Showing posts with label ತೊಂಡೆಕಾಯಿ. Show all posts
Showing posts with label ತೊಂಡೆಕಾಯಿ. Show all posts

17.12.09

ಬರಡುಗದ್ದೆಗಳಲ್ಲಿ ತೊಂಡೆ ಚಪ್ಪರ ಅರಳಿತು!!!

ಬೆಳೆದು ನಿಂತ ತೊಂಡೆಚಪ್ಪರ ^
ತೊಂಡೆ ಬೆಳೆದ ಜಯಂತ ರೈ ^

ಮಿಸಿಲಕೋಡಿಯ ವಿಠಲ ರೈ^


ಇದನ್ನು ಕ್ರಾಂತಿಯೆನ್ನಬಹುದು...ಅಭಿವೃದ್ಧಿ ಎಂದೂ ಹೇಳಬಹುದು...ಆದರೆ ಕೃಷಿ, ತೋಟಗಾರಿಕೆ ದಕ್ಷಿಣ ಕನ್ನಡದಲ್ಲಿ ಕ್ಷಿಪ್ರವಾಗಿ ಇನ್ನಿಲ್ಲವಾಗುತ್ತಿರುವಾಗಲೇ ಈ ವಿದ್ಯಮಾನ ನನ್ನನ್ನಂತೂ ಖುಷಿ ತಂದಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಗೋಳ್ತಮಜಲು ಎಂಬಲ್ಲಿ ಪುಟ್ಟ ಪುಟ್ಟ ಎರಡು ಮೂರು ಹಳ್ಳಿಗಳಲ್ಲಿನ ಒಂದಷ್ಟು ಉತ್ಸಾಹಿ ಮಂದಿ ತಮ್ಮ ಬೆಟ್ಟು ಬಿದ್ದ ಗದ್ದೆಗಳಲ್ಲೀಗ ತೊಂಡೆ ಬೆಳೆದಿದ್ದಾರೆ, ಬಂಪರ‍್ ಬೆಳೆಯನ್ನೂ ಪಡೆದು ಖುಷಿಯ ನಗೆ ಬೀರಿದ್ದಾರೆ.
ಮಿಸಿಲಕೋಡಿಯ ವಿಠಲ ಪೂಜಾರಿ ಇರಬಹುದು, ಲಿಂಗಪ್ಪ ಗೌಡರಿರಬಹುದು, ದೂಜಪಿನ್ ಲೋಬೋ ಇರಬಹುದು, ಅಥವಾ ಜಯಂತ ರೈ ಇರಬಹುದು ತಮ್ಮ ಮಣ್ಣನ್ನು ರಿಯಲ್ ಎಸ್ಟೇಟ್ ಕುಳಗಳಿಗೆ ಮಾರದೆ, ಗದ್ದೆಗೆ ಅಡಕೆ ಹಾಕಿ ಕಾಯದೆ ಹೀಗೊಂದು ಅನ್ನಕ್ಕೆ ನೆರವಾಗುವ ಕಾಯಕದಲ್ಲಿ ತೊಡಗಿದ್ದಾರೆ.
ಖುಷಿಯ ವಿಚಾರ ಎಂದರೆ ಕಲ್ಲಡ್ಕ ಸುತ್ತಲಿನ ಮಣ್ಣು ತೊಂಡೆ ಬೆಳೆಯಲು ಬಹಳ ಉಪಕಾರಿ. ಹಾಗಾಗಿ ವರ್ಷದಿಂದ ವರ್ಷಕ್ಕೆ ಇಲ್ಲಿ ತೊಂಡೆ ಬೆಳೆಸುವವರ ಸಂಖ್ಯೆ ವೃದ್ಧಿಯಾಗಿದೆ.
ಹಿಂದೆ ಹೀಗಿರಲಿಲ್ಲ. ಗದ್ದೆ ಬೇಸಾಯ ಸಾಕು ಎಂದು ರೈತರು ತೀರ್ಮಾನಕ್ಕೆ ಬಂದ ಕಾಲವದು, ಈಗ ಸುಮಾರು ೬-೭ ವರ್ಷ ಮೊದಲು. ಗದ್ದೆಗಳಲ್ಲಿ ಫಸಲು ತೆಗೆಯಲು ಮುಂದೆ ಬರುತ್ತಿರಲಿಲ್ಲ...ಗದ್ದೆಗಳು ಹಾಗೆಯೇ ಬರಡುಗಟ್ಟುತ್ತಿದ್ದವು. ರೈತರು ತಮಗಿದ್ದ ಅಡಕೆ ತೋಟವನ್ನೇ ನೆಚ್ಚಿಕೊಂಡರು.
ಆದರೆ ಇಲ್ಲಿನ ಕೆಲವರು ಮಾತ್ರ ಗದ್ದೆಯಲ್ಲೇ ತೊಂಡೆ ನೆಟ್ಟರು, ಪ್ರಯೋಗಾರ್ಥ. ಅದು ಯಶಸ್ವಿಯಾಯಿತು, ಅದನ್ನೇ ವಿಸ್ತರಿಸಿದರು. ಈಗ ಗೋಳ್ತಮಜಲಿನ ಸುಮಾರು ೫೦ ಎಕ್ರೆ ಪ್ರದೇಶದಲ್ಲಿ ತೊಂಡೆ ಹಬ್ಬಿದೆ. ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ, ಬಿ.ಸಿ.ರೋಡುಗಳಿಗೆ ಪ್ರತಿವಾರ ಇಲ್ಲಿನ ಊರ ತೊಂಡೆ ಸೇರುತ್ತದೆ. ಕನಿಷ್ಠ ಕೆಜಿಗೆ ೮ ರುಪಾಯಿಯಿಂದ ತೊಡಗಿ ೨೦ರ ವರೆಗೂ ಗಳಿಸಿದ್ದಿದೆ. ಯಾರಿಗೂ ನಷ್ಟವಾಗಿಲ್ಲ...
ಇನ್ನು ಇಲ್ಲಿ ಬೆಳೆಸುವುದು ಪುತ್ತೂರು, ಮಂಜೇಶ್ವರ ಜಾತಿಯ ತೊಂಡೆ. ಇದಕ್ಕೆ ರುಚಿ ಹೆಚ್ಚು. ಕಳೆದ ಜೂನ್‌ನಲ್ಲಿ ಹೊಂಡ ಮಾಡಿ ಗಿಡ ನೆಟ್ಟಿದ್ದಾರೆ. ಅಕ್ಟೋಬರ್‌ನಲ್ಲಿ ಕೊಯ್ಲು ಆರಂಭವಾಗಿದೆ. ಇನ್ನು ಫೆಬ್ರವರಿ ವರೆಗೂ ಈ ರೈತರಿಗೆ ಗಿಡಕ್ಕೆ ಯಥೇಚ್ಚ ಗೊಬ್ಬರ-ನೀರು ಉಣಿಸುವುದು ಕಾಯಿ ಕೊಯ್ಯುವುದು ಇದೇ ಕೆಲಸ.
ನೆರವಾಯ್ತು ಉದ್ಯೋಗ ಖಾತರಿ: ಇಲ್ಲಿ ತೊಂಡೆ ಮತ್ತೆ ಚಿಗಿತುಕೊಳ್ಳಲು ಕಾರಣವಾದ್ದು ಉದ್ಯೋಗ ಖಾತರಿ ಯೋಜನೆ. ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ, ಸಾಲ ಮಾಡುವ ಕಿರಿಕಿರಿ ತಪ್ಪಿಸಿ ತಮ್ಮ ಕಾಲ ಮೇಲೆ ನಿಂತುಕೊಳ್ಳಲು ತಮ್ಮ ಭೂಮಿಯನ್ನೇ ಹಸಿರು ಮಾಡಿ, ಸರ್ಕಾರದಿಂದ ಅದಕ್ಕೇ ಪ್ರೋತ್ಸಾಹ ಧನ ಪಡಯಲು ಆಗುವ ಏಕೈಕ ಯೋಜನೆ ಇದು.
ತಮ್ಮ ಜಾಗದಲ್ಲೇ ಬೆಳೆ ತೆಗೆಯಲು ಸರ್ಕಾರ ಹಣ ನೀಡುವುದಾದರೆ ಯಾರಿಗೆ ಬೇಡ. ವರ್ಷಕ್ಕೆ ೧೦೦ ಕೆಲಸ ಆದರೆ ಅಷ್ಟಾದರೂ ಆಯ್ತಲ್ಲ ಎನ್ನುವುದು ರೈತರ ಅಂಬೋಣ.
ಒಟ್ಟಿನಲ್ಲಿ ನಗರವಾಸಿಗಳ ಹೊಟ್ಟೆ ತುಂಬಿಸಲು ಕೇವಲ ಹಣವಿದ್ದರೆ ಸಾಲದು...ಇಂತಹ ಶ್ರಮ ಜೀವಿಗಳು ಬೆಳೆದ ಭತ್ತ, ತರಕಾರಿಯೂ ಬೇಕು ತಾನೇ...
ಸರ್ಕಾರ ಏನೇನೋ ಪ್ರಯೋಜನಕ್ಕೆ ಬಾರದ, ಕೇವಲ ಅಧೀಕಾರಿಗಳು, ಮಧ್ಯವರ್ತಿಗಳ ಹೊಟ್ಟೆ ತುಂಬಿಸುವ ಯೋಜನೆಯನ್ನೇ ಮಾಡುತ್ತಾ ಬರುತ್ತಿದೆ ಎಂದು ನಂಬಿದ್ದ ನನಗೆ ಉದ್ಯೋಗ ಖಾತರಿಯಂತಹ ಯೋಜನೆ ದಕ್ಷಿಣಕನ್ನಡದಲ್ಲಿ ಮಾಡಿದ ಜಾದೂ ನೋಡಿ ನಿಜಕ್ಕೂ ಅಚ್ಚರಿ.
ಇದು ಚಿಕ್ಕ ವಿಷಯ ಇರಬಹುದು...ಆದರೆ ಚಿಕ್ಕವೂ ಕೆಲವೊಮ್ಮೆ ಪಾಠವಾದ ನಿದರ್ಶನಗಳಿವೆ ಎಂಬ ಕಾರಣಕ್ಕಾಗಿ ನಿಮ್ಮ ಮುಂದೆ ಈ ವಿಷಯ ಇರಿಸಿದ್ದೇನೆ..ಹೇಗನಿಸಿತು ದಯವಿಟ್ಟು ತಿಳಿಸಿ.

Related Posts Plugin for WordPress, Blogger...