26.6.11

ಮಸಣದ ಗಾಳಿ

ಚಿತೆಯಲ್ಲಿ ಇನ್ನೂ ಆರದ
ಇಂಗಳದ ಧಗೆ..
ಅದರ ನಡುವೆ
ಕರಕಲಾದ ತಮ್ಮ
ದೇಹ ನೋಡಿದ
ಆತ್ಮಗಳ ಚೀರಾಟದಂತೆ
ಕೇಳಿ ಬರುತ್ತದೆ
ಮಸಣದ  ಮೂಲೆಯಿಂದ
ಗೂಬೆಯ ಧ್ವನಿ..

ಅದು ಕೇವಲ ಮಸಣವಲ್ಲ
ಆತ್ಮನಿವೇದನೆಯ ಬಿತ್ತರಿಗೆ.
ಒಂದೊಂದು ಆತ್ಮದ ಹಿಂದೆ
ಅದರದ್ದೇ ಆದ ಕಥೆ

ಕ್ಯಾನ್ಸರಾಗಿ ಸತ್ತ ರೋಗಿ,
ಸಕ್ಕರೆ ಕಾಯಿಲೆಯಿಂದ ಇನ್ನಿಲ್ಲವಾದ
ಭೋಗಿ.
ವರದಕ್ಷಿಣೆ ಬೆಂಕಿಯಲ್ಲಿ
ಸುಟ್ಟವಳು,
ಕೋಮುದಳ್ಳುರಿಯಲ್ಲಿ
ಕಣ್ಮುಚ್ಚಿದವನು..

ಒಂದೋ ಎರಡೋ...
ನೂರೆಂಟು ಆತ್ಮಗಳು
ಮತ್ತು
ಅಷ್ಟೇ ಕಾರಣಗಳು

ಯಾರಿಗೂ ಕೇಳಿಸದಂತೆ
ಅನುರಣಿಸುತ್ತದೆ
ವೇದನೆಯ ಚೀತ್ಕಾರ
ಬೀಸುತ್ತದೆ ಗಾಳಿ
ರೊಯ್ಯನೆ ಬಿದ್ದ ಎಲೆಗಳನೆತ್ತಿ
ಒಗೆಯುತ್ತದೆ
ಅಮಾವಾಸ್ಯೆ ರಾತ್ರಿಯ
ನೋವಿಗೆ, ಕಿವಿಯಾಗುತ್ತದೆ
ಸ್ಮಶಾನದ ಬಿಕ್ಕಳಿಕೆಯನ್ನು
ಸಂತೈಸುತ್ತದೆ..

photo courtesy Peter Bowers

8.6.11

ಪಾರಿಜಾತದ ಹೂಗಳು












ಚಂದ್ರ ಕಣ್‌ಬಿಡುವ ಹೊತ್ತಲ್ಲಿ
ನಕ್ಷತ್ರ ಮಿನುಗುವ ತೆರದಿ
ನಗುತ್ತವೆ ಪಾರಿಜಾತದ ಹೂಗಳು
ಕೃಷ್ಣ-ರುಕ್ಮಿಣಿಗೆ ದೇವಲೋಕದಿಂದ
ತಂದ ಮರದಲ್ಲಿ ಅರಳಿ ತಲೆದೂಗುವ
ಹೂಗಳವು, ಅಂತಿಂಥವಲ್ಲ...

ತಲೆತಿರುಗಿಸುವ
ಸುಗಂಧವಲ್ಲ, ಅಂತಹ ಹಮ್ಮು ಇಲ್ಲ
ಕಣ್ಕುಕ್ಕಿ ಬೆಡಗು ಮೆರೆಯುವುದಿಲ್ಲ
ತನ್ನ ಪಾಡಿಗೆ ಹೂಬಿಟ್ಟು 
ಮರುದಿನ ಬೆಳಕು ನೋಡುವ ಮುನ್ನ
ತೊಟ್ಟು ಕಳಚಿ
ಧರೆಯಲ್ಲಿ ಮಲಗಿರುತ್ತವೆ
ಪಾರಿಜಾತದ ಹೂಗಳು


ಬೊಗಸೆಯಲ್ಲಿ ಬಾಚಿ
ನೇವರಿಸಿದಾಗ
ಆವರಿಸಿಕೊಳ್ಳುತ್ತದೆ ನವಿರು
ಸುಗಂಧವದು ಆಪ್ಯಾಯಮಾನ


ತನ್ನ ತವರುಮನೆ-ದೇವಲೋಕದ
ಗುಂಗಿನಿಂದ ಇನ್ನೂ ಹೊರಬರದೆ
ರಾತ್ರಿಯೇ ಅರಳಿ ಹೊರಳಿ
ಇದ್ದುಬಿಡುವುದೇ ಇದರ ಜಾಯಮಾನ!
Related Posts Plugin for WordPress, Blogger...