
ಅಲ್ಲಿಲ್ಲಿ ನೋಡಿದಾಗ, ಕೇಳಿದಾಗ ನಂಗೆ ಕಂಡುಬಂದದ್ದಿದು.
ಯು೨ ಚಾನೆಲ್ಲಿನ ನಿರೂಪಕರು ಕನ್ನಡ ಬಾರದೆ, ಕಷ್ಟಪಟ್ಟು ಆಂಗ್ಲಮಿಶ್ರಿತ ಕನ್ನಡದಲ್ಲಿ ಮಾತನಾಡುವುದೇ ತಮಗೆ ಹೆಮ್ಮೆ ಎಂದುಕೊಳ್ಳುತ್ತಾರೆ. ಆದ್ರೆ ಭಾನುವಾರ ರಾತ್ರಿ ‘ಎದೆತುಂಬಿ ಹಾಡಿದೆನು’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ತೆಲುಗುಮೂಲದ ಆದರೆ ಕನ್ನಡದ ಹೆಮ್ಮೆಯ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಕನ್ನಡ ಓದಲು ಬರದಿದ್ದರೂ ಅದೆಷ್ಟು ಚೆನ್ನಾಗಿ ಆದಷ್ಟು ಶುದ್ಧವಾಗಿ ಕನ್ನಡ ಮಾತನಾಡಲು ಯತ್ನಿಸುತ್ತಾರೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅಲ್ಲಿ ವೇದಿಕೆಗೆ ಬರುವ ಮಕ್ಕಳಲ್ಲಿ ಉಚ್ಛಾರ, ವ್ಯಾಕರಣ ಸರಿಪಡಿಸಲು ಯತ್ನ ಮಾಡುತ್ತಾರೆ!

ನಮ್ಮವರೇ ಅಂದುಕೊಳ್ಳುವ ಕನ್ನಡದ ನಟೀಮಣಿಯರಾದ ರಮ್ಯ, ರೇಖಾ ಮುಂತಾದವರೆಲ್ಲ ಲವ್ಲಿ ಲಂಡನ್ನಿಂದ ಬಂದ ಹಾಗೆ ಮಾಡಿದ್ರೆ ದೂರದ ಪಂಜಾಬಿನಿಂದ ಬಂದು ಮುಂಗಾರು ಮಳೆಯಲ್ಲಿ ಮಿಂದ ಬಳಿಕ ಕನ್ನಡಿಗರಿಗೆ ಆಪ್ತವಾದ ಸಂಜನಾ ಗಾಂಧಿ ಮಾತ್ರ ಕನ್ನಡ ಕಲಿತೇ ಬಿಟ್ಟಿದ್ದಾರೆ. ವರದಿಗಾರರಲ್ಲಿ ‘ಕನ್ನಡದಲ್ಲಿ ಪ್ರಶ್ನೆ ಕೇಳಿ ಪರವಾಗಿಲ್ಲ’ ಎಂದು ಸರಳತೆ ಮೆರೆಯುತ್ತಾರೆ.
ನಾವು ನಾವಾಗಲು
ಮರೆತುಬಿಟ್ಟಿದ್ದೇವೆ
ಬೇರೆ ಯಾರೋ
ಆಗಲು ಹೋಗಿ
ನಮ್ಮವರಿಂದ
ದೂರವಾಗುತ್ತಿದ್ದೇವೆ...
ನಮ್ಮತನವನ್ನೂ ಕಳೆಯುತ್ತೇವೆ
ಬಲುಹೆಮ್ಮೆಯಿಂದ!