
ರಾಜಸ್ತಾನದ ಜೈಸಲ್ಮೇರ್ನಲ್ಲಿರುವ ತನೋಟ್ ಮಂದಿರ ಅನೇಕ ಕಾರಣಗಳಿಂದ ಪ್ರಸಿದ್ಧಿ ಹೊಂದಿದೆ.
ಭಾರತ-ಪಾಕಿಸ್ತಾನದ ಗಡಿಭಾಗದಲ್ಲಿರುವ ಈ ಮಂದಿರ ಭಾರತೀಯ ಗಡಿಭದ್ರತಾ ಪಡೆಯವರಿಗೆ ಅತ್ಯಂತ ಪೂಜನೀಯ. ಇದೇ ಕಾರಣಕ್ಕಾಗಿ ಈ ಮಂದಿರದ ನಿರ್ವಹಣೆಯನ್ನೂ ಬಿಎಸ್ಎಫ್ನ ಬೆಟಾಲಿಯನ್ ನೋಡಿಕೊಳ್ಳುತ್ತದೆ. ಬಿಎಸ್ಎಫ್ ಅಧಿಕಾರಿ, ಜವಾನರ ಒಂದು ಟ್ರಸ್ಟ್ ನಿರ್ಮಿಸಿ ಉಸ್ತುವಾರಿಯನ್ನು ಅದಕ್ಕೆ ವಹಿಸಲಾಗಿದೆ. ಮಂದಿರದ ತೆಕ್ಕೆಯಲ್ಲೇ ಬಿಎಸ್ಎಫ್ ನೆಲೆ ಕೂಡಾ ಇದೆ.
ಎಲ್ಲಕ್ಕಿಂತ ಅಚ್ಚರಿ ಎಂದರೆ ಈ ಮಂದಿರದ ಪೂಜಾರಿ ಕೂಡಾ ಬಿಎಸ್ಎಫ್ ಜವಾನನೇ. ಶಾಂತಿ ಇರುವಾಗ ಇಲ್ಲಿನ ತನೋಟ್ ದೇವಿಗೆ ಭಕ್ತಿಯಿಂದ ಆರತಿ ಮಾಡುವ ಈ ಯೋಧ ಯುದ್ಧ ಕಾಲದಲ್ಲಿ ಗನ್ ಹಿಡಿಯಲೂ ಸಿದ್ಧ!

ಈ ಮಂದಿರಕ್ಕೆ ಸಂಬಂಧಿಸಿ ಇಲ್ಲಿನವರ ನಂಬಿಕೆಯೊಂದಿದೆ. ೧೯೬೫ರ ಭಾರತ-ಪಾಕ್ ಯುದ್ಧದಲ್ಲಿ ಈ ಮಂದಿರವನ್ನು ಪಾಕ್ ಆರ್ಟಿಲ್ಲರಿ ಸುತ್ತುವರಿದಿತ್ತು. ಆಗ ಭಾರತದ ಸೈನಿಕರ ಸಂಖ್ಯೆಯೂ ಕಡಮೆ ಇತ್ತು. ಆದರೆ ತನೋಟ್ ಮಂದಿರ ಒಡೆಯಲು ಪಾಕ್ ಹಾಕಿದ್ದ ಆರ್ಟಿಲ್ಲರಿ ಶೆಲ್ಗಳು ಸ್ಫೋಟಿಸಲಿಲ್ಲ(ಸ್ಫೋಟಿಸದ ಶೆಲ್ಗಳನ್ನು ಇಲ್ಲಿ ತೆಗೆದು ಪ್ರದರ್ಶನಕ್ಕೆ ಇರಿಸಲಾಗಿದೆ), ಮತ್ತು ಅಂತಿಮವಾಗಿ ಭಾರತದ ಕೈ ಮೇಲಾಯ್ತು. ಈ ಕಾರಣಕ್ಕಾಗಿಯೇ ಬಿಎಸ್ಎಫ್ ಮಂದಿಗೆ ಮಾತ್ರವಲ್ಲ ಇಡೀ ಜೈಸಲ್ಮೇರ್ಗೆ ತನೋಟಿ ಮಾ ಎಂದರೆ ಜೀವ.

ಜೈಸಲ್ಮೇರ್ನಿಂದ ೧೨೫ ಕಿ.ಮೀ ದೂರದಲ್ಲಿರುವ ಈ ಮಂದಿರಕ್ಕೆ ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿರುವ ನೇರ ರಸ್ತೆಯಲ್ಲಿ ೧.೫ ಗಂಟೆಯಲ್ಲಿ ಜೀಪ್, ಸುಮೋಗಳಲ್ಲಿ ತಲಪಬಹುದು. ಸುಡುವ ಮರಳಿನ ನಡುವೆ ಇರುವ ಈ ಮಂದಿರ ಬಿಎಸ್ನವರಿಗೆ ಓಯಸಿಸ್!