9.11.09

ಟಾಯ್ಲೆಟ್ ವೃತ್ತಾಂತ

ಟಾಯ್ಲೆಟ್ಟಿಲ್ ಅವರ‍್ ಸಿಕ್ಕುಬಿಟ್ಟಿದ್ದಾರೆ....ಎಂದು ಹಿಂದುಸ್ತಾನ್ ಬ್ಯಾಂಕ್ ಗುಮಾಸ್ತ ವರ್ಗೀಸ್ ಹರಕಲು ಕನ್ನಡದಲ್ಲಿ ಆದರೂ ಥೇಟ್ ಟಿವಿ ಬ್ರೇಕಿಂಗ್ ನ್ಯೂಸ್ ಮಾದರಿಯಲ್ಲೇ ಘೋಷಿಸಿದ.
ಇಡೀ ಆಫೀಸೇ ಆಣೆಕಟ್ಟೆ ಒಡೆದಾಗ ನುಗ್ಗುವ ನೀರಿನಂತೆ ನುಗ್ಗಿ ಟಾಯ್ಲೆಟ್ ವಿಭಾಗದ ಸುತ್ತ ನಿಂತಿತು, ಮತ್ತು ಅದರಲ್ಲೊಬ್ಬ ನಾನೂ ಇದ್ದೆ.
ಯಾರು ಟಾಯ್ಲೆಟ್ಟಲ್ಲಿ ಸಿಕ್ಕಿಬಿದ್ದವರೆಂದು ತಿಳಿಯುವ ಮುನ್ನ ನಮ್ಮ ಕಚೇರಿ ಟಾಯ್ಲೆ‌ಟ್ ವಾಸ್ತು ಬಗ್ಗೆ ನಿಮಗೆ ನಾನು ತಿಳಿಸಬೇಕು. ಟಾಯ್ಲೆಟ್ ಎಂಬ ಬೋರ್ಡಿನ ಕೋಣೆಯ ಬಾಗಿಲು ತಳ್ಳಿದಾಗ ಒಂದು ಸಿಂಕ್ ಮತ್ತು ಕನ್ನಡಿ ಇರುವ ಪ್ಯಾಸೇಜ್ ಇದೆ. ಅದರಲ್ಲಿ ಎರಡು ಕೋಣೆಗಳಿವೆ. ಅದರಲ್ಲೊಂದು ಪುರುಷರಿಗೆ ಇನ್ನೊಂದು ಮಹಿಳೆಯರಿಗೆ.
ನಮ್ಮ ಬ್ಯಾಂಕಿನ ಕ್ಯಾಷಿಯರ‍್ ೩೩ರ ಅವಿವಾಹಿತ ಕನ್ಯೆ ರೇವತಿಯು ಬ್ಯಾಂಕ್ ಕಂಪ್ಯೂಟರ‍್ ಆಪರೇಟರ‍್ ತನಗಿಂತ ಚಿಕ್ಕ ವಯಸ್ಸಿನ ಬಾಲುವಿನೊಂದಿಗೆ ಯಾವಾಗಲೂ ಸಲ್ಲಾಪದಲ್ಲಿ ತೊಡಗಿರುತ್ತಾಳೆ, ಬ್ಯಾಚುಲರ‍್ ಆಗಿ ರೂಮ್ ಮಾಡಿಕೊಂಡಿರುವ ಆತನ ರೂಮಿಗೂ ಆಕೆ ಹೋಗುತ್ತಾಳೆ, ಆಕೆಗೆ ಆತ ಯೋಗಾಸನ ಕಲಿಸುತ್ತಾನೆ ಎಂಬಂತಹ ವಿಚಾರಗಳೆಲ್ಲ ನಮ್ಮ ಬ್ಯಾಂಕಿನಲ್ಲಿ ಪ್ರಚಲಿತ ಇರುವ ವರ್ತಮಾನಗಳು.
ಆದರೆ ಏನೇ ಹೇಳಿ ಬ್ಯಾಂಕಿನ ಕೆಲಸದಲ್ಲಿ ಬಾಲು, ರೇವತಿ ಇಬ್ಬರೂ ಅಚ್ಚುಕಟ್ಟು. ಅವರ ಮೇಲೆ ಯಾವ ದೂರೂ ನೀಡಲು ಸಾಧ್ಯವಿಲ್ಲ. ಹಾಗಿದ್ದರೂ ಇಂತಹ ಸೆನ್ಸೇಷನಲ್ ವಿಚಾರವನ್ನೆಲ್ಲ ಬ್ಯಾಂಕಿನ ಸರ್ವರೂ ಬಿಡದೆ ವಿಶ್ಲೇಷಿಸುತ್ತಾರೆ.
ವಿಷಯ ಹೀಗಿರುವಾಗ ಈ ಇಬ್ಬರೂ ಟಾಯ್ಲೆಟ್ಟಲ್ಲಿ ಸಿಕ್ಕುಕೊಂಡಿದ್ದಾರೆ ಎಂದರೆ ಅದು ಬ್ರೇಕಿಂಗ್ ನ್ಯೂಸ್ ಅಲ್ಲದೆ ಬೇರಿನ್ನೇನು?!
ಒಳಗೆ ಏನಾಗ್ತಿದೆ ಎಂದು ಎಲ್ಲರೂ ತಮ್ಮ ತಮ್ಮ ಭಾವಕ್ಕೆ ಮತ್ತು ಭಕ್ತಿಗೆ ಸರಿಯಾಗಿ ಕಲ್ಪಿಸಿಕೊಳ್ಳುವ ಹೊತ್ತಲ್ಲೇ ವರ್ಗೀಸ್ ಟಾಯ್ಲೆಟ್ಟಿನ ಹೊರಗಿಂದ ಹಾಕಿದ್ದ ಅಗುಳಿ ತೆಗೆದ.
ಬೆವೆತು ಹೋಗಿದ್ದ ಬಾಲು, ಏನೂ ಆಗದಂತಹ ಮುಖದ ರೇವತಿ ಹೊರಬಂದರು.
ಏನಾಯ್ತು...ಯಾಕೆ ಎಲ್ಲಾ ನೋಡ್ತಿದೀರಿ ನಮಗೆ ಪ್ರಶ್ನೆ ಹಾಕಬೇಕೆ ರೇವತಿ, ಏನೂ ಆಗದ ಮಳ್ಳಿ ಹಾಗೆ.
ಯಾರೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಮಧ್ಯಾಹ್ನ ನಂತರ ಆದ ಕಾರಣ ಸದ್ಯಕ್ಕೆ ಕಸ್ಟಮರುಗಳಿರಲಿಲ್ಲ. ಹಾಗಾಗಿ ಮಹಿಳಾ ಸಿಬ್ಬಂದಿಗಳ ಪಿಸಪಿಸ, ಪುರುಷರ ಗಹಗಹಿಸುವಿಕೆ ನಡೆದಿತ್ತು.
ಹೀಗಿರುವಾಗ ರೇವತಿ ಮತ್ತು ಬಾಲುವಿಗೆ ಮ್ಯಾನೇಜರರ ಕರೆ ಬಂತು. ವರ್ಗೀಸನೇ ಇದಕ್ಕೂ ರೂವಾರಿ ಎಂದು ನನಗೆ ಸ್ಪಷ್ಟವಾಗಿತ್ತು.
ಮ್ಯಾನೇಜರ ಚೇಂಬರಲ್ಲಿ ಏನಾಯ್ತೆಂದು ನಮಗೆ ತಿಳಿಯದು. ಆದರೆ ರೇವತಿ ರಾಜೀನಾಮೆ ಕೊಟ್ಟು ಹೋದರೆ ಬಾಲುವನ್ನು ಹೈದರಾಬಾದಲ್ಲಿರುವ ಬ್ಯಾಂಕ್‌ನ ಹೆಡ್ಡಾಪೀಸಿಗೆ ವರ್ಗಾಯಿಸಿದರು.
ರೇವತಿ ನಮ್ಮಲ್ಲಿ ಕನಿಷ್ಠ ಮಾತಾಡುವವಳು, ಬಾಲುವಿಗೆ ಯಾಕೆ ಒಲಿದಳೆಂಬ ಹೊಟ್ಟೆಕಿಚ್ಚು ನಮ್ಮಲ್ಲಿ ಕೆಲವರಿಗೆ ಇದ್ದಿರಲೇಬೇಕು. ಬಾಲು ವರ್ಗಾವಣೆಗೊಂಡು ಹೋಗುವಾಗ ನಿರ್ಲಿಪ್ತನಾಗಿದ್ದ.

ತಂದೆ ತಾಯಿಯನ್ನು ಕಳೆದುಕೊಂಡು ಏಕಾಂಗಿಯಾಗಿದ್ದ ಬಾಲು ತಮಿಳುನಾಡಿನ ಯುವಕ. ಕಂಪ್ಯೂಟರ‍್ ತೊಂದರೆಗಳಿಗೆ ಟೆನ್ಶನ್ ಮಾಡದೆ ಸರಿಪಡಿಸುತ್ತಿದ್ದ. ಹೆಲ್ತ್‌ ಸರಿ ಇರಬೇಕ್ ಗುರೂ ಎಂದು ದಿನಾ ನಿಮಗೆ ಆ ಎಕ್ಸರ‍್ ಸೈಸ್ ಬರುತ್ತಾ ಈ ಯೋಗಾಸನ ಬರುತ್ತಾ ಎಂದೆಲ್ಲ ಆರೋಗ್ಯದ ಬಗ್ಗೆ ಸ್ವಲ್ಪ ಆಸಕ್ತಿ ಇದ್ದ ನನ್ನ ತಲೆ ತಿನ್ನುವುದೂ ಇತ್ತು. ಆದರೂ ನನಗೆ ಆತ್ಮೀಯನಾಗಿದ್ದ ಆತ ಹೋಗುವ ವೇಳೆಗೆ ಬ್ಯಾಗೇರಿಸಿ ನನ್ನ ಬಳಿ ಬಂದು ರಾವ್ ನಾನ್ ಬರ‍್ಲಾ ಎಂದಷ್ಟೇ ಹೇಳಿ ಹೋಗುವಾಗ ನನಗೆ ಬಾಲುವಿನಲ್ಲಿ ಅಂತಹ ತಪ್ಪಿತಸ್ಥನ ಭಾವ ಕಾಣಲಿಲ್ಲ.
ಇನ್ನು ರೇವತಿ ಈಸಿ ಗೋ ಯುವತಿ. ಹಾಗಾಗಿ ನಮ್ಮಲ್ಲಿ ಅನೇಕ ಮಹಿಳಾ ಮಣಿಗಳಿಗೆ ಅವಳನ್ನು ನೋಡಿದರೆ ಆಗುತ್ತಿರಲಿಲ್ಲ. ಇನ್ನು ಕೆಲವರಿಗೆ ಬಾಲು ಒಳ್ಳೆ ಹುಡ್ಗ, ಈ ಶೂರ್ಪನಖಿ ಆತನನ್ನು ಬಲೆಗೆ ಬೀಳಿಸಿಕೊಂಡಿದ್ದು ಎಂಬ ಭಾವವಿತ್ತು.
ಗೃಹಸ್ಥರನೇಕರಿಗೆ ಆಕೆಯನ್ನು ಕಂಡರೆ ಒಳಗೊಳಗೇ ಖುಷಿಯಿದ್ದರೂ ಮೇಲಿನಿಂದ ಮಾತ್ರ ಕಂಡರೆ ಇಷ್ಟ ಇಲ್ಲ ಎಂಬಂತೆ ಮೂತಿ ಮಾಡುತ್ತಿದ್ದರು.
ಬಾಲು ರೇವತಿ ಹೋದ ಬಳಿಕ ವರ್ಗೀಸ್ ಮಾತ್ರ ಬಾಲು ಮತ್ತು ರೇವತಿ ಟಾಯ್ಲೆಟ್ಟೊಳಗೆ ಒಂದೇ ರೂಮಲ್ಲಿ ಹೇಗಿದ್ದರೆನ್ನುವುದನ್ನು ನಮ್ಮ ಬ್ಯಾಂಕಿನ ರಸಿಕರಲ್ಲಿ ವಿವರಿಸುತ್ತಾ ತಾನು ಹೇಗೆ ರೆಡ್ ಹ್ಯಾಂಡ್ ಆಗಿ ಪತ್ತೇದಾರನಂತೆ ಅವರನ್ನು ಹಿಡಿದೆ ಎನ್ನುವುದನ್ನು ಕೊಚ್ಚಿಕೊಳ್ಳುತ್ತಿದ್ದ.
ವರುಷಗಳುರುಳಿದವು...
ನಮ್ಮ ಬ್ಯಾಂಕಿಗೆ ಲಕ್ಷ್ಮೀ ನಟರಾಜನ್ ಎಂಬ ಖಡಕ್ ಹುಡುಗಿಯೊಬ್ಬಳು ವರ್ಗಾವಣೆಗೊಂಡು ಬಂದಳು. ಕಪ್ಪಾದಳೂ ಲಕ್ಷಣ, ಎಷ್ಟು ಬೇಕೋ ಅಷ್ಟೇ ಮಾತು. ಬಂದ ಕೆಲ ದಿನಗಳಲ್ಲೇ ಘಟನೆಯೊಂದು ನಡೆದು ಹೋಯ್ತು.
ಸದ್ಗೃಹಸ್ಥ, ಪತ್ನಿ ಮಗಳನ್ನು ಕೇರಳದ ತನ್ನ ಊರಲ್ಲಿ ಬಿಟ್ಟು ಬಂದು ಗೌರವಾನ್ವಿತ ಜೀವನದಲ್ಲಿ ತೊಡಗಿದ್ದ ನಮ್ಮ ಕಚೇರಿ ಪತ್ತೇದಾರ ವರ್ಗೀಸನ ಸಮಾಪ್ತಿಗೆ ಅದು ಕಾರಣವಾಯ್ತು.
ಒಂದಿನ ಪೊಲೀಸರು ಕಚೇರಿಗೆ ಬಂದು ವರ್ಗೀಸನನ್ನು ಎಳೆದು ವಿಚಾರಣೆಗೆ ಕೊಂಡೊಯ್ದರು. ಬ್ಯಾಂಕಿನ ಲಾಕರ‍್ ರೂಮಿಗೆ ಹೋಗಿದ್ದ ಲಕ್ಷ್ಮೀ ನಟರಾಜನ್‌ನ ಕೈಹಿಡಿದು ಅಸಭ್ಯವಾಗಿ ವರ್ತಿಸಿದ್ದ, ಅದಕ್ಕೆ ಮೊದಲು ಹಲವು ಸಲ ಬೀಚಗೆ ಹೋಗುವ, ಪಾರ್ಕಿಗೆ ಬರುತ್ತೀಯಾ ಎಂದೆಲ್ಲ ಆಕೆಯಲ್ಲಿ ಗೋಗರೆದಿದ್ದ ಎಂಬ ವಿಷಯ ಕಚೇರಿಯಲ್ಲಿ ಬಯಲಾಯ್ತು.
ವರ್ಗೀಸನಿಗೆ ಶಿಕ್ಷೆಯೇನೂ ಆಗದಿದ್ದರೂ ಮುಖ ತೋರಿಸಲಾಗದೆ ರಾಜಿನಾಮೆ ನೀಡಿ ತನ್ನ ನಾಟ್ಟಿಗೆ ಹಿಂದಿರುಗಿದ. ಲಕ್ಷ್ಮಿಯೂ ಬೆಂಗಳೂರಿಗೆ ವರ್ಗಾವಣೆಗೊಂಡು ಹೋದಳು.
ಮತ್ತೊಂದು ದಿನ ವರ್ಗೀಸನ ಆಪ್ತರಾಗಿದ್ದ ನಾಗಭೂಷಣ್ ಮಧ್ಯಾಹ್ನ ಊಟ ಮಾಡುವಾಗ ರಹಸ್ಸವೊಂದನ್ನು ಬಯಲುಮಾಡಿದರು.
ವಾಸ್ತವವಾಗಿ ವರ್ಗೀಸನೇ ಒಮ್ಮೆ ಹಿಂದೆ ಬೆಳಗ್ಗೆ ಬ್ಯಾಂಕಲ್ಲಿ ಎಲ್ಲರಿಗಿಂದ ಬೇಗ ಬಂದಿದ್ದ ಟಾಯ್ಲೆಟ್ ಪ್ರಕರಣದ ರೇವತಿಯನ್ನು ಕೆಣಕಲು ಹೋಗಿ ಪೆಟ್ಟು ತಿಂದಿದ್ದನೆಂದೂ, ಅದಕ್ಕೇ ಅವಳು ಮತ್ತು ಬಾಲು ಟಾಯ್ಲೆಟ್ ಕೋಣೆಯೊಳಗೆ ಪ್ರತ್ಯೇಕವಾಗಿ ಇರುವಾಗಲೇ ಬೇಕೆಂದೆ ಹೊರ ಚಿಲಕ ಹಾಗಿ ಗುಲ್ಲೆಬ್ಬಿಸಿದ್ದನೆಂಬ ಸತ್ಯವದು. ಆದರೆ ಬಾಲು-ರೇವತಿಯರ ಅಫೇರ‍್ ಗಾಳಿಸುದ್ದಿ ಬಲವಾದ್ದರಿಂದ ಇಡೀ ಕಚೇರಿ ಸಮಾಜ ವರ್ಗೀಸ್ ಮಾತನ್ನೇ ನಂಬಿತ್ತು.
ಮುಖ ಪೆಚ್ಚು ಮಾಡಿಕೊಂಡು ಊರಿಗೆ ಮರಳುವ ಮುನ್ನ ವರ್ಗೀಸ್ ಸತ್ಯವನ್ನು ಹೊರಕಕ್ಕಿದ್ದ. ರೇವತಿ ಬಾಲು ಅಂಥವರಾಗಿರಲಿಕ್ಕಿಲ್ಲ ಎಂದೇ ನಂಬಿದ್ದ ನನ್ನ ಮನಸ್ಸೂ ವಾಂತಿ ಬಳಿಕ ಹೊಟ್ಟೆ ಹಗುರವಾದಂತೆ ನಿರ್ಮಲವಾಯ್ತು!

3 comments:

sunaath said...

ಅಬ್ಬಾ, ಕೊನೆವರೆಗೂ ಉಸಿರು ಬಿಗಿ ಹಿಡಿದುಕೊಂಡದ್ದು, ಅಂತ ತಿಳಿದಾಗ ನಗೆಯನ್ನು ಉಕ್ಕಿಸುತ್ತದೆ!

Shyama Soorya said...

Cool. .!

ಸಾಗರದಾಚೆಯ ಇಂಚರ said...

ವೇಣು,
ತುಂಬಾ ಹೊತ್ತು ನಕ್ಕು ಬಿಟ್ಟೆ ವ್ರತ್ತಾಂತ ಓದಿ

Related Posts Plugin for WordPress, Blogger...