25.7.08

ಒಂದು ಆತ್ಮಹತ್ಯೆ ಪ್ರಸಂಗ


ಆತ್ಮಹತ್ಯೆಯೇ ಲೇಸು....
ರಾತ್ರಿ ಇಡೀ ನಿದ್ದೆಯಿಲ್ಲದೆ ಮಗ್ಗುಲು ಬದಲಾಯಿಸಿ ಕಳೆದ ಆತ ಬೆಳಗ್ಗೆ ಕೋಳಿ ಕೂಗುವ ಹೊತ್ತಿಗೆ ಹಾಗೆಂದು ನಿರ್ಧರಿಸಿಯಾಗಿತ್ತು.
ಚಳಿಗಾಗಿ ಹೊದ್ದಿದ್ದ ಕಂಬಳಿ ಒಳಗೇ ಕಾಡುತ್ತಿದ್ದ ಯೋಚನೆಗಳು ಇರಿಯುವ ಈಟಿಯಂತೆ ಭಾಸವಾಗಿ ಬಲವಂತವಾಗಿಯೇ ಆತ ಎದ್ದು ಮನೆಯಿಂದ ಹೊರನಡೆದ.
ಬೆಳಕು ಹರಿದಿತ್ತು, ಪತ್ನಿ ಅಡುಗೆ ಕೋಣೆಯಿಂದ ಕೆಮ್ಮಿದಂತೆ ಕೇಳಿತು, ರೋಗಿಷ್ಟ ನಾಯಿ ಬಚ್ಚಲು ಮನೆಯ ಒಲೆಯ ಬೂದಿಯಲ್ಲಿ ಮೈಮರೆತು ಮಲಗಿತ್ತು, ಅಲ್ಲೊಮ್ಮೆ ದೃಷ್ಟಿ ಹಾಯಿಸಿದಾತ ಮನೆಯ ಮುಂದಿನ ಬೇಲಿ ದಾಟಿ ಸರಸರನೆ ಸಾಗಿದ.

ಮೈಲಿ ದೂರದಲ್ಲೇ ಭೋರ್ಗರೆಯುತ್ತಿದೆ ಸಮುದ್ರ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಅಬ್ಬರವಿದ್ದೂ ಇಲ್ಲದಂತೆ ಮಲಗಿದ ಹುಲಿಯಂತೆ ಅದು ಆತನಿಗೆ ಕಾಣಿಸಿತು. ಸಮುದ್ರ ತೀರದ ಎತ್ತರದ ಬಂಡೆಯೊಂದರ ಅಂಚಿನಲ್ಲಿ ಬಂದು ಕುಳಿತು ಬಿಟ್ಟ.
ಅಲ್ಲಿಂದ ಹಾರಿ ಸತ್ತವರು ಹಲವರು. ಅಂಚಿಗೆ ಯಾರೂ ಹೋಗಬಾರದು, ಅಪಾಯಕಾರಿ ಜಾಗ ಎಂಬ ಹಳೆಯ ಮಾಸಲು ಫಲಕ ತನ್ನನ್ನು ನೋಡಿ ಅಣಕಿಸಿದಂತಾಯಿತು.
ಏನಿದೆ ಬದುಕಲ್ಲಿ?
೪೦ ವರ್ಷದ ಬದುಕಿನ ಹೋರಾಟದಲ್ಲಿ ಸೋತು ಸುಣ್ಣವಾದವನು. ಗದ್ದೆ ಬೇಸಾಯ ಮಾಡಿ ಸುಖವಿಲ್ಲ ಎಂದು ಅಡಕೆ ಹಾಕಿ, ಆ ಮಣ್ಣಿಗೆ ಅಡಕೆ ಒಗ್ಗಿಕೊಳ್ಳದೆ ಪೀಚಾಗಿ ಹೋದದ್ದು, ಮಾಡಿದ ಸಾಲ ಮುಗಿಸಲಾಗದೆ ತೋಟದಿಂದ ಬರುವ ಅಲ್ಪಸ್ವಲ್ಪ ಆದಾಯವೆಲ್ಲ ಬಡ್ಡಿಗೇ ಹೋಗುವುದು, ಮನೆಯಲ್ಲಿ ಪತ್ನಿಯೂ ಏನಾದರೂ ಚುಚ್ಚಿ ಮಾತನಾಡುವುದು.....ಇಷ್ಟೆಲ್ಲದರ ಮಧ್ಯೆ ಈಗ ಕೈಗಾರಿಕಾ ವಲಯ ಯೋಜನೆ ಆತನಿಗೆ ಗರಬಡಿಸಿದೆ.
ಭೂಮಿ ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಊರಿನ ಮೇಷ್ಟರು ಹೇಳಿದ್ದಾಗಿದೆ. ಸಿಗುವ ಪರಿಹಾರದಲ್ಲಿ ಇನ್ನೊಂದು ತನಗೆ ಬೇಕಿರುವ ಭೂಮಿ ಖರೀದಿ ಆಗದ ಮಾತು.
ಇವೆಲ್ಲ ನೋಡಿಯೂ ಮನೆಯಲ್ಲಿ ಮುದುಕಿ ತಾಯಿ, ಪತ್ನಿ ಇಬ್ಬರೂ ಬೆದರಿಲ್ಲ. ಅದೇ ಆತನಿಗೆ ಒಗಟು. ಯೋಜನೆ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡವರೇ ಅವರು. ಆದರೂ ಅವರಿಗೆ ಇರುವ ಧೈರ್ಯ ತನಗೇಕಿಲ್ಲ ಅನಿಸುವುದಿದೆ. ಏನಿದ್ದರೂ ಸಾಯುವುದೇ ಲೇಸು ಎನ್ನುತ್ತಾ ಎದ್ದು ಸಮುದ್ರ ನೋಡಿದ.
ಒಂದು ವೇಳೆ ಹಾರಿದರೆ ಏನಾಗಬಹುದು. ಇದು ವರೆಗೆ ಹಾರಿದವರಲ್ಲಿ ಎಲ್ಲರೂ ಸತ್ತಿದ್ದಾರೆ ಅನ್ನೋದು ಅವನಿಗೆ ಗೊತ್ತು.
ಹಾರುವ ವೇಗ ಹೆಚ್ಚು ಕಡಮೆ ಆದರೆ ಕೆಳಗಿರುವ ಬಂಡೆಗೆ ತಲೆ ಬಡಿದು ಚೂರಾಗಬಹುದು, ಇಲ್ಲವಾದರೆ ನೇರ ಸಮುದ್ರದ ನೀರಿಗೇ ಬೀಳಬಹುದು, ತಿಮಿಂಗಿಲವೋ ಷಾರ್ಕ್ ಮೀನೋ ಇದ್ದರೆ ನೇರವಾಗಿ ಅವುಗಳ ಹೊಟ್ಟೆಗೇ. ಇಲ್ಲವಾದರೆ ಉಪ್ಪು ನೀರು ಪುಪ್ಪುಸ ಸೇರಿ ಉಸಿರುಗಟ್ಟುತ್ತದೆ. ಇವೆಲ್ಲ ಆಲೋಚಿಸುವಾಗ ಮೈ ಬೆವರಿತು, ಮತ್ತೆ ಹಿಂದೆ ಕುಳಿತ.
ಪ್ಚ್! ಇಷ್ಟೇ ಕಾರಣಕ್ಕೆ ಸಾಯುವುದೇಕೆ ಅನ್ನಿಸತೊಡಗಿತು. ಪಿರಿಪಿರಿ ಎಂದರೂ ಮಡದಿ ಪ್ರೀತಿಸುತ್ತಾಳೆ, ತಾಯಿ ಬೆಂಬಲವೂ ಇದೆ, ಪರಿಹಾರ ಸಿಕ್ಕ ಬಳಿಕ ದೂರ ಊರಲ್ಲಿ ಚಿ‌ಕ್ಕದಾದರೂ ಭೂಮಿ ಖರೀದಿಸಿ ಬದುಕುವುದು ಸಾಧ್ಯ ಅನ್ನಿಸಿತು.
ಸಮುದ್ರದತ್ತ ನೋಡುತ್ತಿದ್ದವನು ಈಗ ಸಮುದ್ರಕ್ಕೆ ಬೆನ್ನು ಹಾಕಿದ. ನೀಲಿ ಆಕಾಶ, ದೂರದ ಲೈಟ್ ಹೌಸ್, ಪಕ್ಕದ ದೇವಸ್ಥಾನದ ಗಂಟೆ ಸದ್ದು, ಈಗ ಎಲ್ಲವೂ ಸುಂದರವಾಗಿ ಕಾಣತೊಡಗಿತು.....
ಮೈ ಮರೆತಂತೆ ಆಯಿತು.....
ಕುಳಿತಿದ್ದ ಬಂಡೆ ತುಸು ಜರುಗಿದಂತಾಯಿತು....
ಮತ್ತೆ ಕತ್ತಲೆ.....ಬೆಳಕೇ ಕಾಣದತ್ತ ಪಯಣ ಮಾಡಿದಂತೆ.ಖುಷಿಯೂ ಇಲ್ಲದ ದುಃಖವೂ ಇಲ್ಲದ ಊರಿಗೆ ಹೋದಂತೆ...

24.7.08

ಅನುಬಂಧ

ಅಣುರೇಣು
ತಿಣುಕಾಡುತಲಿದ್ದರು
ಬ್ರಹ್ಮಾಂಡ ಬಿದ್ದು ಹೋದರೂ ಸರಿ
ನಮಗವರು ಬೇಕು
ನಮ್ಮ ಜತೆ ಬರುವವರು ಬನ್ನಿ
ಹೋದವರು ಹೋಗಲಿ ಬಿಡಿ

ಶರಧಿಯಾಚೆಗಿನ ಹೊಸ
ಗೆಳೆಯರ ಅನುಬಂಧ
ಚಿಪ್ಪುಗಟ್ಟುತ್ತಿದೆ ಈಗತಾನೇ
ಊರೊಳಗಿನ ದೀಪಗಳೂ
ಬೆಳಗಲಿವೆ ನೋಡಿ!

ನೀವು ನಿನ್ನೆಯ ಮಿತ್ರರು
ನಿನ್ನೆ ನಿನ್ನೆಗೆ ಇಂದು ಇಂದಿಗೆ
ನಿಮ್ಮ ಸ್ನೇಹದ ಬಲ
ಅಳೆದಾಗಿದೆ ಬಿಡಿ
ಸದ್ಯಕ್ಕೆ ನಿಮ್ಮದು
ಮುಗಿದ ಅಧ್ಯಾಯ
ಹೊಸ ಅನುಬಂಧಕ್ಕೆ ಮುನ್ನುಡಿ

6.7.08

ಗೆಲ್ಲು ಚಿಗುರು ಹಾಗೂ ಹನಿ


ಗಾಳಿಮಳೆಗೆ
ಹಳೆಗೆಲ್ಲು
ಮುರಿದು
ಬೀಳುವಾಗ
ಮರ
ಕಣ್ಣೀರಿಳಿಸಿತು
ಮರದ ತೆಕ್ಕೆಯಲ್ಲಿ
ಮೂಡಿದ
ಹೊಸ ಚಿಗುರು
ಮರದ ಕಣ್ಣೀರೊರೆಸಿತು!

***********

ತಲೆಮೇಲೆ
ಗಿರಗಿರ ಸುತ್ತುವ
ಸೀಲಿಂಗ್ ಫ್ಯಾನು
ಮನೆಹಿಂದಿನ
ಹಳಿಯಲ್ಲಿ
ಶಬ್ದವೇದಿ ರೈಲು
ಹೈವೇಯಲ್ಲಿ
ಹರಿಹಾಯುವ
ಸೂಪರ್‍ ಫಾಸ್ಟ್
ಕಾರು

ಆ ದ ರೆ

ಹೃದಯಲ್ಲಿ
ಮಾತ್ರ
ನಿನ್ನ ಚಿತ್ರಗಳ
ಸ್ಲೋಮೋಶನ್
ಮೆರವಣಿಗೆ

********

ಗಾಯಕ ಈಗ
ಹಾಡಿದ್ದು ಹಾಡನ್ನಲ್ಲ
ಪ್ರೇಕ್ಷಕರಲ್ಲಿ ಹಲವರ
ಶೋಕವನ್ನು

2.7.08

ಮಂಗಳೂರಿನ ಮತ್ಸ್ಯಕನ್ಯೆ



ಇನ್ನು ಮಂಗಳೂರಿಗೆ ಪಿಕ್‌ನಿಕ್ ಬರುವವರು ದೇವಸ್ಥಾನ, ಬೀಚ್ ನೋಡಿ ಇಷ್ಟೇನಾ ಎಂದು ಮೂಗುಮುರಿದು ಹೋಗಬೇಕಿಲ್ಲ...
ಮಂಗಳೂರಿಗೆ ವರವಾಗಿರುವ ಹಿನ್ನೀರುಗಳು ಸೃಷ್ಟಿಸಿದ ಚಿಕ್ಕ ಕುದ್ರುಗಳು ಅನೇಕ ಇವೆ...ಇಂತಹ ಕುದುರು ಅಥವಾ ದ್ವೀಪಗಳೂ ಪ್ರವಾಸಿಗರನ್ನು ಆಕರ್ಷಿಸಬಹುದು.
ನೇತ್ರಾವತಿ ನದಿಯ ಕೊಟ್ಟಾರಿ ಕುದ್ರು, ಉಳಿಯ ಪಾವೂರು ಹೀಗೆ ಅನೇಕ ಕುದ್ರುಗಳಿವೆ. ಕೆಲವದರಲ್ಲಿ ಜನವಸತಿಯೂ ಇದೆ. ಆದರೆ ಹೋಗಬೇಕಾದರೆ ದೋಣಿ ಬೇಕೇ ಬೇಕು. ಸರ್ಕಾರ ಇಂತಹ ದ್ವೀಪಗಳನ್ನು ಪ್ರವಾಸಿ ಕೇಂದ್ರವಾಗಿಸುವ ಯೋಚನೆ ಹೊಂದಿದೆ.
ಹೀಗೆ ಸರ್ಕಾರ ಯೋಚನೆಯಲ್ಲಿ ತೊಡಗಿರುವಾಗಲೇ ಮಂಗಳೂರಿನ ಜಗದೀಶ್ ಬಂಗೇರ ಎಂಬವರು ಕಾರ್ಯೋನ್ಮುಖವಾಗಿದ್ದಾರೆ. ಗುರುಪುರ ನದಿ ಸೃಷ್ಟಿಸಿದ ಚಿಕ್ಕ ದ್ವೀಪವೊಂದನ್ನು ಲೀಸ್‌ಗೆ ಖರೀದಿಸಿ, ದ್ವೀಪ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.



ಗುರುಪುರ ನದಿ ಮಂಗಳೂರು ಹೊರವಲಯದ ಕುಳೂರು ಮೂಲಕ ಸಮುದ್ರದ ಬದಿಯಲ್ಲಿಯೇ ಹರಿಯುತ್ತಾ ಸಮುದ್ರವನ್ನು ಕುಚೋದ್ಯ ಮಾಡುತ್ತಾ ಮುಂದುವರಿದು ಹೊಯ್ಗೆಬಜಾರು ಬಳಿ ನೇತ್ರಾವತಿಯೊಂದಿಗೆ ಒಂದಾಗಿ ಬಳಿಕವೇ ಸಮುದ್ರ ಸೇರುತ್ತದೆ.


ಮಂಗಳೂರಿನ ಲೇಡಿಹಿಲ್ ಸರ್ಕಲಿಂದ ಸುಲ್ತಾನ ಬತ್ತೇರಿ ಬಳಿ ಹೋದರೆ ನಿಮಗೆ ಗುರುಪುರ ನದಿ ಕಾಣಿಸುತ್ತದೆ. ಇಲ್ಲಿಂದ ತಣ್ಣೀರುಬಾವಿ ವರೆಗೆ ಹೋಗಲು ಇಲ್ಲಿ ದೋಣಿ ಇದೆ. ಇಲ್ಲಿ ರೋಪ್‌ ವೇ ಮಾಡಬೇಕು ಎಂಬ ಸರ್ಕಾರದ ಪ್ರಸ್ತಾವನೆ ಹಾಗೇ ಮುರುಟಿ ಬಿದ್ದಿದೆ.


ನದಿಯೊಳಗೆ ಇಲ್ಲೇ ಕೆಲವು ಮೀಟರ್‍ನಲ್ಲಿದೆ ಬಂಗೇರರ ದ್ವೀಪ. ಇದಕ್ಕೆ ಮೆರ್ಮೈಡ್ ಐಲ್ಯಾಂಡ್ ಎಂಬ ಹೆಸರನ್ನೂ ಇರಿಸಿದ್ದಾರೆ. ಈ ದ್ವೀಪವನ್ನು ವಾರಾಂತ್ಯ ಪ್ರಶಾಂತ ಸ್ಥಳ ಬಯಸುವವರಿಗೆ ನೀಡುವುದಾಗಿ ಹೇಳುತ್ತಾರೆ. ಹಾಗೆಂದು ಇದನ್ನು ಹೆಚ್ಚು ಕಮರ್ಷಿಯಲ್ ಆಗಿ ಪರಿವರ್ತಿಸಲು ಅವರಿಗೆ ಮನಸ್ಸಿಲ್ಲ.



ಸುಮಾರು ೧.೫ ಎಕ್ರೆ ಇರುವ ಈ ದ್ವೀಪ ತುಂಬ ಮರಳು. ದ್ವೀಪ ತನ್ನ ಹರವನ್ನು ತಾನಾಗಿ ಹೆಚ್ಚಿಸಿಕೊಳ್ಳುವುದಕ್ಕೆಂದು ಅಂಚಿನಲ್ಲಿ ಗಾಳಿಸಸಿ, ಕಾಂಡ್ಲಾ ಸಸಿ ನಟ್ಟಿದ್ದಾರೆ. ಈ ದ್ವೀಪದಲ್ಲಿ ಕುಳಿತು ಪ್ರಶಾಂತವಾಗಿ ಹರಿಯುವ ನದಿ/ಹಿನ್ನೀರನ್ನು ನೋಡುವುದೇ ಆಹ್ಲಾದಕರ ಅನುಭವ.


ಮಂಗಳೂರಿನ ಹಳೆ ನೆನಪು ಸಾರುವ ಕೆಲವು ಹೆಂಚಿನ ಫ್ಯಾಕ್ಟರಿಗಳು, ರಿಪೇರಿಗೆಂದು ಭೂಮಿ ಮೇಲೇರಿ ನಿಂತ ದೋಣಿಗಳು, ಗಾಳಿಗೆ ತೊಯ್ದಾಡುವ ತೆಂಗಿನ ಮರಗಳು added attractions.


ಈಗ ಮಳೆಗಾಲವಾದ್ದರಿಂದ ದ್ವೀಪಕ್ಕೆ ಹೋಗುವುದು ತುಸು ಕಷ್ಟ. ಆದರೆ ಇನ್ನು ನಾಲ್ಕು ತಿಂಗಳಲ್ಲಿ ದ್ವೀಪವನ್ನು ಪೂರ್ಣವಾಗಿ ಸಿದ್ದಪಡಿಸುವುದಾಗಿ ಜಗದೀಶ್ ಬಂಗೇರ ಹೇಳುತ್ತಾರೆ. ಅವರ ಪ್ರಯತ್ನಕ್ಕೆ ಹ್ಯಾಟ್ಸಾಫ್ ಹೇಳಬಯಸುತ್ತೀರಾದರೆ ಇಲ್ಲಿದೆ ಅವರ ಮೊಬೈಲು ಸಂ.9448472807.

Related Posts Plugin for WordPress, Blogger...