12.1.09

ಕೃಷಿಯಲ್ಲೂ ‘ಸಫಲ’ರಾಗಬಹುದು!!!

ನಾನು ಕೃಷಿಕರ ಬಗ್ಗೆ ಬರೆಯಲು ಹೋದಾಗಲೆಲ್ಲ ಸಿಗುತ್ತಿದ್ದುದು ಪೇಲವ ಕಥೆಗಳೇ.
ಆದರೆ ಇತ್ತೀಚೆಗೆ ಮಿತ್ರರೊಬ್ಬರು ‘ಮೂಡುಬಿದಿರೆ ಸಮೀಪ ಅಡಕೆ ಕೃಷಿಕರೊಬ್ಬರಿದ್ದಾರೆ, ಕಡಮೆ ಬಂಡವಾಳದಲ್ಲಿ ಕೃಷಿ ಮಾಡ್ತಿದಾರೆ’ ಎಂದಿದ್ದು ಕುತೂಹಲಕ್ಕೆ ಕಾರಣವಾಯ್ತು.
ಹಾಗಾಗಿ ಒಂದು ಸಂಜೆ ಆ ಮಿತ್ರರೊಂದಿಗೇ ತೋಟ ನೋಡೇ ಬಿಡೋಣ ಎಂದು ಹೊರಟೆ. ಮೂಡುಬಿದಿರೆಗೆ ಮಂಗಳೂರಿಂದ ಹೋಗುವಾಗ ಬಡಗೆಡಪದವು ಎಂಬ ಊರು ಸಿಗುತ್ತದೆ. ಮಂಗಳೂರೆಲ್ಲಾ ಕಾಂಕ್ರೀಟು ನಗರಿಯಾಗುತ್ತಿದ್ದರೂ ಎಡಪದವು, ಗುರುಪುರ, ಮೂಡುಬಿದಿರೆ, ಕಿನ್ನಿಗೋಳಿ ಇಲ್ಲೆಲ್ಲಾ ಇನ್ನೂ ಹಸಿರಿದೆ, ತೋಟ, ಗದ್ದೆ ಇದೆ. ಎಷ್ಟು ದಿನ ಗೊತ್ತಿಲ್ಲ! ಮೂಡುಬಿದಿರೆ ಮೋಹನ ಆಳ್ವರ ಶೋಭಾವನದ ಹಿಂದಿನ ಬಸ್ ಸ್ಟಾಪಲ್ಲಿಳಿದು ಸಫಲಿಗರ ಮನೆ ಕೇಳಿದರೆ ಯಾರಾದರೂ ತೋರಿಸುತ್ತಾರೆ.

ಸಂಜೀವ ಸಫಲಿಗರು ಮೊದಲು ವಿದೇಶದಲ್ಲಿ ಉದ್ಯೋಗಿಯಾಗಿದ್ದವರು. ಊರಿಗೆ ಮರಳಿ ಕೃಷಿ ಮಾಡಬೇಕು ಎಂದು ನಿರ್ಧರಿಸಿದವರು. ಸುಮಾರು ೧೦ ವರ್ಷಗಳಿಂದ ಅವರಿಗೆ ಕೃಷಿಯಲ್ಲಿ ಪ್ರಯೋಗ ಮಾಡುವ ಹುಚ್ಚು. ಸಾವಯವ ಕೃಷಿ ಸಾಧಕ ಸುಭಾಷ್ ಪಾಳೆಕರ್‍ ಅವರ ಉಪನ್ಯಾಸ, ತರಬೇತಿ ಕಾರ್ಯಾಗಾರಗಳಿಗೆ ಸಫಲಿಗ ಭೇಟಿ ಕೊಟ್ಟಿದ್ದಾರೆ.

ಆದರೆ ಅನುಷ್ಠಾನ ಮಾಡುವಾಗ ತಮ್ಮದೇ ವಿಧಾನದಲ್ಲಿ ಸಾವಯವ ಕೃಷಿ ಕೈಗೊಂಡಿದ್ದಾರೆ.
ಸಫಲಿಗರ ತೋಟದಲ್ಲಿ ಅಳವಡಿಸಿದ ವಿಧಾನಗಳು ಮೂರು.
  • ಜೀವಾಮೃತದ ಬಳಕೆ
  • ನೀರಿನ ಮಿತವ್ಯಯ
  • ತೋಟದಲ್ಲಿ ನೈಸರ್ಗಿಕತೆಯ ಉಳಿಕೆ


ಆರಂಭದಲ್ಲಿ ತೋಟಕ್ಕೆ ಸ್ಪ್ರಿಂಕ್ಲರ್‍ ಹಾಕಿಸಿದ್ದವರು ಈಗ ಅದನ್ನು ತೆಗೆದಿದ್ದಾರೆ. ಅದಕ್ಕೆ ಕಾರಣವನ್ನೂ ವಿವರಿಸುತ್ತಾರೆ. ಸ್ಪ್ರಿಂಕ್ಲರ್‍ ನೀರು ಮಣ್ಣಿನ ಮೇಲ್ಪದರಕ್ಕೆ ಹೆಚ್ಚಾಗಿ ತೇವಗೊಳಿಸುತ್ತದೆ. ಆಗ ಅಡಕೆ ಮರದ ಬೇರುಗಳು ಮೇಲಕ್ಕೆ ಬಂದು ಹರಡಿಕೊಳ್ಳುತ್ತವೆ. ಇದರಿಂದಾಗಿ ಮೇಲ್ಪದರ ಒಣಗಿದ ಕೂಡಲೇ ಮರ ಕೂಡಾ ಒಣಗುತ್ತದೆ. ಇದಕ್ಕೆ ಪರ್ಯಾಯವಾಗಿ ಸಫಲಿಗರು ಕಂಡುಕೊಂಡದ್ದು ಬದುಗಳನ್ನು(ಓಳಿ).

ಬದುಗಳಲ್ಲಿ ಜೀವಾಮೃತ ಮಿಶ್ರಿತ ನೀರನ್ನು ಬಿಟ್ಟು ಬಿಡುತ್ತಾರೆ. ಅದು ತುಂಬಿದ ಕೂಡಲೇ ನೀರನ್ನು ಇನ್ನೊಂದು ಬದುವಿಗೆ ಹರಿಸುತ್ತಾರೆ. ಇದರಿಂದ ಬದುವಿನ ನೀರು ಆಳಕ್ಕಿಳಿಯುತ್ತದೆ, ನೀರು ಹುಡುಕುತ್ತಾ ಬೇರುಗಳು ಆಳಕ್ಕಿಳಿಯುತ್ತವೆ. ಆಗ ನೀರು ಸಿಗದಿದ್ದರೂ ಮರ ಬೇಗನೆ ಒಣಗುವುದಿಲ್ಲ. ಅಲ್ಲದೆ ಬೇರು ಆಳಕ್ಕೆ ಹೋಗುವ ಕಾರಣ ಮರ ಹೆಚ್ಚು ಫಲಕೊಡುತ್ತದೆ, ದೃಢವಾಗುತ್ತದೆ. ಈ ಕಾರಣಕ್ಕೆ ಸಫಲಿಗರು ತೋಟಕ್ಕೆ ನೀರು ಕೊಡುವುದು ೮-೯ ದಿನಕ್ಕೊಮ್ಮೆ.



ಸಫಲಿಗರ ತೋಟದಲ್ಲಿ ಕಳೆಗಿಡಗಳಿಗೂ ಒಂದು ಸ್ಥಾನವಿದೆ. ಅತೀ ತೊಂದರೆ ಕೊಡುವ ಕಳೆ ಬಿಟ್ಟರೆ ಉಳಿದದ್ದನ್ನು ಹಾಗೇ ಬಿಡುತ್ತಾರೆ. ಅಡಕೆ ಮರದ ಬುಡದಲ್ಲೇ ಕೆಲಮರಗಳು ಅಡಕೆ ಮೀರಿಸುವಂತೆ ಬೆಳೆದು ನಿಂತಿವೆ. ಕೆಲ ಅಡಕೆ ಮರದ ನಾಲ್ಕೂ ಸುತ್ತಲೂ ಉಪ್ಪಾಳಿಗೆಯ ಮರಗಳು. ಅಷ್ಟಾದರೂ ಅದು ಅಡಕೆ ಇಳುವರಿಗೆ ತೊಂದರೆಯಾಗಿಲ್ಲ. ಇದು ನನ್ನ ಪ್ರಯೋಗವಷ್ಟೇ ಇಲ್ಲಿವರೆಗೆ ಮರಗಳೇನೂ ಅಡಕೆ ಮರದ ಪಾಲನ್ನು ಕಬಳಿಸಿಲ್ಲ, ಹಾಗಾಗಿದ್ದರೆ ಇಳುವರಿ ಕಡಮೆಯಾಗಬೇಕಿತ್ತಲ್ವೇ? ಪ್ರಶ್ನಿಸುತ್ತಾರೆ ಸಫಲಿಗ.

ಈ ತೋಟಕ್ಕೆ ಸೊಪ್ಪು ಹಾಕುವುದಿಲ್ಲ, ಪದೇ ಪದೇ ನೀರು ಬೇಕಿಲ್ಲ, ಕೂಲಿಯವರ ಮೇಲಿನ ಅವಲಂಬನೆ ಅತ್ಯಲ್ಪ, ರಸಗೊಬ್ಬರ ಬೇಡ, ಹಾಗಾಗಿ ನನ್ನದು ಕನಿಷ್ಠ ಬಂಡವಾಳ, ಬರುವ ಆದಾಯದಿಂದ ಜೀವನ ಸಾಗಿಸಬಹುದು ಎನ್ನುವುದು ಅವರ ಪ್ರತಿಪಾದನೆ.


ಸಫಲಿಗರ ಸಾಧನೆ ಕಥೆ ಕೇಳುತ್ತಾ ಅವರ ತೋಟದ ತಾಜಾ ಸೀಯಾಳ ಕುಡಿಯುತ್ತಾ ಅವರ ಪಕ್ಕಾ ಕೃಷಿಕರ ಮನೆಯ ಅಂಗಳದಲ್ಲಿ ಓಡಾಡುವ ಆಡು, ಕೋಳಿ, ಕರುಗಳನ್ನು ನೋಡುತ್ತಾ ಇದ್ದರೆ ಇದೇ ಜೀವನ ಎಷ್ಟು ಹಿತ ಎನಿಸತೊಡಗಿತು.

9 comments:

sunaath said...

ಹೊಸ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುತ್ತಿರುವಿರಿ, ವೇಣು.
ನಿಮಗೆ ಧನ್ಯವಾದಗಳು.

Aravind GJ said...

ಹಳ್ಳಿಗಳ ಬಗ್ಗೆ ನಿರಾಶೆಯ ವಿಚಾರಗಳನ್ನೇ ಕೇಳುತ್ತಿರುವ ಈ ದಿನಗಳಲ್ಲಿ ನಿಮ್ಮ ಲೇಖನ ಚೇತೋಹಾರಿಯಾಗಿದೆ.

ಹರೀಶ ಮಾಂಬಾಡಿ said...

ಕೌತುಕಮಯ ವಿಚಾರ.. ಚೆನ್ನಾಗಿದೆ.

Srik said...

Appreciate your concern and blog-journalism! Thanks for introducing this to us. I wish him all the best, in the future endeavours too.

What we need is a strong collaboration of farmers, printing press and media to popularise organic farming and farming in general.

Educated farmers will give us healthy stuffs, your article reflects this fact.

Cheers,
Srik

lancyad said...

ಸ0ಜೀವ ಸಫಲಿಗರ ಕೃಷಿಯ ಬಗ್ಗ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು..ನಿಮ್ಮದು ಕೃಷಿ ಜೀವನ ಅಲ್ಲದಿದ್ದರೂ,ಕೃಷಿ ಖಾಳಜಿ ದೊಡ್ದದು...ಶುಭವಾಗಲಿ.....

ಬೆಂಗಳೂರು ರಘು said...

ಸ್ವಾಮಿ ತುಂಬಾ ಚೆನ್ನಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ ತೊಡಗಿರುವ ನಮ್ಮಂಥವರಿಗೆ ಹಾಗೂ ಮುಂದೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಆಸೆ ಇರುವ ನಮ್ಮಂಥವರಿಗೆ ಸಫಲಿಗರೆ ಆದರ್ಶ

sudheer kumar said...

ವೇಣು ಉತ್ತಮ ಮಾಹಿತಿ.ಕೃಷಿಕ ಕುಟುಂಬದಿಂದ ಬಂದ ನಾನು ಕೃಷಿಕರ ಕಷ್ಟ ನಷ್ಟ, ನೋವು ಅತಿ ಹತ್ತಿರದಿಂದ ನೋಡಿದವ.ಐಟಿ-ಬಿಟಿ ಯ ಈ ಕಾಲದಲ್ಲಿ ಯುವಕರಿಗೆ ಇಂತಹ ಲೇಖನ ಗಳು ತುಂಬಾ ಮಾರ್ಗದರ್ಶನ ನೀಡಲಿದೆ

ಚಿತ್ರಾ ಸಂತೋಷ್ said...

ಇಂಥ ಲೇಖನಗಳು ಬ್ಲಾಗನಲ್ಲಿ ಬರೋದು ತುಂಬಾ ಕಡಿಮೆ. ಓದಿ ಖುಷಿಯಾಯಿತು..ಒಳ್ಳೆ ಲೇಖನ. ಸಫಲಿಗರ ಕೃಷಿ ಕಾಳಜೀಗೆ ಧನ್ಯವಾದ ಹೇಳಲೇಬೇಕು.
-ಚಿತ್ರಾ

VENU VINOD said...

ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲ ಗೆಳೆಯರಿಗೆ ವಂದನೆ

Related Posts Plugin for WordPress, Blogger...