
ಮುಂಗಾರು ಮಳೆಗೆ
ಗುಡುಗು ಬೊಬ್ಬಿರಿದಾಗ
ಸಿಡಿಲು ಕೋರೈಸಿದಾಗ
ಭೂಗರ್ಭದಲ್ಲೊಂದು
ಸಂಚಲನ...
ಒಣಗಿ ಬಿದ್ದಿದ್ದ
ಬೀಜಕ್ಕೆ ಜೀವಾಂಕುರ...
ಒಡೆದ ಕವಚ, ಮೆಲ್ಲನೆ
ಹೊರಕ್ಕಿಣುಕಿದ
ಪುಟ್ಟ ಎರಡೆಲೆ
ಇಡೀ ಪ್ರಪಂಚದ
ಅಚ್ಚರಿಯಷ್ಟನ್ನೂ
ಕಣ್ಣಲ್ಲಿ ತುಂಬಿಕೊಂಡಂತೆ
ಗಿಡಕ್ಕೆ ಗೊತ್ತಿಲ್ಲ
ತಾನು ಮರದ
ಅಡಿಯಲ್ಲಿರುವೆ ಎಂದು
ಅಲ್ಲಿ ಸಾಕಷ್ಟು ನೆರಳಿದೆ
ಆದರೂ ಗಿಡಕ್ಕೆ
ಉಸಿರುಗಟ್ಟಬಹುದು
ಹಸಿರೆಲೆಗಳ
ರುಚಿನೋಡಬಯಸುವ
ದವಡೆಗಳಿಂದ
ರಕ್ಷಿಸಿಕೊಂಡು ಬೆಳೆಯಬೇಕಿದೆ
ತನಗೆ ಆಸರೆ ನೀಡಿರುವ
ಮರ ಒಣಗಿದಾಗಲೇ
ಗಿಡಕ್ಕೆ ಸರಿಯಾಗಿ
ದೇಶ ನೋಡುವ ಭಾಗ್ಯ!