
ಸಭೆ, ಕಾರ್ಯಾಗಾರ, ಸಮಾವೇಶ, ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಇವೆಲ್ಲಾ ಸಾಫ್ಟ್ ನ್ಯೂಸ್ ಆಗಿ ನಾವು ಪ್ರಕಟಿಸಬೇಕಾದ ವಿಷಯಗಳು ಪತ್ರಿಕೆಯಲ್ಲಿ...
ಇಂತಹ ಹೆಚ್ಚಿನ ಕಡೆಯೂ ವಿಚಾರಮಂಥನ ನಡೆಯುವಾಗ ವಿಚಾರಗಳ ಗಾಂಭೀರ್ಯ ಹೆಚ್ಚಿದಾಗಲೆಲ್ಲ ಸಭಿಕರು ತಲ್ಲೀನರಾಗುತ್ತಾ ‘ತಲೆದೂಗು’ವುದೂ ಉಂಟು...ಅದರಲ್ಲೂ ಬೆಳಗ್ಗೆ ಸಖತ್ ಉಪಾಹಾರ, ಮಧ್ಯಾಹ್ನ ಭೂರಿ ಭೋಜನವಿದ್ದರಂತೂ ಮುಗೀತುಕಥೆ..
ಮೊನ್ನೆ ಸುರತ್ಕಲ್ನ ಎನ್ಐಟಿಕೆ(ಹಿಂದಿನ ಕರ್ನಾಟಕ ರೀಜನಲ್ ಇಂಜಿನೀಯರಿಂಗ್ ಕಾಲೇಜ್)ಯಲ್ಲಿ ಸುವರ್ಣ ಮಹೋತ್ಸವ*ದ ಅಂಗವಾಗಿ ಹಳೆ ವಿದ್ಯಾರ್ಥಿಗಳ ಸಮಾವೇಶ ಏರ್ಪಾಡಾಗಿತ್ತು.
ಅತಿಥಿ ಗಣ್ಯರು ಬರುವಾಗ ಭಾರತೀಯ ಸಂಪ್ರದಾಯದಂತೆ ಒಂದು ಗಂಟೆ ತಡ. ಆ ಬಳಿಕ ಎನ್ಐಟಿಕೆಯ ಮಾಜಿ ಪ್ರಾಂಶುಪಾಲರು, ನಿರ್ದೇಶಕರನ್ನು ಗೌರವಿಸುವುದು, ಉಪಾನ್ಯಾಸಕರು, ಬೋಧಕೇತರ ಸಿಬ್ಬಂತಿಗಳನ್ನು ಗುಲಾಬಿ ಕೊಟ್ಟು ನೆನಪಿಸಿಕೊಳ್ಳುವ ಅರ್ಥಪೂರ್ಣ ಕಾರ್ಯಕ್ರಮ..
ಆ ಬಳಿಕ ಅತಿಥಿಗಳ ಭೀಕರ ಭಾಷಣಗಳು ಶುರುವಾದವು...ಈ ನಡುವೆ ಸೀಟ್ಗಳಲ್ಲಿ ಕೂತ ಅನೇಕರು ಹಿಂದಿನ ದಿನ ಸುಸ್ತಿನಿಂದಲೋ ಏನೋ ನಿಧಾನವಾಗಿ ತೂಕಡಿಸಲು ಶುರುವಿಟ್ಟುಕೊಂಡರು.
ಆದರೆ ಇವರ ಸುಖನಿದ್ದೆಗೆ ಭಂಗ ತರಲು ಆಯೋಜಕರು ಒಂದು ಸೂಪರ್ ತಂತ್ರವನ್ನು ಕಾರ್ಯರೂಪಕ್ಕೆ ಇಳಿಸಿದ್ದರು. ಕಾರ್ಯಕ್ರಮವನ್ನು ವೇದಿಕೆಯ ಇಕ್ಕೆಲಗಳಲ್ಲಿನ ದೊಡ್ಡ ಪರದೆಗಳಲ್ಲಿ ನೇರಪ್ರಸಾರ ಮಾಡಲಾಗುತ್ತಿತ್ತು.
ಮೂವರು ಕ್ಯಾಮೆರಾಮನ್ಗಳು ಶೂಟಿಂಗ್ ಮಾಡಿದ್ದು ನೇರವಾಗಿ ಬಿತ್ತರಗೊಳ್ಳುತ್ತಿತ್ತು.
ಇಲ್ಲೇ ಆಗಿದ್ದು ಎಡವಟ್ಟು. ನೋಡುವವರಿಗೆ ಚೆನ್ನಾಗಿ ಕಾರ್ಯಕ್ರಮಗಳು ಕಾಣಲೆಂದು ಮಾಡಿದ ವ್ಯವಸ್ಥೆ ನಿದ್ರಾಸಕ್ತರಿಗೆ ಕಿರಿಕ್ ಎನಿಸತೊಡಗಿತ್ತು. ಯಾಕೆಂದರೆ ಯಾರು ಕಣ್ಮುಚ್ಚಿ ದೇವೇಗೌಡರಂತೆ ದೇಶದ ಬಗ್ಗೆ ಕನಸು ಕಾಣುತ್ತಿದ್ದರೋ ಅವರ ಮೇಲೆ ಕ್ಯಾಮೆರಾಮನ್ನ ಗೃಧ್ರ ದೃಷ್ಟಿ ಬೀಳುತ್ತಿತ್ತು. ಅಂತಹವರ ಮೇಲೆಯೇ ಆತ ಕ್ಯಾಮೆರಾ ಲೆನ್ಸ್ ಝೂಮ್ ಮಾಡುತ್ತಿದ್ದ..ಅದನ್ನೇ ವಿಡಿಯೋ ಎಡಿಟಿಂಗ್ನವ ನೇರವಾಗಿ ದೊಡ್ಡ ಪರದೆಗೆ ಕಳುಹಿಸಿ ನಿದ್ದೆ ಮಾಡಿದವರ ಪಕ್ಕದಲ್ಲಿ ಕುಳಿತವರು ಪಕ್ಕೆಗೆ ತಿವಿದು ಎಬ್ಬಿಸುತ್ತಿದ್ದರು....
ತಾನೊಬ್ಬ ಇಡೀ ಕಾರ್ಯಕ್ರಮವನ್ನು ನಿಂತೆ ಶೂಟಿಂಗ್ ಮಾಡುವ ಶಿಕ್ಷೆಗೊಳಗಾದ ಕ್ಯಾಮೆರಾ ಮನ್ನ ಈಗ
ಒಳಗೊಳಗೇ ಮುಸಿಮುಸಿ ನಗುತ್ತಿದ್ದ. ನಿದ್ರಾಭಂಗವಾದವರು ಕಣ್ಣೊರಸಿ ಮತ್ತೆ ವೇದಿಕೆಯತ್ತ ಕಣ್ಣು ನಡುತ್ತಿದ್ದರು ಅಥವಾ ಪ್ರಯತ್ನ ಮಾಡುತ್ತಿದ್ದರು!
*ಇದೀಗ ಎನ್ಐಟಿಕೆ(national institute of technology, karnataka) ಸುವರ್ಣವರ್ಷಾಚರಣೆಯ ಸಂಭ್ರಮದಲ್ಲಿದೆ. ಆಚರಣೆಯ ಅನೇಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯುತ್ತಿವೆ...ಇದು ಕೇವಲ lighter readingಗಾಗಿ ಮಾತ್ರ