29.6.18

ಯಾಣಕ್ಕೆ ಮಳೆಗಾಲ ಸೈಕಲ್ ಸವಾರಿ

ಪ್ರಕೃತಿಯನ್ನು ವೀಕ್ಷಿಸುವುದಕ್ಕೆ ಆಪ್ತವಾದ ಕಾಲವೆಂದರೆ ಮಳೆಗಾಲ. ಹಾಗೆ ಮಳೆಯಲ್ಲಿ ತೊಯ್ಯುತ್ತಾ ಪ್ರಕೃತಿಯ ನಡುವೆ ಸಾಗುವುದಕ್ಕೆ ಪ್ರಕೃತಿಯ ಚೆಲುವು ಕಣ್ತುಂಬಿಕೊಳ್ಳುವುದಕ್ಕೆ ಸೂಕ್ತ ಚಾರಣ ಅಥವಾ ಸೈಕಲ್ ಟೂರ್.
ಇವೆರಡೂ ನನಗೆ ಆಪ್ತ. ಈ ಬಾರಿಯ ಸೈಕಲ್ ಟೂರಿಗೆ ಮಂಗಳೂರು ಬೈಸಿಕಲ್ ಕ್ಲಬ್ ಎಂಬಿಸಿಯ ನಾವು ಐವರು ಸಿದ್ಧರಾದೆವು. ಎಂಬಿಸಿಯ ಗಣೇಶ್ ನಾಯಕ್ ನಾವು ಹೋಗುವ ತಾಣ ಅದು ಯಾಣ ಎಂದು ನಿರ್ಧರಿಸಿಯಾಗಿತ್ತು. ಭಾನುವಾರದ ಒಂದೇ ರಜೆ ನಮ್ಮೆಲ್ಲರಿಗೆ. ಮಂಗಳೂರಿನಿಂದಲೇ ಸೈಕಲ್ ತುಳಿದು 230 ಕಿ.ಮೀ ದೂರದ ಯಾಣಕ್ಕೆ ಹೋಗಿ ಬರುವುದು ಒಂದು ದಿನದಲ್ಲಿ ಅಸಾಧ್ಯ. ಹಾಗಾಗಿ ಬೇರೆ ವಿಧಿಯಿಲ್ಲದೆ ಮೂರು ಕಾರುಗಳಲ್ಲಿ ನಮ್ಮ ಸೈಕಲ್ ಹೇರಿಕೊಂಡು ಹೊರಟೆವು.
ಕಾರೇರಿ ಸೈಕ್ಲಿಂಗ್ ಹೊರಟವರು!

ಇಂಥ ದೃಶ್ಯವೆಲ್ಲ ಸಿಟಿಯಲ್ಲೆಲ್ಲಿ !

ಯಾಣದ ದಾರಿಯಲ್ಲೊಂದು ನಖರಾ ಚಿತ್ರ

ಹಸಿರದಾರಿಯಲ್ಲಿ ಸವಾರಿ

ನಮ್ಮ ಟೀಂ

ಪೋಸಿಂಗ್





ಭೈರವೇಶ್ವರ ಶಿಖರದ ಮುಂದೆ


ಗಣೇಶ್ ನಾಯಕ್, ಚಿನ್ಮಯ ದೇಲಂಪಾಡಿ, ಹಿಮಾಚಲ ಪ್ರದೇಶ ಮೂಲದ ದಂತ ವೈದ್ಯ ಆಕಾಶ್ ಅಗ್ನಿಹೋತ್ರಿ, ಶ್ರೀಕಾಂತ್ ರಾಜ, ನಾನು ನಾವೈವರು ಸೈಕಲ್ ಸವಾರರಾದರೆ ಕಾಲೇಜು ಉಪನ್ಯಾಸಕ ಹರಿಪ್ರಸಾದ್ ಹಾಗೂ ಅವರ ಮಗಳು ಅಹನಾ-ಇದು ನಮ್ಮ ಈ ಟೂರಿನ ತಂಡ. ಹರಿಪ್ರಸಾದ್ ಮತ್ತು ಅಹನ ಸೈಕಲ್ ತರದೆ ಕೇವಲ ಪ್ರವಾಸದ ಮಜಾ ಅನುಭವಿಸಲು ಬಂದಿದ್ದರು, ಇನ್ನೊಂದರ್ಥದಲ್ಲಿ ನಮ್ಮ ಸೈಕಲ್ ಸವಾರಿಯ ಛಾಯಾಗ್ರಹಣ, ಜತೆಗೆ ಅಗತ್ಯ ನೆರವು ನೀಡುವ ಜವಾಬ್ದಾರಿಯನ್ನೂ ಅಲಿಖಿತ ನಿಯಮದಂತೆ ಬೆನ್ನೇರಿಸಿಕೊಂಡಿದ್ದರು.
ಮೊನ್ನೆ ಭಾನುವಾರ ಮಂಗಳೂರು ಮುಂಜಾನೆಯ ಜಡಿಮಳೆಗೆ ತೊಪ್ಪೆಯಾಗಿ ಮಲಗಿರುವಾಗಲೇ ನಮ್ಮ ಕಾರುಗಳು ಹೊರಟವು. ದಾರಿ ಮಧ್ಯೆ ಕುಂದಾಪುರದಲ್ಲಿ ಹೊಟ್ಟೆ ತುಂಬಿಸಿಕೊಂಡು ಸಾಂಗವಾಗಿ ಸಾಗಿ ಕುಮಟಾ ಸೇರಿದೆವು. ದಾರಿಯುದ್ದಕ್ಕೂ ಅಲ್ಲಲ್ಲಿ ಮಳೆ ನಮಗೆ ಹಾಯ್ ಹೇಳುತ್ತಲೇ ಇತ್ತು.
ಕುಮಟಾ ಪೇಟೆಯಲ್ಲೇ ನಮ್ಮ ಕಾರು ನಿಲ್ಲಿಸಿ, ಸೈಕ್ಲಿಂಗ್ ದಿರಿಸು ಧರಿಸುವಾಗ ಕುತೂಹಲಿ ಸ್ಥಳೀಯರು ನಮ್ಮ ವೇಷವನ್ನೂ, ನಮ್ಮ ಸೈಕಲ್ಗಳನ್ನೂ ಅಚ್ಚರಿಯಿಂದ ಗಮನಿಸಿದರು. ಅವರ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಹೊರಟೆವು.
ಯಾಣಕ್ಕೆ ಸ್ವಾಗತ
ಕುಮಟಾ ಸೇತುವೆ ದಾಟಿ, ಬಲಕ್ಕೆ ತಿರುಗಿ ಏರು ದಾರಿಯಲ್ಲಿ ಸಾಗುವಾಗ ಚಳಿಯೆಲ್ಲಾ ಬಿಟ್ಟು ವಾರ್ಮ್ ಅಪ್ ಆದಂತಾಯ್ತು. ನಾವು ನಮ್ಮ ಖುಷಿಗೆ ಹೊರಟಿದ್ದರೆ ದಾರಿಯಲ್ಲಿ ತಮ್ಮ ಕಾಯಕವನ್ನು ಮಾಡುವ ಮಹಿಳೆಯರು ಕಾಡಿನಿಂದ ಸೊಪ್ಪಿನ ಕಟ್ಟು ಹೊತ್ತು ಶಿಸ್ತಿನಲ್ಲಿ ನಡೆದು ಬರುತ್ತಿದ್ದರು. ದಾರಿಯುದ್ದಕ್ಕೂ ಮಳೆ ಸೃಷ್ಟಿಸಿದ ದೃಶ್ಯಕಾವ್ಯವನ್ನು ಸವಿಯಲು, ಕಣ್ತುಂಬಿಕೊಳ್ಳುವ ಜತೆಗೆ ಕ್ಯಾಮೆರಾದಲ್ಲಿ ದಾಖಲಿಸಲು ಸಾಕಷ್ಟು ಸಮಯ ನೀಡುತ್ತಾ ಮುಂದುವರಿದೆವು. ಮುರಕಲ್ಲಿನ ಪಾದೆ ಪ್ರದೇಶ, ಅಲ್ಲಿ ಅಲ್ಲಲ್ಲಿ ಉಂಟಾದ ಪಳ್ಳಗಳು(ಚಿಕ್ಕ ಗುಂಡಿ ತುಂಬ ಶುಭ್ರ ನೀರು), ಅಲ್ಲಲ್ಲಿ ಹಸಿರು ಹುಲ್ಲು ಹಿನ್ನೆಲೆಯಲ್ಲಿ ಕಾಡು ಇವುಗಳು ನೀಡುವ ಖುಷಿಯೇ ಬೇರೆ.
ಸೈಕಲ್ ಬಿಟ್ಟು ಕೈಕಾಲ್ ಬಳಕೆ
ಕುಮಟಾ-ಶಿರಸಿ ರಸ್ತೆಯಲ್ಲಿ ಸುಮಾರು 13 ಕಿ.ಮೀ ಚಲಿಸಿ, ಕತಗಾಲ, ಅಂತ್ರವಳ್ಳಿ ದಾಟಿ ಹೈವೇ ಬಿಟ್ಟು ಎಡಕ್ಕೆ ಹೊರಳಿದರೆ ದಟ್ಟಾರಣ್ಯ. ಅದರ ನಡುವೆ ನಮ್ಮ ನಿರೀಕ್ಷೆಯನ್ನೂ ಮೀರಿ ಉತ್ತಮ ರಸ್ತೆಯೇ ಇತ್ತು. ಐದು ಸೈಕಲ್ಲುಗಳು ಮುಂದೆ ಸಾಗುತ್ತಿದ್ದರೆ ನಮ್ಮ ಹಿಂದೆ ಅಥವಾ ಮುಂದೆ ಅಪ್ಪ-ಮಗಳು ಇದ್ದ ಕಾರು ಇತ್ತು. ಮಳೆಗಾಲವಾಗಿದ್ದರಿಂದಲೋ ಏನೋ ಯಾಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆಯೆನ್ನಬಹುದು. ಹಾಗಾಗಿ ರಸ್ತೆ ನಮಗೇ ಬರೆದುಕೊಟ್ಟಂತೆ ಆಗಿತ್ತು. ಅದಕ್ಕಾಗಿಯೇ ಗಣೇಶ್ ನಾಯಕ್ ನಮ್ಮೆಲ್ಲರನ್ನೂ ಬೇಕು ಬೇಕಾದಂತೆ ರಸ್ತೆಯಲ್ಲಿ ನಿಲ್ಲಿಸಿ, ಸವಾರಿ ಮಾಡಿಸಿ ಆಂಗಲ್ ಬದಲಾಯಿಸಿ ಫೊಟೊ ತೆಗೆದುಕೊಳ್ಳುತ್ತಲೇ ಇದ್ದರು!
ಕಾಡು, ಅಲ್ಲಲ್ಲಿ ಕಾಡಿನ ತೆಕ್ಕೆಗೆ ಹೊಂದಿಕೊಂಡಂತೆ ಗದ್ದೆ, ಹಳ್ಳಿ, ಮನೆಗಳು, ರಸ್ತೆ ಬದಿಯಲ್ಲಿ ಸಿಮೆಂಟಿಲ್ಲದೆ ತಾಳೆ ಎಲೆ, ಮಡಲು ಬಳಸಿ ಮಾಡಿದ ತಂಗುದಾಣಗಳು ಇವೆಲ್ಲವೂ ನಮ್ಮ ಸೋಜಿಗದ ಕಣ್ಣುಗಳಿಗೆ ಆಹಾರವಾದರೂ ಗ್ರಾಮಸ್ಥರ ಶಾಂತಿಯುತ ಆದರೆ ಒಡಲಲ್ಲಿರುವ ಅನೇಕ ನೋವುಗಳನ್ನು ಕಡೆಗಣಿಸುವಂತಿಲ್ಲ.
ಕಾಡು ದಾರಿ, ಜತೆಗೆ ಏರುದಾರಿ-ಇಳಿದಾರಿಯಾದರೂ ಮಳೆಗಾಲದ ತಣ್ಪಿನಿಂದಾಗಿ ಯಾವುದೇ ವಿಶೇಷ ಕಷ್ಟವನ್ನನುಭವಿಸದೆ ಯಾಣ ರಸ್ತೆ ಮುಗಿಯುವ ಕೊನೆಯ ಭಾಗ ಸೇರಿಕೊಂಡೆವು. ಅಲ್ಲೊಂದೇ ಒಂದು ಅಂಗಡಿಯಲ್ಲಿ ಚಹಾ ವಿರಾಮ, ಅಲ್ಲೇ ಬದಿಯಲ್ಲಿ ಸೈಕಲ್ಲನ್ನು ಭದ್ರವಾಗಿರಿಸಿ ಒಂದು ಕಿ.ಮೀ ಚಾರಣ.
ದಾರಿ ಪಕ್ಕದ ಸಣ್ಣ ತೊರೆ, ಜಲಪಾತದಲ್ಲಿ ಮತ್ತೊಂದಷ್ಟು ಫೊಟೊ ಶೂಟ್ ಆಗಿ ಮೇಲೇರುತ್ತಾ ಮೊದಲು ಸಿಕ್ಕಿದ್ದು ಗಣಪತಿ ದೇವಸ್ಥಾನ, ಎಡಗಡೆಯಲ್ಲಿ ವಿನೂತನ ರಚನೆಯ ಮೋಹಿನಿ ಶಿಖರವಾದರೆ ಮತ್ತೆ ಮೆಟ್ಟಿಲಲ್ಲಿ ಏರುತ್ತಾ ಹೋದರೆ ಅದು ತಲಪುವುದು ವಿಶಾಲವಾದ ಭೈರವೇಶ್ವರ ಶಿಖರದ ಬುಡಕ್ಕೆ. ಅಲ್ಲಿ ಮತ್ತೆ ಭೈರವೇಶ್ವರನ ಗುಡಿ ಶಿಲಾರಚನೆಯ ಬುಡದಲ್ಲೇ ಇದೆ.
ಭಸ್ಮಾಸುರ ಮೋಹಿನಿ ಪುರಾಣಕಥೆಯೊಂದಿಗೆ ಮಿಳಿತವಾಗಿ ಈ ಎರಡು ಬೃಹತ್ ಕಲ್ಲುಗಳಿಗೆ ಮೋಹಿನಿ ಶಿಖರ, ಭೈರವ ಶಿಖರ ಹೆಸರು ಬಂದಿದೆ. ಗಾತ್ರದಲ್ಲಿ ಎತ್ತರವಿರುವುದು ಭೈರವ ಶಿಖರ. ಮೋಹಿನಿ ಶಿಖರ 90 ಮೀಟರ್ ಎತ್ತರವಿದ್ದರೆ ಭೈರವೇಶ್ವರ ಶಿಲಾಶಿಖರ 120 ಮೀಟರ್ ಇದೆ. ಇವುಗಳಲ್ಲಿ ಅಲ್ಲಲ್ಲಿ ದೊಡ್ಡಜೇನುಹುಳುಗಳ ಗೂಡು ವಿಶೇಷ ಮೆರುಗು ನೀಡುತ್ತವೆ. ನಮ್ಮ ಸೈಕಲ್ ದಿರಿಸಿನ ಕಾರಣದಿಂದ ದೇವಸ್ಥಾನದೊಳಗೆ ಹೋಗದೆ ಹೊರಗಿನಿಂದಲೇ ನಮಿಸಿ ಮತ್ತೆ ಕೆಳಗಿಳಿದೆವು. ಅಷ್ಟರಲ್ಲಾಗಲೇ ಹೊಟ್ಟೆ ತಾಳ ಹಾಕಿದ್ದರಿಂದ ತಳಭಾಗದ ಪಾಕರ್ಿಂಗ್ ತಾಣದ ಚಹಾದಂಗಡಿಯಲ್ಲಿ ಪ್ಲೇಟ್ ಮ್ಯಾಗಿ ಹೊಟ್ಟೆಗಿಳಿಸಿ ಮತ್ತೆ ಸೈಕಲ್ ತುಳಿಯಲು ಶುರುವಿಟ್ಟರೆ ಮಧ್ಯಾಹ್ನ 2.30 ಸುಮಾರಿಗೆ ನಾವು ಕಾರು ನಿಲ್ಲಿಸಿದ ಕುಮಟಾದ ಪಾಂಡುರಂಗ ಹೊಟೇಲ್ ಆವರಣ ತಲಪಿದೆವು. ಮತ್ತೆ ವೇಷ ಪಲ್ಲಟಿಸಿ ಕಾರೇರಿದವರು ರಾತ್ರಿ ವೇಳೆಗೆ ಮರಳಿ ಮನೆಗೆ.
ಭೈರವೇಶ್ವರ ಶಿಖರ, ಅಂತರ್ಜಾಲ ಚಿತ್ರಕೃಪೆ
ಮೋಹಿನಿ ಶಿಖರ, ಅಂತರ್ಜಾಲ ಚಿತ್ರ ಕೃಪೆ

3 comments:

ಶಶೀ ಬೆಳ್ಳಾಯರು said...

ಯಾಣ ಅಪ್ರತಿಮ ಶಿಖರ ಸುಂದರಿ. ಕತಗಾಲದಿಂದ ನಡೆದೇ ಬೆಟ್ಟವೇರಿದ ನೆನಪುಗಳೂ ಹಸಿರು. ವರ್ಷಕ್ಕೊಮ್ಮೆಯಾದ್ರೂ ಭೈರವೇಶ್ವರನ ದರ್ಶನ ಮಾಡ್ದೇ ಇದ್ರೆ ಸಮಾಧಾನ ಸಿಗಲ್ಲ. ಅಂತದ್ರಲ್ಲಿ ನಿಮ್ ಸೈಕಲ್ ಸವಾರಿಯ ಮಳೆಹಾಡು ನನ್ನನ್ನು ತೋಯಿಸಿಬಿಟ್ಟಿವೆ, ಕಲ್ಪಿಸಿಕೊಂಡಷ್ಟೂ ಸೊಗಸು. ಗುರೂ... ನಿಮ್ಮ ಚಾರಣ, ಸೈಕಲ್ ಯಾತ್ರೆ ಮುಂದುವರೀಲಿ, ಜೈ ಹೋ...

sunaath said...

ಅದ್ಭುತ ಸಾಹಸ! ನಿಮ್ಮೊಂದಿಗೆ ಇರುವ ಪುಟ್ಟಿಯ ಸಾಹಸಕ್ಕೆ ಶಹಭಾಸ್ ಕೊಡಲೇ ಬೇಕು!

Anonymous said...


live public tv

Related Posts Plugin for WordPress, Blogger...