Showing posts with label ಸಣ್ಣಕತೆ. Show all posts
Showing posts with label ಸಣ್ಣಕತೆ. Show all posts

19.9.10

ಹೆದ್ದಾರಿ ಕಥೆಗಳು-೨

 ಅದೊಂದು ಛಳಿಗಾಲದ ಇಳಿಹೊತ್ತು..
ಹಗಲಿಡೀ ವಾಹನಗಳ ಭರಾಟೆಯಿಂದ ಹೈರಾಣಾಗಿ ಹೆದ್ದಾರಿ ವಿಶ್ರಾಂತಿಗೆ ಇಳಿದಂತಿತ್ತು. ಅರಣ್ಯದ ನಡುವೆ ಹಾದು ಹೋಗುವ ಘಾಟಿ  ದಾರಿಯದು, ರಾತ್ರಿಯಾದರೆ ವಾಹನಗಳ ಸಂಖ್ಯೆ ಕಡಿಮೆ. ಆಗಲೇ ಸೋಡಿಯಂ ವೇಪರ‍್ ಲೈಟುಗಳಿ ಮಿನುಗಲು ತೊಡಗಿದ್ದವು.
ಗಂಟೆಗಳುರುಳಿದವು. ಜೀಪೊಂದು ಕೇಕೆ ಹಾಕುತ್ತಾ ತೂರಾಡುತ್ತಾ ಬಂತು.
ಒಳಗಿರುವವರ ಪರಿಸ್ಥಿತಿ ಹೀಗಎಯೇ ಇರಬಹುದೆಂದು ಊಹಿಸಿ ಹೆದ್ದಾರಿಗೆ ನಗೆಯುಕ್ಕಿತು. ಯಾರೋ ನಕ್ಕಂತಾಗಿ ಡ್ರೈವಿಂಗ್‌ ಸೀಟಿನಲ್ಲಿದ್ದವನಿಗೆ ಸಿಟ್ಟು ಬಂತು. ಹಿಂದಿನ ಸೀಟಲ್ಲಿದ್ದವರಿಗೆ  ತೊಡರು ನಾಲಗೆಯಲ್ಲೇ ಬೈದ..ಸು..ಮ್ನೆ ಕುಂತ್ಕ..ಳ್ಳಿ..ಇಂಥವರನ್ನ ದಿನಾ ನೋಡುತ್ತಿದ್ದ ಹೆದ್ದಾರಿಗೆ ಮತ್ತೂ ನಗುಬಂತು, ಡ್ರೈವರನ್ನು ಇನ್ನಷ್ಟು  ಪೇಚಿಗೆ ಸಿಲುಕಿಸಲು ಮತ್ತೊಮ್ಮೆ ಗಟ್ಟಿಯಾಗಿ ನಕ್ಕಿತು. ಈ ಬಾರಿ ಅಮಲಿನಲ್ಲೂ ಎಲ್ಲರಿಗೂ ನಗು ಕೇಳಿತು. ನಗು ಮತ್ತೆ ಮತ್ತೆ ಬಿಚ್ಚಿಕೊಳ್ಳುತ್ತಾ ಹೋದಾಗ ಆ ನಗು ತಮ್ಮದ್ದಲ್ಲ ಎಂದು ಸ್ಪಷ್ಟವಾಯಿತು. ಡ್ರೈವರನಿಗೆ ಚಿಕ್ಕವನಿದ್ದಾಗ ಕೇಳಿದ ಭೂತ ಪಿಶಾಚಿ ಕಥೆಗಳು ನೆನಪಾದವು, ಕೈ ಮರಗಟ್ಟಿತು. ಒಂದೊಂದು ಮರಗಳೂ ಒಂದೊಂದು ಆಕಾರ ಪಡೆದು ನರ್ತಿಸತೊಡಗಿದವು. ರಸ್ತೆಯೇ ದಢೀರ್‌ ಎದ್ದು ನಿಂತಂತಾಯಿತು. ಆ ಕೊರಕಲಿನ ತಿರುವಿನಲ್ಲಿ ಸ್ಟೀರಿಂಗ್‌ ತಿರುಗಲೇ ಇಲ್ಲ.....
ಆ ತಿರುವಿನಲ್ಲೊಂದು ಫಲಕವಿತ್ತು.
ಎಚ್ಚರಿಕೆ ! ಅಪಘಾತ ವಲಯ!

12.2.10

ಕನಸಿನ ಬಂಡಿಗೆ ನಿಲ್ದಾಣವಿಲ್ಲ

ಅದು ಫೆಬ್ರವರಿಯ ಥಂಡಿ ಸುರಿಯುವ ರಾತ್ರಿ. ನಕ್ಷತ್ರಗಳ ಹಿಮ್ಮೇಳದಲ್ಲಿ ಬೆಳ್ಳನೆ ಬೆಳದಿಂಗಳು ಚೆಲ್ಲುತ್ತಾ ಚಂದಿರ ಸವಾರಿ ಹೊರಟಿರುವಾಗಲೇ ಜಮ್ಮುತಾವಿ ಎಕ್ಸ್‌ಪ್ರೆಸ್ ರೈಲು ಯಾವುದೋ ಗೋಧಿಯ ಬಯಲುಗದ್ದೆಗಳ ನಡುವೆ ಮಂಜು ಪರದೆ ಸೀಳುತ್ತಾ ಓಡುತ್ತಿದೆ.
ರೇಲು ಗಾಡಿಯ ಸ್ಲೀಪರ‍್ ಕೋಚ್ ಎಸ್‌-8ರಲ್ಲಿ ಇರುವ ಕೆಲವೇ ಪ್ರಯಾಣಿಕರು ತಮ್ಮ ಇಹಲೋಕ ಪರಿವೆಯೆಲ್ಲ ಮರೆತು ನಿದ್ರೆ ಮಾಡುತ್ತಿದ್ದರೆ ಇಡೀ ಬೋಗಿಯೇ ಆಲಸ್ಯದಿಂದ ತುಂಬಿರುವಂತೆ ಕಾಣುತ್ತದೆ. ಮಬ್ಬು ಬೆಳಕಲ್ಲಿ ಅಪ್ಪರ‍್ ಬರ್ತ್‌ನಲ್ಲಿ ಬ್ಯಾಗ್‌ಗೆ ಬೆನ್ನು ಕೊಟ್ಟು ನಿದ್ರಿಸಲು ಯತ್ನಿಸುತ್ತಿದ್ದಾನೆ ಆ ೨೫ರ ಹುಡುಗ. ಆತ ಮಗ್ಗುಲಾಗಿ ಮಲಗಿದ್ದಾನೆ.
ಕಣ್ಣೆವೆ ಮುಚ್ಚಿಕೊಂಡರೆ ಸಾಕು ಆಕೆ ಕಣ್ಣಮುಂದೆ ಬರುತ್ತಾಳೆ. ಕಣ್ಣೆವೆ ತೆರೆದರೆ ಅಲ್ಲೇ ಮುಂಭಾಗದ ಮಧ್ಯೆಯ ಬರ್ತ್‌ನಲ್ಲೇ ಮಲಗಿದ್ದಾಳೆ. ಆಕೆಯ ಕಂಗಳಲ್ಲೂ ಈತನ ಪ್ರತಿಬಿಂಬ ಕಂಡಂತಿದೆ. ನಿನ್ನೆ ಬೆಳಗ್ಗಿನಿಂದ ಆತನಿಗೆ ಆಕೆ ಪರಿಚಯವಾಗಿದ್ದಾಳೆ, ಚೂಡಿದಾರ‍್ ಉಟ್ಟ ಸರಳ ಹುಡುಗಿ.
ಮಾತಿಗಾಗಿ ಆತನೂ ತಡವರಿಸಿದ್ದಾನೆ. ಆಕೆಯೂ ಅಂತಹಾ ಮಾತುಗಾರ್ತಿ ಅಲ್ಲ. ಆಕೆಯ ತಂದೆ ತಾಯಿ ಅಲ್ಲೇ ಕೆಳಗಿನ ಎರಡು ಬರ್ತ್‌ಗಳಲ್ಲಿ ಮಲಗಿದ್ದಾರೆ.
ಅವರು ಬೇಕೆಂದಾಗ ಪೇಪರನ್ನೋ, ನೀರನ್ನೋ ತಂದು ಕೊಟ್ಟು ಈತ ಉಪಕಾರ ಮಾಡಿದ್ದಿದೆ. ನನ್ನ ಬಗ್ಗೆ ಅವರೇನಂದುಕೊಂಡಿರಬಹುದು ಎಂದು ಆತ ಚಿಂತೆ ಮಾಡಿಲ್ಲ, ಆದರೆ ಗುಲಾಬಿ ವರ್ಣದ ಚೂಡಿದಾರದ ಆ ಚೆಲುವೆ ಮುಖ ನೋಡಿ ನಕ್ಕಾಗೆಲ್ಲ ಈತ ನಡುಗುತ್ತಾನೆ.
ಈ ಮಂಗಳೂರು ಹುಡುಗನಿಗೆ ಕನ್ನಡ, ಇಂಗ್ಲಿಷ್ ಬರುತ್ತದೆ. ವಿಚ್‌ ಪ್ಲೇಸ್ ಆರ‍್ ಯೂ ಫ್ರಂ, ಓ..ಯು ಆರ‍್.ಕನ್ನಡಿಗ...ಎಂದು ಪರಿಚಯ ಅಷ್ಟೇ ಮಾಡಿಕೊಂಡಿದ್ದಾಳೆ. ಆಕೆ ಅಹ್ಮದಾಬಾದ್‌ನವಳು.

ಇನ್ನು ಮೂರು-ನಾಲ್ಕು ಗಂಟೆಯಲ್ಲಿ ಬೆಳಗಾಗುವಾಗ ಅಹ್ಮದಾಬಾದ್ ಸ್ಟೇಷನ್ ಬರುತ್ತದೆ. ಆಕೆ ಅಲ್ಲಿ ಇಳಿಯು‌ತ್ತಾಳಂತೆ. ಬೆಳಗ್ಗಿನಿಂದಲೇ ಆಗಾಗ್ಗೆ ಮೊಬೈಲ್‌ನಲ್ಲಿ ಮೆಸೇಜ್ ನೋಡುತ್ತಿದ್ದವಳು, ಆಕೆಯ ಪ್ರಿಯಕರನ ಅಲ್ಲ, ಗೆಳೆಯರ ಸಂದೇಶ ಓದುತ್ತಿದ್ದಳೋ ಏನೋ. ಮಧ್ಯಾಹ್ನ ನಂತರ ಮೊಬೈಲ್ ನೋಡಿಲ್ಲ. ರೋಮಿಂಗಲ್ವಾ ಅಂತ ಬೆಂಗಳೂರು ಹುಡುಗ ಮೊಬೈಲ್ ಆಫ್ ಮಾಡಿಟ್ಟಿದ್ದಾನೆ.
ಆಕೆಯ ಮೇಲೆ ಆತನಿಗೆ ಪ್ರೇಮವೇ, ಆಕರ್ಷಣೆಯೇ ಗೊತ್ತಿಲ್ಲ. ಗುಜರಾತಿ ಹುಡುಗಿ ಮನದೊಳಗೆ ಗೂಡು ಕಟ್ಟಿದಳೇ? ಆತನಿಗೆ ಗೋಜಲು.
‘ನೀ ಹೋದರೆ ಮತ್ತೆ ನನ್ನ ಒಂದು ದಿನದ ಪ್ರಯಾಣ ಮಹಾ ಬೋರಿಂಗ್’ ಎನ್ನ ಹೊರಟಾಗ ರೇಲು ಇಂಜಿನ್ ಸುರಂಗ ಹೊಕ್ಕು ಕರ್ಕಶವಾಗಿ ಸೀಟಿ ಹಾಕುತ್ತಾ ವೇಗ ಹೆಚ್ಚಿಸಿಕೊಂಡಿವೆ. ಮಾತುಗಳನ್ನು ಹುಡುಗ ನುಂಗಿಕೊಂಡಿದ್ದಾನೆ. ಈತನ ಮುಖವನ್ನೇ ನೋಡುತ್ತಿದ್ದಾಕೆ ನುಂಗಿದ ಮಾತುಗಳನ್ನು ಹೆಕ್ಕಿಕೊಂಡಂತೆ ಮುಗುಳ್ನಗುತ್ತಾಳೆ. ಕಿಟಿಕಿಯಿಂದ ಒಳಹೊಕ್ಕ ಕುಳಿರ್ಗಾಳಿಗೆ ಮಲಗಿದ್ದವಳ ತಲೆಕೂದಲಿನ ಜೊಂಪೆ ಒಮ್ಮೆ ಮೇಲೆದ್ದು ಅಲೆ ಅಲೆಯಾಗಿ ಕಣ್ಣು, ಕೆನ್ನೆ ಮೇಲೆ ಜಾರುತ್ತಾ ಮುಖವನ್ನು ಆವರಿಸಿದ ದೃಶ್ಯ ಮನಃಪಟಲದಲ್ಲಿ ಅಚ್ಚೊತ್ತಿದೆ.
ಚಂದಿರ ರಾತ್ರಿ ಪಾಳಿ ಮುಗಿಸಿ ಬದಿಗೆ ಸರಿಯಲಿದ್ದಾನೆ, ಸೂರ್ಯನಿಗೆ ಹೊಸ ಪಾಳಿ ಇನ್ನು. ಪಾಳಿ ಬದಲಾವಣೆಯಾಗುವಾಗ ಆಕೆ ತನ್ನವರೊಂದಿಗೆ ರೈಲ್ವೇ ನಿಲ್ದಾಣದಲ್ಲಿ ಇಳಿದು ಬಿಡುತ್ತಾಳೆ. ಆಕೆ ಮಲಗಿದ್ದ ಬರ್ತ್‌ಗೆ ಇನ್ಯಾರೋ ಬಂದು ಬಿಡುತ್ತಾರೆ ಎಂಬ ನೆನಪುಗಳೇ ಈಗ ಆತನನ್ನು ಇರಿಯುತ್ತವೆ.
ಎಷ್ಟೊಂದು ಮಾತುಗಳು ಮನದ ಫ್ಯಾಕ್ಟರಿಯಲ್ಲಿ ಸಿದ್ಧಗೊಳ್ಳುತ್ತಿದ್ದವು, ಆಕೆಯ ಪಿಂಕ್ ಚೂಡಿ, ಅಲೆ ಅಲೆಗೂದಲು, ಗುಜರಾತಿ ಮಿಶ್ರಿತ ಇಂಗ್ಲಿಷ್, ಕಣ್ಣಿನ ನೇರನೋಟ ಇವೆಲ್ಲ ಸೇರಿ ಆತನಿಗೆ ಆಕೆಯ ಬಗ್ಗೆ ಯಾವ ಭಾವನೆ ಮೂಡುತ್ತಿದೆ ಎನ್ನುವುದನ್ನು ಇನ್ನೂ ನಿರ್ಧಾರ ಮಾಡುವ ಮೊದಲೇ ಆಕೆ ಹೊರಟು ಹೋಗುವವಳಿದ್ದಾಳೆ. ಆಕೆ ಇನ್ನೊಂದಿಷ್ಟು ಹೊತ್ತು ತನ್ನೊಂದಿಗಿದ್ದರೆ...
ಆತನ ಮನದ ಕೊರಗು ಆಕೆಗೂ ಇತ್ತೇ ಗೊತ್ತಿಲ್ಲ...ಸಂಜೆಯಾದಾಗ ಮುದುಡುವ ಗುಲಾಬಿಯಂತಿರುವ ಮುಖ ಏನೋ ಹೇಳುತ್ತಿದೆ.
ಈಗ ಬೆಳಕು ಹರಿದಿದೆ. ವೇಗ ಇಳಿಸಿದ ರೇಲು ನಿಲ್ದಾಣದತ್ತ ಜಾರುತ್ತಿದೆ. ಆಕೆಯ ಪೋಷಕರು ಬ್ಯಾಗೇರಿಸಿದ್ದಾರೆ. ಆಕೆಯೂ ತನ್ನ ತುರುಬು ಕಟ್ಟಿಕೊಂಡು ನಿದ್ದೆಗಣ್ಣಿಗೆ ತಣ್ಣೀರೆರಚಿ ಬಂದು ಸಿದ್ಧಳಾಗುತ್ತಿದ್ದಾಳೆ, ಆತನ ಕನಸಿನ ಬಂಡಿಯಿಂದ ಇಳಿದು ಹೋಗುವುದಕ್ಕೆ.
ಪ್ಲಾಟ್‌ಫಾರಂ ಬಂದು ನಿಂತಿದೆ ರೇಲು, ಆಕೆಯ ಹೆತ್ತವರ ಕೈಲಿದ್ದ ಬ್ಯಾಗ್ ಈತ ತೆಗೆದುಕೊಂಡಿದ್ದಾನೆ, ಅವರನ್ನು ಕೆಳಗಿಳಿಸಿ, ಬ್ಯಾಗ್ ಕೈಗೆ ಕೊಡುತ್ತಾನೆ. ಹಮ್ ಫಿರ‍್ ಮಿಲೇಂಗೇ....ನಕ್ಕ ಆಕೆಯ ತಂದೆ ಹುಡುಗನ ಬೆನ್ನು ಸವರಿದ್ದಾನೆ, ತಾಯಿಗಂಟಿ ನಿಂತ ಹುಡುಗಿ ತೀಕ್ಷ್ಣವಾಗಿ ಈತನತ್ತ ನೋಡುತ್ತಾಳೆ.
ಆಕೆಯ ಮೊಬೈಲ್ ನಂಬರ‍್ ಕೇಳಿ ಬಿಡಲೇ ಬೇಕೇ ಎನ್ನುವ ಗೊಂದಲದಲ್ಲಿದ್ದಾನೆ ಹುಡುಗ...ಆಗಲೇ ರೈಲು ಹೊರಟಿದೆ ಮತ್ತೆ...
ಒಲವೂ ಅಲ್ಲದ, ಸ್ನೇಹವೂ ಅಲ್ಲದ ನವಿರು ಭಾವಗಳ ಕನಸು ಹಾಗೇ ಹರಿಯಲಿ ಎನ್ನುತ್ತಾ ಹುಡುಗ ಅವ್ಯಕ್ತ ನೋವಿನಿಂದ ತಿರುಗಿಯೂ ನೋಡದೆ ರೈಲು ಏರಿದ್ದಾನೆ....ಲವ್‌ ಯೂ ಎಂದು ಕೂಗಿ ಹೇಳೋಣ ಎಂದು ಬಾಯ್ತೆರೆದರೆ ಮತ್ತೆ ಅದೇ ರೈಲಿನ ಸೀಟಿ....
ಮಾತುಗಳು ಬಾಯಲ್ಲೇ ಉಳಿದಿವೆ...ಆಕೆಯ ಕಂಗಳ ಅಂಗಳದಲ್ಲೆ ಹೊಳೆದ ಕಂಬನಿ ಮಾತ್ರ ಇನ್ನೂ ಹುಡುಗನ ಕಂಗಳಲ್ಲಿ ಶಾಶ್ವತವಾಗಿವೆ.

pic : pixadus.com

ಪ್ರೇಮ ಎಂಬ abstract ಭಾವನೆಯೊಂದರ ಸುತ್ತ ಸುತ್ತುವ ಕೆಲ ಯೋಚನೆಗಳೇ ಈ ಕಥೆಗೆ ಮಾರ್ಗದರ್ಶೀ ಸೂತ್ರ, ಈ ಬಾರಿಯ ಪ್ರೇಮಿಗಳ ದಿನಾಚರಣೆಗೆ ಈ ಕಥೆ

31.5.09

ಪ್ರಮೀಳೆಯರಿಲ್ಲದ ಪ್ರಪಂಚ

ಪ್ರೀತಿಸಿದ ಹುಡುಗಿ ಬೇರೆಯವನೊಂದಿಗೆ ಮದುವೆಯಾಗಿ, ತಾನು ಕೈಹಿಡಿದ ಹುಡುಗಿ ತನ್ನ ಅಧಿಕಪ್ರಸಂಗಿತನಕ್ಕೆ ಬೇಸತ್ತು ವಿಚ್ಛೇದನ ನೀಡಿದ ದಿನ ವಸಂತ ಮಮ್ಮಲ ಮರುಗಿಬಿಟ್ಟ.
ಲೋಕದಲ್ಲೆಲ್ಲೂ ಒಳ್ಳೆಯ ಮನಸ್ಸಿನ ಹೆಂಗಸರೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದ. ಅದುವರೆಗೆ ಫೋಟೋದಲ್ಲಿದ್ದ ದೇವರನ್ನು ಕಣ್ಣೆತ್ತಿ ನೋಡದ ಆತ ಅದೊಂದು ರಾತ್ರಿ ನಿಶ್ಚಲ ಮನಸ್ಸಿನಿಂದ ತಪಸ್ಸಿಗೆ ಕುಳಿತ.
ಹೀಗೆ ಕೆಲ ದಿನಗಳುರುಳಿದವು.. ಈ ಐ.ಟಿ ಯುಗದಲ್ಲೂ ಹಸಿವೆ ನಿದ್ದೆಯನ್ನೆಲ್ಲ ಮೆಟ್ಟಿ ನಿಂತ ವಸಂತನ ದೃಢಚಿತ್ತದಿಂದ ಅಚ್ಚರಿಗೊಂಡ ಭಗವಂತ ಅದೊಂದು ಘಳಿಗೆಯಲ್ಲಿ ಧುತ್ತನೆ ವಸಂತನ ಮುಂದೆ ಪ್ರತ್ಯಕ್ಷನಾದ.
ಏನು ಈ ಯುಗದಲ್ಲೂ ನನಗಾಗಿ ತಪಸ್ಸು ಮಾಡುತ್ತಿರುವೆ? ಎಂದು ಕೇಳಿದ. ಹೆಚ್ಚೇನೂ ಸಂಭ್ರಮ ವ್ಯಕ್ತ ಪಡಿಸದ ವಸಂತ ತಣ್ಣನೆ ಸ್ವರದಲ್ಲಿ ಕೇಳಿದ-ನನಗೆ ವರ ಬೇಕು!
ಭ-ವರವೇ? ಏನದು ಹೇಳು?
ವ-ನಾನು ಹೆಂಗಸರಿಂದ ಬಹಳಷ್ಟು ಸೋತು ಹೋದೆ. ವೈಯಕ್ತಿಕ ಜೀವನದಲ್ಲಿ, ವೃತ್ತಿ ಜೀವನದಲ್ಲಿ...ಏನು ಮಾಡಬೇಕು ಎಂದು ತೋಚುತ್ತಿಲ್ಲ.
ಭ-ಅದು ಅವರವರ ಪ್ರಾರಬ್ಧ ಕರ್ಮ. ಎಷ್ಟೋ ಮಂದಿ ಹೆಂಗಸರಿಂದಾಗಿಯೇ ಒಳ್ಳೆಯ ಬದುಕಿನಲ್ಲಿದ್ದಾರೆ. ನೀನು ಮಾತ್ರ ಹೀಗೆ ಹೇಳುತ್ತಿರುವೆ.
ವ-ನನಗೀಗ ವರವ ಕೊಡು ಭಗವಂತ...ನಾನು ಹೆಂಗಸರೇ ಇಲ್ಲದ ಕಾಲದಲ್ಲಿ, ಅಥವಾ ದೇಶದಲ್ಲಿ, ಅಥವಾ ಜಗತ್ತಿನಲ್ಲಿ ಹುಟ್ಟುವಂತಾಗಬೇಕು.
ಭ-ಇದು ಬಹಳ ಪೇಚಿನ ವರ[ಈ ವರ ಕೊಟ್ಟದ್ದು ತಿಳಿದರೆ ಮಹಿಳಾ ಆಯೋಗದವರ ಕಣ್ಣೂ ಕೆಂಪಾದೀತು]. ಕೊಡುವ ಹಾಗಿಲ್ಲ.
ವ-ಇಲ್ಲ, ಕೊಡಲೇ ಬೇಕು...ನನ್ನ ಭಕ್ತಿಗೆ ಅಷ್ಟಾದರೂ ಬೆಲೆ ಕೊಡಬೇಕು.
ದೇವರಿಗೆ ಈ ಹುಲುಮಾನವ ಒಂದಿಷ್ಟೂ ಬೆದರದೆ ಉತ್ತರಿಸಲು ಕಾರಣವನ್ನು ಕೆಲ ನಿಮಿಷ ಕಾಲ ಚಿಂತಿಸಿದ ದೇವರು ಕೊನೆಗೂ ಈ ಯುಗದಲ್ಲಿ ತಾನು ಮೊದಲ ಬಾರಿ ಪ್ರತ್ಯಕ್ಷವಾಗಿರುವಾಗ ಭಕ್ತನನ್ನು ನಿರಾಸೆಗೊಳಿಸ ಬಾರದು ಎಂದು ತೀರ್ಮಾನಿಸಿ ತಥಾಸ್ತು ಎಂದ. ಆದರೆ ಒಂದು ಷರತ್ತು. ನೀನು ಪ್ರಮೀಳೆಯರಿಲ್ಲದ ಜಗತ್ತಿನಲ್ಲಿ ಹುಟ್ಟಬೇಕಾದರೆ ಮೊದಲು ಈಗಲೇ ಸಾಯಬೇಕು(ಯಾವುದಕ್ಕೂ ಒಂದು ಟೆಸ್ಟ್ ಮಾಡೋಣ ಅನ್ನಿಸಿರಬಹುದು) ಎಂದ.
ಒಪ್ಪಿದ ವಸಂತ ದೇವರಿಗೆ ಥ್ಯಾಂಕ್ಸ್ ಕೂಡಾ ಹೇಳದೆ ಹಿಂದಿರುಗಿದ. ಸಾಯುವುದು ಹೇಗೆ ಎಂದು ಚಿಂತಿಸತೊಡಗಿದ.
ಕೊನೆಗೂ ಸಮುದ್ರಕ್ಕೆ ಹಾರುವುದೇ ಲೇಸು ಎಂದುಕೊಂಡು ಕಡಲತಡಿಗೆ ಹೋದ.
ಅಲ್ಲಿ ನೋಡಿದರೆ ಆಗಲೇ ಒಂದು ಜೀವ ನೀರಲ್ಲಿ ಕೈಕಾಲು ಬಡಿಯುತ್ತಿದೆ...ಮತ್ತೆ ಸಾಯೋಣ ಎಂದು ಅನ್ನಿಸಿ ವಸಂತ ನೀರಿಗೆ ಜಿಗಿದ. ಈಜು ಗೊತ್ತಿದ್ದರಿಂದ ಕೈಕಾಲು ಬಡಿಯುತ್ತಿದ್ದವರನ್ನು ಎಳೆದು ತಂದ.
ನೋಡಿದರೆ ಅದೊಂದು ಹೆಣ್ಣು ಜೀವ. ಆಕೆಯನ್ನು ಪಕ್ಕ ಕೂರಿಸಿ ಕಥೆ ಕೇಳಿದ. ಆಕೆಗೆ ಯಾರೋ ಹುಡುಗ ಕೈಕೊಟ್ಟನಂತೆ, ಅದಕ್ಕೆ ನೀರಿಗೆ ಹಾರಿದಳಂತೆ, ಹಾರಿದ ನಂತರ ಬದುಕಬೇಕು ಅನ್ನಿಸಿತಂತೆ, ಆಗಲೇ ವಸಂತ ಕೈಹಿಡಿನಂತೆ...ಹಾಗೆ ಆಕೆ ಹೇಳುವಾಗ ಆಕೆಯ ಕೈ ವಸಂತನ ಕೈಗಳಲ್ಲಿ ಭದ್ರವಾಗಿತ್ತು. ವಸಂತನಿಗೆ ಸದ್ಯಕ್ಕೆ ಭಗವಂತ ತನಗೆ ನೀಡಿದ ವರ, ಅದಕ್ಕೆ ಹಾಕಿದ ಷರತ್ತು ಮರೆತುಹೋಯಿತು..ಆಕೆಯನ್ನು ಭದ್ರವಾಗಿ ಹಿಡಿದು ಕಡಲ ದಂಡೆಯಲ್ಲಿ ಹೆಜ್ಜೆ ಹಾಕಿದ..
ದೇವಲೋಕದಲ್ಲಿ ಕುಳಿತ ಭಗವಂತ ಮತ್ತು ಆತನ ಸಹವರ್ತಿಗಳು ಕೈಚಪ್ಪಾಳೆ ಹಾಕಿದರು...ಕೊನೆಯಲ್ಲಿ ಭಗವಂತ ಈ ಮಾತು ಹೇಳಿದ 'ಈ ಮೂಢ ಹೆಂಗಸರಿಲ್ಲದ ಪ್ರಪಂಚದಲ್ಲಿ ಬದುಕುವುದು ಅಸಾಧ್ಯ, ನಾನು ಮಾಡಿದ ಪರೀಕ್ಷೆಯಲ್ಲಿ ಸೋತ, ನನ್ನನ್ನು ಅನಾವಶ್ಯಕ ಭೂಮಿಗೆ ಬರಹೇಳಿದ್ದಕ್ಕೆ ಆತನಿಗೆ ಇದೇ ತಕ್ಕ ಶಿಕ್ಷೆ'.
ಹಾಗೆ ಭಗವಂತ ಹೇಳುವಾಗ ನೀರಲ್ಲಿ ಮುಳುಗಿ ಉಪ್ಪುಮಿಶ್ರಿತ ನೀರಿನಿಂದ ಒದ್ದೆಯಾಗಿದ್ದ ಆ ತರುಣಿಯೊಂದಿಗೆ ಬೀಚ್ ಪಕ್ಕದ ದೇವಸ್ಥಾನದಲ್ಲಿ ಕೈಮುಗಿಯಲು ಹೋಗುತ್ತಿದ್ದ!

12.9.08

ಹೆದ್ದಾರಿ ಕಥಾನಕಗಳು

ಅಬ್ಬಾ ಇದು ಹೆದ್ದಾರಿಯೇ ಎಂಬ ಅನುಮಾನ ಬರುವಂತಹ ಕೆಟ್ಟ ರಸ್ತೆ ಅದು.
ಸಾಮಾನ್ಯವಾಗಿ ಇಡೀ ದಿನ ಬ್ಯುಸಿಯಾದ ರಸ್ತೆಗೆ ನಿದ್ರಿಸಲೂ ಬಿಡದಂತೆ ಅನಿಲ, ಅದಿರು ಟ್ಯಾಂಕರ್‍ಗಳು ಓಡುತ್ತವೆ.
ಆದರೆ ಇಂದು ಎಂದಿನಂತಿಲ್ಲ...
ಬಹಳ ದಿನದ ಬಳಿಕ ಮಳೆಯಾಗಿ ರಸ್ತೆಯೇ ತೊಯ್ದು ಹೋಗಿದೆ. ಅದಕ್ಕೋ ಏನೋ ರಾತ್ರಿ ಓಡಾಟದ ಲಾರಿ ಚಾಲಕರು ರಸ್ತೆ ಬದಿಯೇ ಲಾರಿ ನಿಲ್ಲಿಸಿ ನಿದ್ರೆಗೆ ಶರಣಾಗಿದ್ದಾರೆ.
ಆದರೆ ಆ ಜಂಕ್ಷನ್‌ನಲ್ಲಿ ಇನ್ನೂ ಮನುಷ್ಯ ಜೀವವೊಂದು ಕಾಣುತ್ತಿದೆ.
ಸರಿಯಾಗಿ ಉರಿಯದೆ ಮಿಣಕ್ ಮಿಣಕ್ ಅನ್ನುವ ಸೋಡಿಯಂ ವೇಪರ್‍ ಲೈಟಿನಡಿಯೇ ಸಣ್ಣ ಗೂಡಂಗಡಿಯಲ್ಲಿ ನೀರು ದೋಸೆ ಮಾರುವವನಾತ.
ಯಾವಾಗಲೂ ಸಾಲುಗಟ್ಟಿ ನಿಂದು ನೀರು ದೋಸೆ ತಿಂದು ಟೀ ಕುಡಿದು ಹೋಗುವವರು ಇಂದೇಕೋ ಕಾಣುತ್ತಿಲ್ಲ. ಹಾಗಾಗಿ ಆತನ ಮುಖದಲ್ಲೂ ನಿರಾಸೆ.
ದೋಸೆಯಾತ ನಿದ್ದೆಗೆ ಜಾರುವಷ್ಟರಲ್ಲಿ ಬೈಕ್ ಹಾರ್ನ್. ನೋಡಿದರೆ ಬೈಕ್ ಮೇಲೆ ಥೇಟ್ ರಸ್ತೆಯಂತೇ ತೊಯ್ದು ಹೋದ ಯುವಕ.
ನೋಡಿದರೆ ಕಾಲ್ ಸೆಂಟರಿನವನೋ, ರಾತ್ರಿ ಬೀಟ್ ಮುಗಿಸಿ ಬರುವ ಪತ್ರಕರ್ತನೋ ಇರಬಹುದು.
೨೦ ಪ್ಲೇಟ್ ಪಾರ್ಸೆಲ್ ಮಾಡು ರೂಂಮೇಟ್‌ಗಳೂ ಹಸಿದಿರಬಹುದು...ಎಂದ ಬೈಕ್ ಸವಾರ.
ಖುಷಿಯಾಯ್ತು ದೋಸೆಯಾತನಿಗೆ.
ಸ್ಯಾಂಪಲ್ ಒಂದು ಕೊಡು, ಎಂದು ಒಂದು ಪ್ಲೇಟ್ ನೀರು ದೋಸೆ ತಿಂದ ಬೈಕ್‌ನವನು.
ಗಿರಾಕಿಯಿಲ್ಲದೆ ಎರೆದ ದೋಸೆ, ಉಳಿದ ಹಿಟ್ಟು ಹಾಳಾಗಿ ಹೋಗುತ್ತಿತ್ತು, ಈ ಮಹಾಮನುಷ್ಯ ಬಂದು ೨೦ ಪ್ಯಾಕ್ ಮಾಡು ಎಂದದ್ದು ದೋಸೆಯಾತನಿಗೆ ಹೊಸ ಉತ್ಸಾಹ ಮೂಡಿಸಿತು.
೨೦ ಪ್ಲೇಟ್ ಪಾರ್ಸೆಲ್ ಕೊಟ್ಟ.
ಬೈಕ್‌ನಾತ ನೋಟೊಂದನ್ನು ಚಾಚಿದ.
ದೋಸೆ ನಿಜಕ್ಕೂ ಚೆನ್ನಾಗಿದೆ...ಹಾಗಾಗಿ ಚಿಲ್ಲರೆ ಬೇಡ ಎಂದ...
ಹಾಗಾದರೆ ಇನ್ನೆರಡು ಬಿಸಿ ದೋಸೆ ಇಕೋ ಎಂದು ಪ್ಯಾಕ್ ಮಾಡಿಕೊಟ್ಟ ದೋಸೆಯಾತ...
ಇಬ್ಬರೂ ನಕ್ಕರು...
ಯಾವುದೋ ಜನ್ಮದ ಬಂಧುಗಳಂತೆ...
ಮಿಣಗುಡುತ್ತಿದ್ದ ಸೋಡಿಯಂ ವೇಪರ್‍ ಈಗ ಪ್ರಕಾಶಮಾನವಾಗಿ ಉರಿಯಿತು.
ಬೈಕ್ ಮುಂದಕ್ಕೋಡಿತು...ಮಳೆ ಸುರಿಯುತ್ತಲೇ ಇತ್ತು....


***************

ಅದು ಎಕ್ಸ್‌ಪ್ರೆಸ್ ಹೈವೇ...
ರಾಷ್ಟ್ರವನ್ನು ವಿಶ್ವದಲ್ಲೇ ಪ್ರಖ್ಯಾತಗೊಳಿಸಲು ಪಣತೊಟ್ಟವರಿಗೆ ತೊಂದರೆಯಾಗಬಾರದು, ಅವರು ಬೇಗಬೇಗನೆ ತಮ್ಮ ಗಮ್ಯ ಸೇರಬೇಕು ಎಂದು ನಿರ್ಮಿಸಿದ ಆರು ಪಥಗಳ ಹೆದ್ದಾರಿ.
ಮಿಂಚಿನಂತೆ ಕಣ್ಣು ಕೋರೈಸುವ ಹೆಡ್‌ಲೈಟ್‌ಗಳೊಂದಿಗೆ ವಾಹನಗಳು ಹರಿದಾಡುತ್ತಿವೆ. ರಸ್ತೆಗೆ ಅಡ್ಡ ಬರುವ ನಾಯಿಗಳಿಗೆ ಯಾವ ವಾಹನವೂ ಅಲ್ಲಿ ಬ್ರೇಕ್ ಹಾಕದು, ಅಪರೂಪಕ್ಕೊಮ್ಮೆ ಓಡುವ ಟೂ ವೀಲರ್‍ ಹೊರತು ಪಡಿಸಿ. ಹಾಗಾಗಿ ಆ ರಸ್ತೆಯನ್ನು ನಾಯಿಗಳು ಆತ್ಮಹತ್ಯಾ ತಾಣವಾಗಿ ಗುರುತಿಸಿಕೊಂಡಿದ್ದವು.
ಲೇಟ್‌ನೈಟ್ ಪಾರ್ಟಿ ಮುಗಿಸಿದ ತಂಡವೊಂದು ಯಾವುದೋ ಪಬ್ಬೊಂದರಿಂದ ಹೊರಬಿದ್ದಿದೆ, ಅವರ ಕಾರಿನ ನಾಗಾಲೋಟಕ್ಕೆ ಬೈಕೊಂದು ಸಿಕ್ಕಿ ಅದರಲ್ಲಿದ್ದ ಇಬ್ಬರು ವಿಲವಿಲನೆ ಒದ್ದಾಡುತ್ತಿದ್ದಾರೆ.
ಕಾರ್‌ನಿಂದ ಹೋ ಎಂಬ ಕೇಕೆ ಬಿಟ್ಟರೆ ಬೇರೇನೂ ಕೇಳಲಿಲ್ಲ. ಹಿಂದಿನಿಂದ ಬಂದ ಮರ್ಸಿಡೀಸ್‌ ಹಾಗೇ ಬ್ರೇಕ್ ಹಾಕಿತು. ಕಿಟಿಕಿ ಕೆಳಗೆ ಸರಿದು ಮುಖವೊಂದು ಇಣುಕಿದು. ರಸ್ತೆ ಮೇಲೆ ನರಳುತ್ತಿದ್ದ ವ್ಯಕ್ತಿ ದೈನ್ಯನಾಗಿ ನೋಡಿದ.
ಕಿಟಿಕಿ ಮತ್ತೆ ಮುಚ್ಚಿತು. ಮರ್ಸಿಡಿಸ್ ಮುಂದಕ್ಕೋಡಿತು.
ನರಳುತ್ತಿದ್ದವರಿಬ್ಬರು ನಿಧಾನವಾಗಿ ನಿಶ್ಚಲರಾಗುತ್ತಿದ್ದುದನ್ನು ರಸ್ತೆ ಮೀಡಿಯನ್‌ನಲ್ಲಿ ಮಲಗಿದ್ದ ನಾಯಿಯೊಂದು ಅಸಹಾಯಕತೆಯಿಂದ ನೋಡಿ ಬಾಲ ಅಲ್ಲಾಡಿಸಿತು.

25.7.08

ಒಂದು ಆತ್ಮಹತ್ಯೆ ಪ್ರಸಂಗ


ಆತ್ಮಹತ್ಯೆಯೇ ಲೇಸು....
ರಾತ್ರಿ ಇಡೀ ನಿದ್ದೆಯಿಲ್ಲದೆ ಮಗ್ಗುಲು ಬದಲಾಯಿಸಿ ಕಳೆದ ಆತ ಬೆಳಗ್ಗೆ ಕೋಳಿ ಕೂಗುವ ಹೊತ್ತಿಗೆ ಹಾಗೆಂದು ನಿರ್ಧರಿಸಿಯಾಗಿತ್ತು.
ಚಳಿಗಾಗಿ ಹೊದ್ದಿದ್ದ ಕಂಬಳಿ ಒಳಗೇ ಕಾಡುತ್ತಿದ್ದ ಯೋಚನೆಗಳು ಇರಿಯುವ ಈಟಿಯಂತೆ ಭಾಸವಾಗಿ ಬಲವಂತವಾಗಿಯೇ ಆತ ಎದ್ದು ಮನೆಯಿಂದ ಹೊರನಡೆದ.
ಬೆಳಕು ಹರಿದಿತ್ತು, ಪತ್ನಿ ಅಡುಗೆ ಕೋಣೆಯಿಂದ ಕೆಮ್ಮಿದಂತೆ ಕೇಳಿತು, ರೋಗಿಷ್ಟ ನಾಯಿ ಬಚ್ಚಲು ಮನೆಯ ಒಲೆಯ ಬೂದಿಯಲ್ಲಿ ಮೈಮರೆತು ಮಲಗಿತ್ತು, ಅಲ್ಲೊಮ್ಮೆ ದೃಷ್ಟಿ ಹಾಯಿಸಿದಾತ ಮನೆಯ ಮುಂದಿನ ಬೇಲಿ ದಾಟಿ ಸರಸರನೆ ಸಾಗಿದ.

ಮೈಲಿ ದೂರದಲ್ಲೇ ಭೋರ್ಗರೆಯುತ್ತಿದೆ ಸಮುದ್ರ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಅಬ್ಬರವಿದ್ದೂ ಇಲ್ಲದಂತೆ ಮಲಗಿದ ಹುಲಿಯಂತೆ ಅದು ಆತನಿಗೆ ಕಾಣಿಸಿತು. ಸಮುದ್ರ ತೀರದ ಎತ್ತರದ ಬಂಡೆಯೊಂದರ ಅಂಚಿನಲ್ಲಿ ಬಂದು ಕುಳಿತು ಬಿಟ್ಟ.
ಅಲ್ಲಿಂದ ಹಾರಿ ಸತ್ತವರು ಹಲವರು. ಅಂಚಿಗೆ ಯಾರೂ ಹೋಗಬಾರದು, ಅಪಾಯಕಾರಿ ಜಾಗ ಎಂಬ ಹಳೆಯ ಮಾಸಲು ಫಲಕ ತನ್ನನ್ನು ನೋಡಿ ಅಣಕಿಸಿದಂತಾಯಿತು.
ಏನಿದೆ ಬದುಕಲ್ಲಿ?
೪೦ ವರ್ಷದ ಬದುಕಿನ ಹೋರಾಟದಲ್ಲಿ ಸೋತು ಸುಣ್ಣವಾದವನು. ಗದ್ದೆ ಬೇಸಾಯ ಮಾಡಿ ಸುಖವಿಲ್ಲ ಎಂದು ಅಡಕೆ ಹಾಕಿ, ಆ ಮಣ್ಣಿಗೆ ಅಡಕೆ ಒಗ್ಗಿಕೊಳ್ಳದೆ ಪೀಚಾಗಿ ಹೋದದ್ದು, ಮಾಡಿದ ಸಾಲ ಮುಗಿಸಲಾಗದೆ ತೋಟದಿಂದ ಬರುವ ಅಲ್ಪಸ್ವಲ್ಪ ಆದಾಯವೆಲ್ಲ ಬಡ್ಡಿಗೇ ಹೋಗುವುದು, ಮನೆಯಲ್ಲಿ ಪತ್ನಿಯೂ ಏನಾದರೂ ಚುಚ್ಚಿ ಮಾತನಾಡುವುದು.....ಇಷ್ಟೆಲ್ಲದರ ಮಧ್ಯೆ ಈಗ ಕೈಗಾರಿಕಾ ವಲಯ ಯೋಜನೆ ಆತನಿಗೆ ಗರಬಡಿಸಿದೆ.
ಭೂಮಿ ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಊರಿನ ಮೇಷ್ಟರು ಹೇಳಿದ್ದಾಗಿದೆ. ಸಿಗುವ ಪರಿಹಾರದಲ್ಲಿ ಇನ್ನೊಂದು ತನಗೆ ಬೇಕಿರುವ ಭೂಮಿ ಖರೀದಿ ಆಗದ ಮಾತು.
ಇವೆಲ್ಲ ನೋಡಿಯೂ ಮನೆಯಲ್ಲಿ ಮುದುಕಿ ತಾಯಿ, ಪತ್ನಿ ಇಬ್ಬರೂ ಬೆದರಿಲ್ಲ. ಅದೇ ಆತನಿಗೆ ಒಗಟು. ಯೋಜನೆ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡವರೇ ಅವರು. ಆದರೂ ಅವರಿಗೆ ಇರುವ ಧೈರ್ಯ ತನಗೇಕಿಲ್ಲ ಅನಿಸುವುದಿದೆ. ಏನಿದ್ದರೂ ಸಾಯುವುದೇ ಲೇಸು ಎನ್ನುತ್ತಾ ಎದ್ದು ಸಮುದ್ರ ನೋಡಿದ.
ಒಂದು ವೇಳೆ ಹಾರಿದರೆ ಏನಾಗಬಹುದು. ಇದು ವರೆಗೆ ಹಾರಿದವರಲ್ಲಿ ಎಲ್ಲರೂ ಸತ್ತಿದ್ದಾರೆ ಅನ್ನೋದು ಅವನಿಗೆ ಗೊತ್ತು.
ಹಾರುವ ವೇಗ ಹೆಚ್ಚು ಕಡಮೆ ಆದರೆ ಕೆಳಗಿರುವ ಬಂಡೆಗೆ ತಲೆ ಬಡಿದು ಚೂರಾಗಬಹುದು, ಇಲ್ಲವಾದರೆ ನೇರ ಸಮುದ್ರದ ನೀರಿಗೇ ಬೀಳಬಹುದು, ತಿಮಿಂಗಿಲವೋ ಷಾರ್ಕ್ ಮೀನೋ ಇದ್ದರೆ ನೇರವಾಗಿ ಅವುಗಳ ಹೊಟ್ಟೆಗೇ. ಇಲ್ಲವಾದರೆ ಉಪ್ಪು ನೀರು ಪುಪ್ಪುಸ ಸೇರಿ ಉಸಿರುಗಟ್ಟುತ್ತದೆ. ಇವೆಲ್ಲ ಆಲೋಚಿಸುವಾಗ ಮೈ ಬೆವರಿತು, ಮತ್ತೆ ಹಿಂದೆ ಕುಳಿತ.
ಪ್ಚ್! ಇಷ್ಟೇ ಕಾರಣಕ್ಕೆ ಸಾಯುವುದೇಕೆ ಅನ್ನಿಸತೊಡಗಿತು. ಪಿರಿಪಿರಿ ಎಂದರೂ ಮಡದಿ ಪ್ರೀತಿಸುತ್ತಾಳೆ, ತಾಯಿ ಬೆಂಬಲವೂ ಇದೆ, ಪರಿಹಾರ ಸಿಕ್ಕ ಬಳಿಕ ದೂರ ಊರಲ್ಲಿ ಚಿ‌ಕ್ಕದಾದರೂ ಭೂಮಿ ಖರೀದಿಸಿ ಬದುಕುವುದು ಸಾಧ್ಯ ಅನ್ನಿಸಿತು.
ಸಮುದ್ರದತ್ತ ನೋಡುತ್ತಿದ್ದವನು ಈಗ ಸಮುದ್ರಕ್ಕೆ ಬೆನ್ನು ಹಾಕಿದ. ನೀಲಿ ಆಕಾಶ, ದೂರದ ಲೈಟ್ ಹೌಸ್, ಪಕ್ಕದ ದೇವಸ್ಥಾನದ ಗಂಟೆ ಸದ್ದು, ಈಗ ಎಲ್ಲವೂ ಸುಂದರವಾಗಿ ಕಾಣತೊಡಗಿತು.....
ಮೈ ಮರೆತಂತೆ ಆಯಿತು.....
ಕುಳಿತಿದ್ದ ಬಂಡೆ ತುಸು ಜರುಗಿದಂತಾಯಿತು....
ಮತ್ತೆ ಕತ್ತಲೆ.....ಬೆಳಕೇ ಕಾಣದತ್ತ ಪಯಣ ಮಾಡಿದಂತೆ.ಖುಷಿಯೂ ಇಲ್ಲದ ದುಃಖವೂ ಇಲ್ಲದ ಊರಿಗೆ ಹೋದಂತೆ...
Related Posts Plugin for WordPress, Blogger...