ಬಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ಲೈಸೆನ್ಸ್ ರದ್ದು ಮಾಡಿ..ಉಳಿದ ಪಬ್‌ಗಳಲ್ಲೂ ರಕ್ಷಣೆ ಉಂಟೇ ನೋಡಿ...
ಲೇಟೆಸ್ಟ್ ಸುದ್ದಿ : ಆಯೋಗದ ಸದಸ್ಯೆ ಶ್ರೀರಾಮಸೇನೆಯಿಂದ ಪೆಟ್ಟು ತಿಂದ ಅಕ್ಕಂದಿರನ್ನು ಭೇಟಿಯೇ ಮಾಡಿಲ್ಲಾಂತ ಅಧ್ಯಕ್ಷೆ ಗಿರಿಜಾ ವ್ಯಾಸರಿಗೆ ಕೋಪ ಬಂದಿದೆ!

-೫-
ಮಂಗಳೂರು ತಾಲಿಬಾನ್ ಆಗಿದೆ ಅಂತ ರಾಷ್ಟ್ರೀಯ ಛಾನೆಲ್‌ಗಳು ಬೊಬ್ಬೆ ಹಾಕಿದ್ದೇ ಹಾಕಿದ್ದು. ಶ್ರೀರಾಮ ಸೇನೆಯ ಮಂಗಳೂರಿನ ಲೀಡರ್‌ಗಳೂ ತಾವೀಗ ನ್ಯಾಷನಲ್ ಫಿಗರ್‌ಗಳಾಗಿದ್ದೇವೆ ಎಂಬ ಹೆಮ್ಮೆಯಲ್ಲಿದ್ದಾರೆ.
ಎನೀ ಪಬ್ಲಿಸಿಟಿ ಈಸ್ ಪಬ್ಲಿಸಿಟಿ!
ಮಂಗಳೂರಿನಲ್ಲಿ ಕೋಮು ಗಲಭೆ, ಕರ್ಫ್ಯೂ ಆದಾಗ ಮಾತ್ರ ರಾಷ್ಟ್ರೀಯ ಛಾನೆಲ್‌ಗಳು ಬರುತ್ತವೆ ಎಂಬ ಆರೋಪ ಸುಳ್ಳಾಗಿದೆ.
-೬-
(ಫ್ಲಾಷ್‌ಬ್ಯಾಕ್)
ಕಳೆದ ವರ್ಷ ಮಂಗಳೂರಲ್ಲಿ ಟೈಂಸ್ ಪತ್ರಿಕಾಸಮೂಹದ ಮಿಸ್ ಫೆಮಿನಾ ಇಂಡಿಯಾ ಸ್ಪರ್ಧೆಯ ಆಯ್ಕೆ ಏರ್ಪಡಿಸಲಾಗಿತ್ತು...ಕೊನೇ ಹಂತದಲ್ಲಿ ಶ್ರೀರಾಮಸೇನೆ ಸಂಸ್ಕೃತಿ ಹೆಸರಲ್ಲಿ ಇದಕ್ಕೂ ಅಡ್ಡಿಪಡಿಸಿತ್ತು...ಆಗ ಟೈಂಸ್ ಗ್ರೂಪ್‌ಗೆ ಸೇನೆಯ ಪರಿಚಯವಾಗಿ ಪ್ರೀತಿಗೆ ತಿರುಗಿತು. ಅದುವೇ times now ಚಾನೆಲಲ್ಲಿ ಸೇನೆ ದಿನವೂ ಪ್ರಚಾರ ಪಡೆಯಲು ಕಾರಣ ಇರಬಹುದು ಎಂಬುದೊಂದು ವಿಶ್ಲೇಷಣೆಯೊಂದಿಗೆ ಈ ಅಂಕವು ಪರಿಸಮಾಪ್ತಿಗೊಂಡಿದೆ.
Related Posts Plugin for WordPress, Blogger...